ಉಪ ಚುನಾವಣೆ: ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ

Update: 2019-12-02 13:48 GMT

ಬೆಂಗಳೂರು, ಡಿ.2: ಶಾಸಕರ ರಾಜೀನಾಮೆಯಿಂದ ತೆರವುಗೊಂಡಿದ್ದ ರಾಜ್ಯದ ಹದಿನೈದು ಕ್ಷೇತ್ರಗಳಿಗೆ ಡಿ.5ರಂದು ಉಪಚುನಾವಣೆ ಮತದಾನ ನಡೆಯಲಿದ್ದು, ಈ ಸಂಬಂಧ ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ.

ಗುರುವಾರ (ಡಿ.5) ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. 15 ವಿಧಾನಸಭಾ ಕ್ಷೇತ್ರಗಳಲ್ಲಿ 4,185 ಮತಗಟ್ಟೆಗಳಲ್ಲಿ, 37.82 ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಎಲ್ಲ ಹದಿನೈದು ಕ್ಷೇತ್ರಗಳಿಂದ ಬಿಜೆಪಿ, ಕಾಂಗ್ರಸ್ ಹಾಗೂ ಜೆಡಿಎಸ್ ಸೇರಿ ಒಟ್ಟು 165 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಎಲ್ಲೆಲ್ಲಿ ಎಷ್ಟು ಮತಗಟ್ಟೆಗಳು: ಅಥಣಿ-260, ಕಾಗವಾಡ-231, ಗೋಕಾಕ-288, ಯಲ್ಲಾಪುರ-231, ಹಿರೇಕೆರೂರು-229, ರಾಣೆಬೆನ್ನೂರು-266, ವಿಜಯನಗರ (ಹೊಸಪೇಟೆ)- 247, ಚಿಕ್ಕಬಳ್ಳಾಪುರ-254, ಕೆ.ಆರ್.ಪುರಂ-437, ಯಶವಂತಪುರ -461, ಮಹಾಲಕ್ಷ್ಮಿ ಲೇಔಟ್-270, ಶಿವಾಜಿನಗರ-193, ಹೊಸಕೋಟೆ-286, ಕೆ.ಆರ್.ಪೇಟೆ-258 ಹಾಗೂ ಹುಣಸೂರು-274 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಅದರಲ್ಲಿ 39 ಸಖಿ ಮತಗಟ್ಟೆಗಳು, ಅಂಗವಿಕಲ ನಿರ್ವಹಿಸುವ 13 ಹಾಗೂ 3 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಸೂಕ್ಷ್ಮಮತಗಟ್ಟೆಗಳು: 15 ಕ್ಷೇತ್ರಗಳ ವ್ಯಾಪ್ತಿಯಲ್ಲಿ 884 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಉಳಿದಂತೆ 414 ಮತಗಟ್ಟೆಗಳಲ್ಲಿ ಸಿಎಪಿಎಫ್ ತಂಡ ಕಾರ್ಯನಿರ್ವಹಿಸಲಿದೆ. 805 ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರು, 206 ಮತಗಟ್ಟೆಗಳಲ್ಲಿ ವೆಬ್‌ಕೆಮೆರಾ ಹಾಗೂ 259 ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು.

ಮತದಾನದ ಸಂದರ್ಭದಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಅಗತ್ಯಕ್ಕಿಂತ ಅಧಿಕ ಮತಯಂತ್ರ ಹಾಗೂ ವಿವಿ ಫ್ಯಾಟ್‌ಗಳನ್ನು ಸಿದ್ಧಪಡಿಸಲಾಗಿದೆ. ಇದೀಗ ಒಟ್ಟಾರೆ 8, 370 ಬಿಯು, 8,370 ಸಿಯು, 8,370 ವಿವಿ ಫ್ಯಾಟ್‌ಗಳನ್ನು ಸಿದ್ಧಪಡಿಸಿಡಲಾಗಿದೆ ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದರು.

ಗುರುತಿನ ಚೀಟಿ: ಉಪಚುನಾವಣೆಯಲ್ಲಿಯೂ ಮತದಾರರ ಭಾವಚಿತ್ರವುಳ್ಳ ಚೀಟಿ ನೀಡಲಾಗುತ್ತದೆ. ಆದರೆ, ಇದು ಗುರುತಿನ ಚೀಟಿಯಲ್ಲ. ಮತದಾರರು ಆಯೋಗ ನೀಡುವ ಅಧಿಕೃತ ಗುರುತಿನ ಚೀಟಿ ಸೇರಿದಂತೆ 11 ಇನ್ನಿತರೆ ಗುರುತಿನ ಚೀಟಿಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.

ಗುರುತಿನ ಚೀಟಿಯ ಜತೆಗೆ ಪಾಸ್‌ಪೋರ್ಟ್, ಚಾಲನಾ ಪರವಾನಿಗೆ ಪತ್ರ, ಖಾಸಗಿ ಕಂಪೆನಿಗಳಿಂದ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್, ಪಾನ್ ಪಾರ್ಡ್, ನರೇಗಾ ಕಾರ್ಡ್, ಹೆಲ್ತ್‌ಕಾರ್ಡ್, ಸರಕಾರಿ ಅಧಿಕೃತ ಕಾರ್ಡ್ ಹಾಗೂ ಆಧಾರ್‌ಕಾರ್ಡ್ ಬಳಸಬಹುದಾಗಿದೆ.

ವಿಶೇಷಚೇತನರು ಮತ ಹಾಕಲು ಸಹಾಯವಾಗುವಂತೆ ಚುನಾವಣಾ ಆಯೋಗದಿಂದ ನೆರವು ನೀಡಲಾಗುತ್ತದೆ. ಇದುವರೆಗೂ 24,744 ಜನರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ನೋಂದಣಿಗೆ ಅವಕಾಶವಿದ್ದು, ತಕ್ಷಣವೇ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.

ಎಡಗೈ ತೋರಿ ಬೆರಳಿಗೆ ಶಾಹಿ

‘ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತ ಹಾಕುವ ಮತದಾರರ ಎಡಗೈ ತೋರುಬೆರಳಿಗೆ ನೀಲಿ ಬಣ್ಣದ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ’

-ಸಂಜೀವ್ ಕುಮಾರ್, ಮುಖ್ಯ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News