ಎಂಟಿಬಿ ನಾಗರಾಜ್ ಸ್ಪರ್ಧಾ ಕಣದಲ್ಲಿಯೇ ಇಲ್ಲ: ಮಾಜಿ ಸಚಿವ ಝಮೀರ್ ಅಹ್ಮದ್

Update: 2019-12-03 13:02 GMT

ಹೊಸಕೋಟೆ, ಡಿ.3: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸ್ಪರ್ಧಾ ಕಣದಲ್ಲಿ ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಈಗಾಗಲೇ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಹಾಗೂ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ನಡುವೆ ಮಾತ್ರ ಸ್ಪರ್ಧೆ ಇದೆ ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು.

ಮಂಗಳವಾರ ಹೊಸಕೋಟೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶರತ್ ಬಚ್ಚೇಗೌಡ ಬಿಜೆಪಿಯ ‘ಬಿ ಟೀಮ್’ ಇದ್ದ ಹಾಗೆ, ಅವರು ಚುನಾವಣೆಯಲ್ಲಿ ಗೆದ್ದರೂ ಬಿಜೆಪಿಗೇ ಹೋಗುತ್ತಾರೆ. ಆದುದರಿಂದ, ಅಲ್ಪಸಂಖ್ಯಾತರು ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಗೆ ಮತ ನೀಡುವುದಿಲ್ಲ ಎಂದರು.

ಹೊಸಕೋಟೆ ಕ್ಷೇತ್ರ ನನ್ನ ಮನೆ ಇದ್ದ ಹಾಗೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದ ಪರಿಣಾಮ, ಎಲ್ಲ ಮುಸ್ಲಿಮ್ ಬಾಂಧವರು ಎಂಟಿಬಿ ನಾಗರಾಜ್‌ಗೆ ಮತ ನೀಡಿದರು. ಅದರಿಂದಾಗಿಯೇ ಅವರು ಗೆಲ್ಲಲು ಸಾಧ್ಯವಾಯಿತು. ಇಲ್ಲದಿದ್ದರೆ, ಕಳೆದ ಚುನಾವಣೆಯಲ್ಲಿಯೇ ಅವರು ಸೋಲು ಅನುಭವಿಸುತ್ತಿದ್ದರು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಎಂಟಿಬಿ ನಾಗರಾಜ್ ಈ ರೀತಿ ಪಕ್ಷಕ್ಕೆ ದ್ರೋಹ ಮಾಡಿ ಹೋಗುತ್ತಾರೆ ಎಂದು ಮೊದಲೇ ಗೊತ್ತಿದ್ದರೆ, ಖಂಡಿತವಾಗಿಯೂ ನಾನು ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿರಲಿಲ್ಲ. ಈ ರೀತಿ ಉಪ ಚುನಾವಣೆ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಎಂಟಿಬಿ ನಾಗರಾಜ್‌ಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ. ಪದ್ಮಾವತಿ ಸುರೇಶ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 ನನಗೆ ಸಚಿವ ಸ್ಥಾನದ ಅಗತ್ಯವಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಎಂದು ಎಂಟಿಬಿ ನಾಗರಾಜ್ ಹೇಳಬೇಕಿತ್ತು. ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಸಿಗುತ್ತಿಲ್ಲ ಎಂದು ಈಗ ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ. ಅಧಿಕಾರ ಕೈಯಲ್ಲಿದ್ದಾಗ ಬಾಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ? ಎಂದು ಝಮೀರ್ ಅಹ್ಮದ್ ಖಾನ್ ವ್ಯಂಗ್ಯವಾಡಿದರು.

ಎಂಟಿಬಿ ನಾಗರಾಜ್ ಯಾರಿಗೂ ಸುಮ್ಮನೆ ಹಣ ಕೊಡುವುದಿಲ್ಲ. ಬಡ್ಡಿ ಅವರು ಬಡ್ಡಿಗೆ ಹಣ ನೀಡುತ್ತಾರೆ. ಈ ಬಡ್ಡಿ ವ್ಯವಹಾರ ಮಾಡುವವರಿಗೆ ಯಾವತ್ತಾದರೂ ಒಳ್ಳೆಯದ್ದಾಗಿದೆಯೇ? ನಾನು ಕೂಡ ಅವರ ಬಳಿ ವ್ಯವಹಾರಕ್ಕೆ ದುಡ್ಡು ಕೇಳಿದ್ದೆ. ಆದರೆ, ಕೊಟ್ಟಿರಲಿಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷವನ್ನು ಯಾರೊ ಒಬ್ಬ ವ್ಯಕ್ತಿಯಿಂದ ಕಟ್ಟಲು ಸಾಧ್ಯವಿಲ್ಲ. ಎಂಟಿಬಿ ನಾಗರಾಜ್‌ಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡದೇ ಇದ್ದಿದ್ದರೆ ಅವರು ಕೇವಲ ಒಬ್ಬ ವ್ಯವಹಾರಸ್ಥರಾಗಿಯೇ ಇರುತ್ತಿದ್ದರೇ ಹೊರತು, ಜನಪ್ರತಿನಿಧಿಯಾಗುತ್ತಿರಲಿಲ್ಲ. ಈ ಕ್ಷೇತ್ರದ ಜನ ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ಎಂಟಿಬಿ ನಾಗರಾಜ್ ಅಲ್ಲ ಎಂದು ಝಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.

ರೋಷನ್ ಬೇಗ್ ಸೇರಿದಂತೆ 17 ಜನ ಅನರ್ಹ ಶಾಸಕರಿಂದಾಗಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಪಕ್ಷ ಸೇರ್ಪಡೆ ವೇಳೆ ರೋಷನ್ ಬೇಗ್‌ರನ್ನು ಕೈ ಬಿಟ್ಟರು. ನಮಗೆ ಮುಸ್ಲಿಮರು ಬೇಕಿಲ್ಲ, ಅವರ ಮತಗಳು ಬೇಕಿಲ್ಲ ಎಂದು ಸಚಿವ ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳುತ್ತಾರೆ. ಸ್ವಾಭಿಮಾನಿ ಮುಸ್ಲಿಮರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News