ಸುಭದ್ರ ಸರ್ಕಾರಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಿ: ಶಾಸಕ ಎನ್.ಮಹೇಶ್
ಚಾಮರಾಜನಗರ, ಡಿ.2: ರಾಜ್ಯದಲ್ಲಿ ಸುಭದ್ರ ಸರ್ಕಾರ ಬೇಕಾದರೆ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಬಿಜೆಪಿಯ ಪರ ಮತದಾರರಲ್ಲಿ ಮನವಿ ಮಾಡಿದರು.
ಕೊಳ್ಳೇಗಾಲದ ತನ್ನ ನಿವಾಸದಲ್ಲಿ ಮಾತನಾಡಿದ ಅವರು, ಸ್ವತಂತ್ರ ಶಾಸಕನಾಗಿ ನನಗೆ ಸಣ್ಣ ಆತಂಕವಿದೆ. ಈ ಶಾಸನ ಸಭೆಯಲ್ಲಿ 224 ಜನರಲ್ಲಿ 90 ಶಾಸಕರು ಮೊದಲ ಬಾರಿ ಗೆದ್ದಿದ್ದಾರೆ. 90 ಹೊಸ ಶಾಸಕರ ನಿರೀಕ್ಷೆ ಕೂಡಾ ಸುಭದ್ರ ಸರ್ಕಾರದ ಬಗ್ಗೆ ಇದೆ ಎಂದರು.
20 ವರ್ಷದ ಶ್ರಮದ ನಂತರ ನಾನು ಗೆದ್ದು ಬಂದಿದ್ದೇನೆ. ಮೂರುವರೆ ವರ್ಷ ಸುಭದ್ರ ಸರ್ಕಾರ ಇದ್ದರೆ ನಾನು ಈ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು..
ರಾಜ್ಯದಲ್ಲಿ ಇದೀಗ ಬಿಜೆಪಿ ಸರ್ಕಾರವಿದೆ. ಬಿಜೆಪಿ ಸರ್ಕಾರ ಸುಭದ್ರವಾಗಿರಲು ರಾಜ್ಯದ ಜನತೆ ಈ ಬಾರಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕಾಗಿದೆ. ನಾಳೆ ಸರ್ಕಾರ ಬಿದ್ದು ಹೋಗಿ ಚುನಾವಣೆಗೆ ಹೋದರೆ ನಮ್ಮ ಪರಿಸ್ಥಿತಿ ಏನಾಗಬೇಕು ಎಂದು ಬಿಎಸ್ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್ ಬಿಜೆಪಿ ಸರ್ಕಾರದ ಪರ ಮನವಿ ಮಾಡಿದರು.