ನನ್ನ ಸರಕಾರ ಕೆಡವಲು ಸಹಾಯ ಮಾಡಿದ್ದ ಫಡ್ನವಿಸ್‌ ಗೆ ಕಾಲವೇ ಉತ್ತರ ನೀಡಿತು: ಕುಮಾರಸ್ವಾಮಿ

Update: 2019-11-26 18:25 GMT

ಬೆಂಗಳೂರು, ನ.26: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆಯಂತೆ ಬಿ.ಎಸ್.ಯಡಿಯೂರಪ್ಪ ಸಹ ಪ್ರತಿಫಲ ಉಣ್ಣುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ಈ ಕುರಿತು ಟ್ವಿಟ್ ಮಾಡಿರುವ ಅವರು, ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ತಿಳಿದು ಬೇಸರವಾಯಿತು. ಹಾಗೆ ನೋಡಿದರೆ ಅವರ ಪದತ್ಯಾಗ ನನಗೆ ಖುಷಿ ಕೊಡಬೇಕಿತ್ತು. ಏಕೆಂದರೆ ನನ್ನ ಸರಕಾರ ಕೆಡವಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು ಅವರೇ ಅಲ್ಲವೆ. ಅನರ್ಹರಿಗೆ ಆತಿಥ್ಯ ಕೊಟ್ಟವರೂ ಅವರೆ. ಈಗ ಅವರಿಗೆ ಕಾಲ ಎಂಥ ಉತ್ತರ ಕೊಟ್ಟಿತು ಎಂದು ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ.

ಮಾಡಿದ್ದುಣ್ಣೊ ಮಹರಾಯ ಎಂಬುದು ಲೋಕಾರೂಢಿ. ಮಾಡಿದ್ದರ ಪ್ರತಿಫಲವನ್ನು ಫಡ್ನವೀಸ್ ಉಣ್ಣುತ್ತಿದ್ದಾರೆ. ಮುಂದೆ ಬಿಎಸ್ ವೈ ಕೂಡ ಉಣ್ಣುತ್ತಾರೆ ಎಂದಿರುವ ಅವರು, ಕಾಲಚಕ್ರಕ್ಕೆ ಸಿಲುಕಿ ನಲುಗಿದ್ದಾರೆ. ಅಧಿಕಾರ ದಾಹಿ ಬಿಜೆಪಿ ತನ್ನ ಕೃತ್ಯಗಳಿಗೆ ತಾನೇ ಬೆಲೆ ತೆರುತ್ತಿದೆ. ಅಧಿಕಾರದ ಹಪಾಹಪಿ, ಸರಕಾರಗಳನ್ನು ಕೆಡವುವುದು, ಚುನಾವಣೆ ತರುವುದನ್ನು ಬಿಜೆಪಿ ಇನ್ನಾದರೂ ಬಿಡಲಿ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News