ಸಿದ್ದರಾಮಯ್ಯರ ಬಳಿ ಹಣದ ಹುಂಡಿಯೇ ಇದೆ: ಅನರ್ಹ ಶಾಸಕ ಬಿ.ಸಿ.ಪಾಟೀಲ್

Update: 2019-11-28 12:52 GMT

ಹಾವೇರಿ, ನ. 28: ಸಿದ್ದರಾಮಯ್ಯ ಬಳಿ ಹಣದ ಹುಂಡಿಯೇ ಇದೆ. ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ಮಂಪರು ಪರೀಕ್ಷೆ ನಡೆಸಿದರೆ ಸಿದ್ದರಾಮಯ್ಯರ ಹುಂಡಿ ರಹಸ್ಯ ಬಯಲಾಗಲಿದೆ ಎಂದು ಹೀರೆಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.

ಗುರುವಾರ ಜಿಲ್ಲೆಯ ಹಿರೇಕೆರೂರು ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾವು ಸಿದ್ದರಾಮಯ್ಯರ ಬೆನ್ನಿಗೆ ಚೂರಿ ಹಾಕಲಿಲ್ಲ. ಬದಲಿಗೆ ಅವರೆ ನಮ್ಮ ಎದೆಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಆಡುತ್ತಿರುವ ಆಟ ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣವಾಗಲಿದೆ. ಶಾಸಕರು ಮಾರಾಟವಾಗಿದ್ದಾರೆಂದು ಪದೇ ಪದೇ ಆರೋಪಿಸುವ ಸಿದ್ದರಾಮಯ್ಯ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್‌ಗೆ ಹೋದಾಗ ಎಷ್ಟು ಮೊತ್ತಕ್ಕೆ ಮಾರಾಟ ಆಗಿದ್ದರು ಎಂದು ಬಿ.ಸಿ.ಪಾಟೀಲ್ ಪ್ರಶ್ನಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡಿದ್ದರು. ನೀವೇನು ಸತ್ಯಹರಿಶ್ಚಂದ್ರರಲ್ಲ. ಸಿದ್ದರಾಮಯ್ಯ ಬಳಿ ಹಣವಿಲ್ಲ ಅವರ ಬಳಿ ಹುಂಡಿಯಿದೆ ಎಂದು ಪುನರುಚ್ಚರಿಸಿದ ಪಾಟೀಲ್, ನನಗೆ ಸಚಿವ ಸ್ಥಾನದ ಭರವಸೆ ನೀಡಿ ವಂಚಿಸಲಾಯಿತು ಎಂದು ಟೀಕಿಸಿದರು.

ನಾಲ್ವರು ಕುರುಬ ಸಮುದಾಯದ ಶಾಸಕರನ್ನು ಅನರ್ಹಗೊಳಿಸಿದ ಸಿದ್ದರಾಮಯ್ಯ ನನ್ನ ಬಗ್ಗೆ ಮನಸೋ ಇಚ್ಛೆ ಮಾತನಾಡುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದ ಬಿ.ಸಿ.ಪಾಟೀಲ್, ಹಿರೇಕೆರೂರು ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News