ಎಂಟಿಬಿ ನಾಗರಾಜ್ರನ್ನು ನಾಗರಹಾವಿಗೆ ಹೋಲಿಸಿ ಶರತ್ ಬಚ್ಚೇಗೌಡ ವಾಗ್ದಾಳಿ
ಬೆಂಗಳೂರು, ನ.23: ಎಂಟಿಬಿ ನಾಗರಾಜು ನಾಗರಹಾವು ಇದ್ದಂತೆ ಎನ್ನುವ ಮೂಲಕ ನಾಗರಾಜ್ರನ್ನು ಹಾವಿಗೆ ಹೋಲಿಕೆ ಮಾಡಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ವೇಳೆ ಮಾಧ್ಯಮದ ಜತೆ ಮಾತನಾಡಿದ ಅವರು, ಎರೆಹುಳು ಕಷ್ಟಪಟ್ಟು ಹುತ್ತ ಕಟ್ಟುತ್ತೆ. ಆದರೆ ನಾಗರಾಜನ ರೂಪದಲ್ಲಿ ಬಂದ ನಾಗರಹಾವು ಹುತ್ತ ಸೇರಿಕೊಳ್ಳುವಂತೆ ಎಂಟಿಬಿ ಸೇರಿಕೊಂಡು ನಮಗೆ ಜಾಗವಿಲ್ಲದಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ತು ಅಧಿವೇಶನ ನಡೆಯುತ್ತಿರುವ ಕಾರಣ ನನ್ನ ತಂದೆ ಬಚ್ಚೇಗೌಡರು ದಿಲ್ಲಿಯಲ್ಲಿದ್ದು, ನನ್ನ ಪರವಾಗಿ ಪ್ರಚಾರಕ್ಕೆ ಬರುವುದಿಲ್ಲ. ಬಿಜೆಪಿ ಪರ ಪ್ರಚಾರ ಮಾಡ್ತಾರಾ ಅಂತಾನು ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದರು.
ಎಂಟಿಬಿ ನಾಗರಾಜ್ ಕ್ಷೇತ್ರದ ಮತದಾರರನ್ನು ಕೇಳದೆ ಪಕ್ಷಾಂತರ ಮಾಡಿದ್ದಾರೆ. ಆ ಮೂಲಕ ಮತ ನೀಡಿದವರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಮತದಾರರಲ್ಲಿ ಸ್ವಾಭಿಮಾನದ ಪ್ರಶ್ನೆ ಎದ್ದಿದೆ. 92 ಸಾವಿರ ಮತ ಹಾಕಿ ನಾವು ಬಿಜೆಪಿಯನ್ನು ಕಟ್ಟಿದ್ದೆವು. ಆದರೆ, ನಮ್ಮ ಅಭಿಪ್ರಾಯ ಪಡೆಯದೆ ಬಿಜೆಪಿಗೆ ನುಗ್ಗಿ, ನಮಗೆ ಒಂದು ಅವಕಾಶ ಮಾಡಿಕೊಟ್ಟಿಲ್ಲ ಎಂಬ ಅಸಮಾಧಾನ ಬಿಜೆಪಿ ಅಭಿಮಾನಿಗಳಲ್ಲಿ ಮೂಡಿದೆ. ಬಿಜೆಪಿಯಲ್ಲಿ ಇರುವವರೆಲ್ಲಾ ಸ್ವಾಭಿಮಾನಿಗಳಾಗಿದ್ದಾರೆ. ಶರತ್ ಬಚ್ಚೇಗೌಡ ಒಬ್ಬನೇ ಸ್ವಾಭಿಮಾನಿಯಲ್ಲ. ಕ್ಷೇತ್ರದಲ್ಲಿರುವ 2.5 ಲಕ್ಷ ಮತದಾರರು ಸ್ವಾಭಿಮಾನಿಗಳಾಗಿದ್ದಾರೆ ಎಂದು ಹೇಳಿದರು.