ಓ ಮೆಣಸೇ ...

Update: 2019-12-01 18:29 GMT

*ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ - ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ
  ಕುದುರೆ ಎಂದು ಕೊಟ್ಟದ್ದು ಕತ್ತೆಯನ್ನಂತೆ.

---------------------

ತಂತ್ರಜ್ಞಾನವನ್ನು ವಿವೇಚನಾ ರಹಿತರಾಗಿ ಬಳಸದೆ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಬೇಕು - ರಾಘವೇಶ್ವರಸ್ವಾಮೀಜಿ, ರಾಮಚಂದ್ರಾಪುರ ಮಠ

 ಯಾರ ಅನುಕೂಲಕ್ಕೆ ತಕ್ಕಂತೆ?

--------------------

ಅಸ್ಪಶ್ಯತೆ ವಿರುದ್ಧ ಅಂಬೇಡ್ಕರ್ ಹೋರಾಟ ನಡೆಸುತ್ತಿದ್ದ ಕಾಲದಲ್ಲಿ ಸಂಘ ಪರಿವಾರವೂ ಆ ಕೆಲಸ ಮಾಡುತ್ತಿತ್ತು - ಬಿ.ಎಲ್. ಸಂತೋಷ್, ಬಿಜೆಪಿ ನಾಯಕ  

ಹೌದು, ಅಂಬೇಡ್ಕರ್ ಹೋರಾಟದ ವಿರುದ್ಧ.

---------------------

ಗೂಂಡಾಗಿರಿ ಮಾಡುವವರನ್ನು ಎಲ್ಲಿಡಬೇಕು, ಹೇಗಿಡಬೇಕು ಎಂಬುದು ನನಗೆ ಗೊತ್ತಿದೆ
- ಯಡಿಯೂರಪ್ಪ, ಮುಖ್ಯಮಂತ್ರಿ
ಸದ್ಯಕ್ಕೆ ಅವರನ್ನೆಲ್ಲ ಸಚಿವ ಸಂಪುಟದಲ್ಲೇ ಇಟ್ಟಂತಿದೆ.

---------------------

 ನನ್ನ ರಾಜಕೀಯ ಪ್ರವೇಶ ಆಕಸ್ಮಿಕ - ನರೇಂದ್ರ ಮೋದಿ, ಪ್ರಧಾನಿ
ಆ ಆಕಸ್ಮಿಕಕ್ಕೆ ದೇಶ ಕೊಟ್ಟ ಬೆಲೆ ಮಾತ್ರ ಭಾರೀ ದೊಡ್ಡದು.

---------------------

ನಾನು ಸರಕಾರ ಕಾಪಾಡುತ್ತೇನೆ ಎಂದು ಹೇಳಿದ್ದೆ, ಯಾವ ಸರಕಾರ ಎಂದು ಹೇಳಿಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 ಬಹುಶಃ ಅಮೆರಿಕದ ಸರಕಾರ ಇರಬಹುದೋ?

---------------------

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊಗಳಿದರೆ ನನಗೆ ಯಾವ ರಾಜಕೀಯ ಲಾಭವೂ ಇಲ್ಲ - ಎಚ್.ವಿಶ್ವನಾಥ್, ಮಾಜಿ ಶಾಸಕ

ಅಮಿತ್ ಶಾರನ್ನೊಮ್ಮೆ ಹೊಗಳಿ ನೋಡಿ.

---------------------

15 ಅನರ್ಹ ಶಾಸಕರು ಕರ್ನಾಟಕದ ಮುತ್ತುಗಳು
- ನಳಿನ್ ಕುಮಾರ್ ಕಟೀಲು, ಸಂಸದ
ಯಾವಳು ಕೊಟ್ಟ ಮುತ್ತುಗಳು ಎನ್ನುವುದನ್ನೂ ಹೇಳಿ.

---------------------

ಉಪಚುನಾವಣೆ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತಷ್ಟು ಗಟ್ಟಿಯಾಗಲಿದ್ದಾರೆ -ಬಸನಗೌಡ ಪಾಟೀಲ್, ಶಾಸಕ
ಹೊಡೆತ ತಾಳಿಕೊಳ್ಳಬೇಕಾದರೆ ಗಟ್ಟಿಯಾಗಲೇ ಬೇಕು.

---------------------
 
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ರಾಜ್ಯ ಕಾಂಗ್ರೆಸ್‌ನಲ್ಲಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತಿದ್ದಾರೆ - ಶೋಭಾ ಕರಂದ್ಲಾಜೆ, ಸಂಸದೆ
  
ಉಪಾಧ್ಯಾಯರೇ ಇಲ್ಲದ ಶಾಲೆಗಿಂತ ವಾಸಿ.

---------------------
  
ಸಂವಿಧಾನ ದಿನದ ಇಂದು(ನ.26) ಡಾ.ಬಿ.ಆರ್. ಅಂಬೇಡ್ಕರ್ ಬದುಕಿದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು - ನರೇಂದ್ರ ಮೋದಿ, ಪ್ರಧಾನಿ
  ಅರ್ಬನ್ ನಕ್ಸಲ್ ಎಂದು ಜೈಲು ಸೇರುತ್ತಿದ್ದರೇನೊ

---------------------

ಉಪಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದರೆ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಚಿನ್ನದ ಉಂಗುರ ತೊಡಿಸಿ ಮೆರವಣಿಗೆ ಮಾಡಿಸುತ್ತೇನೆ - ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ
ಯಡಿಯೂರಪ್ಪ ಸೋಲುವುದನ್ನು ನೋಡಲು ಅಷ್ಟೊಂದು ಆತುರವೇ?

---------------------

ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ದೇಶ ಮುಂದುವರಿಯಲು ಮುಸ್ಲಿಮರು ಪೂರ್ಣಮನಸ್ಸಿನಿಂದ ಬೆಂಬಲ ನೀಡಬೇಕು - ರೋಷನ್ ಬೇಗ್, ಅನರ್ಹ ಶಾಸಕ   
ಅನರ್ಹ ಶಾಸಕನ ಮಾತುಗಳು ಆಲಿಸುವುದಕ್ಕೆ ಸದಾ ಅನರ್ಹವಾಗಿಯೇ ಇರುತ್ತದೆ.

---------------------
  
ಶ್ರೀಲಂಕಾವು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ - ಗೋತಬಯ, ಶ್ರೀಲಂಕಾ ಅಧ್ಯಕ್ಷ  
ಚೀನಾದ ಹಿತಾಸಕ್ತಿಗೆ ನೀವು ಹೇಗೆ ನಡೆದುಕೊಳ್ಳುತ್ತೀರಿ ಎನ್ನುವುದನ್ನೂ ಸ್ಪಷ್ಟಪಡಿಸಿ.

---------------------
  
ಮಹಾರಾಷ್ಟ್ರ ಸರಕಾರದ ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಮೈತ್ರಿ ಅಕ್ರಮ ಸಂಬಂಧದಂತೆ - ಕೆ.ಎಸ್. ಈಶ್ವರಪ್ಪ, ಸಚಿವ
ಅನರ್ಹ ಶಾಸಕರ ಜೊತೆಗಿನ ನಿಮ್ಮ ಸಂಬಂಧ?

---------------------

30 ವರ್ಷಗಳಿಂದ ಗೆಳೆಯರಾಗಿದ್ದವರು ನನ್ನನ್ನು ನಂಬಲಿಲ್ಲ, 30 ವರ್ಷಗಳಿಂದ ನಾವು ಯಾರ ವಿರುದ್ಧ ಹೋರಾಡಿದ್ದೆವೋ ಅವರು ನನ್ನನ್ನು ನಂಬಿದರು
- ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ಆ ನಂಬಿಕೆಗೆ ಅವರು ಶೀಘ್ರವೇ ದುಬಾರಿ ಶುಲ್ಕ ನೀಡಬೇಕಾಗುತ್ತದೆ.

---------------------

ರ್ನಾಟಕದ 17 ಶಾಸಕರ ರಾಜೀನಾಮೆಯ ಹಿಂದೆ ನನ್ನ ಪಾತ್ರವೂ ಇದೆ - ಎಸ್.ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿ
  ಅಳಿಯನ ಸಾವಿನ ಹಿಂದಿರುವ ಪಾತ್ರಗಳ ತನಿಖೆ ಅಗತ್ಯವಿಲ್ಲವೆ?

---------------------

ಅನರ್ಹರು ತಾವು ಅರ್ಹ ಎಂದು ಭಾವಿಸುವುದಾದರೆ ಅವರ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ - ರಮೇಶ್ ಕುಮಾರ್, ಮಾಜಿ ಸ್ಪೀಕರ್ 
ಮಾನಸಿಕ ಆರೋಗ್ಯ ಸರಿ ಇದ್ದರೆ ಅವರು ಅನರ್ಹರಾಗುತ್ತಿರಲಿಲ್ಲ.

---------------------

ಮತ್ತೆ ಬಂದೆ ಎನ್ನಲು ನಾನು ಯಾವತ್ತಾದರೂ ಪಕ್ಷ (ಎನ್‌ಸಿಪಿ) ಬಿಟ್ಟು ಹೋಗಿದ್ದೇನೆಯೇ? - ಅಜಿತ್‌ಪವಾರ್, ಎನ್‌ಸಿಪಿ ನಾಯಕ  
ನೀವು ಬಿಟ್ಟು ಹೋಗಿದ್ದು ನಿಮ್ಮ ಮಾನ, ಮರ್ಯಾದೆಯನ್ನು ಮಾತ್ರ.

---------------------
370ನೇ ವಿಧಿ ರದ್ದಾದ ಬಳಿಕ ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಶೂನ್ಯಕ್ಕಿಳಿದಿವೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ  
ಆ ಕೆಲಸವನ್ನು ಸೇನೆಯೇ ವಹಿಸಿಕೊಂಡಿದೆ ಎನ್ನುವ ಆರೋಪಗಳಿವೆ.

---------------------
  
ಮಹಾರಾಷ್ಟ್ರದಲ್ಲಿ ಆದ ಬೆಳವಣಿಗೆಯಿಂದ ಎಲ್ಲ ರಾಜಕೀಯ ಪಕ್ಷಗಳ ನೈತಿಕತೆ ಕುಸಿದಿರುವುದು ನೋಡಿ ಬೇಸರವಾಗುತ್ತಿದೆ - ವಿಶ್ವೇಶ ತೀರ್ಥಸ್ವಾಮೀಜಿ, ಪೇಜಾವರ ಮಠ
 ಸನ್ಯಾಸಿಗಳ ನೈತಿಕತೆ ಕುಸಿದಿರುವುದರ ಬಗ್ಗೆ ಬೇಸರವಿಲ್ಲವೆ?
---------------------

ಎಲ್ಲವೂ ಕುಸಿಯುತ್ತಿದೆ ಎಂಬುದು ಸರಿಯಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ 
ಈರುಳ್ಳಿ ಬೆಲೆ ಏರುತ್ತಿದೆ ಎಂಬ ಕಾರಣಕ್ಕಿರಬೇಕು.

---------------------
  
ನಾವು ಅಣಬೆಗಳ ರೀತಿ ಬೆಳೆದು ಬಂದವರಲ್ಲ, ಹೋರಾಟದ ಮೂಲಕ ಬೆಳೆದವರು - ಆರ್. ಅಶೋಕ್, ಸಚಿವ  
ಯಡಿಯೂರಪ್ಪ ವಿರುದ್ಧ ಹೋರಾಟ ಮಾಡುವ ಮೂಲಕ ಇರಬೇಕು.

---------------------

ನಾನು ಕೂಡಾ ರೈತ ಮನೆತನದಿಂದ ಬಂದವನು - ಪ್ರತಾಪ ಸಿಂಹ, ಸಂಸದ
  ಆ ಕಾರಣಕ್ಕಾಗಿ ರೈತರಿಗೆ ದ್ರೋಹವೆಸಗುವ ಹಕ್ಕಿದೆ ಅಂತೀರಾ?

---------------------
ಒಬ್ಬ ವ್ಯಕ್ತಿಯನ್ನು ಒಮ್ಮೆ ಮಾತ್ರ ಫೂಲ್ ಮಾಡಬಹುದು. ಪ್ರತೀ ಸಲವೂ ಫೂಲ್ ಮಾಡಲು ಆಗುವುದಿಲ್ಲ - ಸದಾನಂದ ಗೌಡ, ಕೇಂದ್ರ ಸಚಿವ
ಮುಂದಿನ ಬಾರಿ ಮೋದಿ ವಿಫಲರಾಗುತ್ತಾರೆ ಎಂದು ಅರ್ಥವೆ?
---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...