ನಾನು ಜ್ಯೋತಿಶಿಯಲ್ಲ, ಭವಿಷ್ಯ ನುಡಿಯಲ್ಲ: ಮಾಜಿ ಸಚಿವ ಡಿಕೆಶಿ

Update: 2019-11-27 18:22 GMT

ಮೈಸೂರು,ನ.27: ನಾನು ಜ್ಯೋತಿಶಿಯಲ್ಲ, ನಾನೊಬ್ಬ ಆಶಾವಾದಿ. ನಾನು ಭವಿಷ್ಯ ನುಡಿಯಲ್ಲ, ರಾಜ್ಯಕ್ಕೆ ಒಳ್ಳೆಯದಾಗಲಿ ಅಂತ ಬಯಸುತ್ತೇನೆ ಎಂದು ರಾಜ್ಯ ರಾಜಕಾರಣದ ಬಗ್ಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಇಂದು ಮೈಸೂರಿಗೆ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಕಷ್ಟ ಕಾಲದಲ್ಲಿದ್ದಾಗ ವಕೀಲರಲ್ಲಿ ಮೊದಲು ದನಿ ಎತ್ತಿದವರು ಮೈಸೂರು ವಕೀಲರ ಸಂಘ. ಇದನ್ನು ನಾನು ಎಂದೂ ಮರೆಯುವುದಿಲ್ಲ. ಕಾಲ ಮತ್ತು ನ್ಯಾಯ ಸಮಾಜಕ್ಕೆ ಉತ್ತರ ಕೊಡಲಿದೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಬೇಕು. ನಾವೇ ಮಾಡಿದ ಕಾನೂನಿಗೆ ಗೌರವ ಕೊಡಬೇಕು. ನಾನು ಆರೋಪಗಳಿಗೆ ಹೆದರಿದವನಲ್ಲ. ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಇಲ್ಲಿಗೆ ಬಂದಿದ್ದೇನೆ. ನಿಮಗೆ ಆದ ತೊಂದರೆ ಎಂದು ನನ್ನ ಪರ ಹೋರಾಟ ಮಾಡಿದ್ದೀರಿ. ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನಾನು ಜೈಲಿನಲ್ಲಿದ್ದಾಗ ನನ್ನ ಸ್ವಕ್ಷೇತ್ರ ರಾಮನಗರ, ಕನಕಪುರದಲ್ಲಿ ನನ್ನ ಪರವಾಗಿ ನಡೆದ ಪ್ರತಿಭಟನೆಗಿಂತ ಮೈಸೂರಿನಲ್ಲಿ ನಡೆದ ಪ್ರತಿಭಟನೆ ವಿಶೇಷವಾದದ್ದು. ನನ್ನ ಕಷ್ಟ ಕಾಲದಲ್ಲಿ ಮೈಸೂರಿನ ವಕೀಲರು ನನ್ನ ಪರ ನಿಂತರು. ಇದಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಇದನ್ನು ನಾನು ಸಾಯುವವರೆಗೂ ಮರೆಯುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ನಾನು ಜೋತಿಷ್ಯಗಾರನಲ್ಲ, ನಾನೊಬ್ಬ ಆಶಾವಾದಿ. ಸರ್ಕಾರದ ಅವಧಿ ಚುನಾವಣೆ ಬಗ್ಗೆ ಹಲವು ನಾಯಕರು ಮಾತನಾಡೋದನ್ನು ನೋಡಿದ್ದೇನೆ. ನಾನು ಭವಿಷ್ಯ ನುಡಿಯಲ್ಲ. ರಾಜ್ಯಕ್ಕೆ ಒಳ್ಳೆಯದಾಗಲಿ ಅಂತ ಬಯಸುತ್ತೇನೆ. ಸ್ವಾರ್ಥ ಬಿಟ್ಟು ರಾಜ್ಯದ ವಿಚಾರದಲ್ಲಿ ಚಿಂತನೆ ಆಗಬೇಕು. ರಾಜ್ಯಕ್ಕೆ ಗೌರವ ಸಿಗಬೇಕು, ಸಂವಿಧಾನಕ್ಕೆ ಗೌರವ ಸಿಗಬೇಕು. ರಾಜಕಾರಣಿಗಳಿಗೂ ಗೌರವ ಸಿಗಬೇಕು. ಇತ್ತೀಚೆಗೆ ರಾಜಕಾರಣಿಗಳಿಗೆ ಗೌರವ ಸಿಗುತ್ತಿಲ್ಲ. ಅದು ಸಿಗಲಿ ಅಂತ ಬಯಸುತ್ತೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News