ನೀರಾವರಿ ಹಗರಣದ 9 ಕೇಸ್ ಮುಚ್ಚಿಹಾಕಿದ್ದನ್ನು ಪ್ರಶ್ನಿಸಿ ಸೇನಾ, ಎನ್ಸಿಪಿ, ಕಾಂಗ್ರೆಸ್ ಸುಪ್ರೀಂಗೆ ಮೊರೆ
ಮುಂಬೈ/ಹೊಸದಿಲ್ಲಿ, ನ.26: ದೇವೇಂದ್ರ ಫಡ್ನವಿಸ್ ನೇತೃತ್ವದ ಮಹಾರಾಷ್ಟ್ರ ಸರಕಾರದಲ್ಲಿ ಶನಿವಾರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಪಕ್ಷ ನಿಷ್ಠೆಯನ್ನು ಬದಲಿಸಿದ್ದ ಎನ್ಸಿಪಿ ನಾಯಕ ಅಜಿತ್ ಪವಾರ್ ಭಾಗಿಯಾಗಿರುವ ನೀರಾವರಿ ಹಗರಣಕ್ಕೆ ಸಂಬಂಧಿಸಿದ 9 ಕೇಸ್ಗಳನ್ನು ಮುಚ್ಚಿಹಾಕಿರುವ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ಸಿಪಿ) ಹಾಗೂ ಕಾಂಗ್ರೆಸ್ ಸುಪ್ರೀಂಕೋರ್ಟ್ ನ ಮೊರೆ ಹೋಗಿವೆ.
24 ಗಂಟೆಯೊಳಗೆ ಬಹುಮತ ಯಾಚಿಸುವಂತೆ ಆದೇಶಿಸಬೇಕು ಹಾಗೂ ರಾಜ್ಯ ಸರಕಾರ ರಾಜ್ಯ ಅಸೆಂಬ್ಲಿಯಲ್ಲಿ ಬಹುಮತ ಸಾಬೀತುಪಡಿಸುವ ತನಕ ಯಾವುದೇ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಆದೇಶಿಸಬೇಕೆಂದು ಮೂರು ಪಕ್ಷಗಳು ಸುಪ್ರೀಂಕೋರ್ಟ್ಗೆ ಮನವಿ ಮಾಡಿವೆ.
ಬಿಜೆಪಿ ಸರಕಾರ ರಾತೋರಾತ್ರಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಅಂತಿಮ ತೀರ್ಪು ಮಂಗಳವಾರ ಹೊರಬೀಳುವ ಮೊದಲೇ ಮೂರು ಪಕ್ಷಗಳ ಮಹಾರಾಷ್ಟ್ರ ವಿಕಾಸ್ ಅಘಾಡಿ ಮೈತ್ರಿಕೂಟ ಉಚ್ಚನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.