ತುಳು ಸಿನೆಮಾದಲ್ಲಿ ಮಲೆನಾಡಿನ ಜನರಿಗೆ ಅವಮಾನ: ಆರೋಪ

Update: 2019-12-03 16:30 GMT

ಚಿಕ್ಕಮಗಳೂರು, ಡಿ.3: ತುಳು ಹಾಸ್ಯ ಚಲನಚಿತ್ರ 'ಆಟಿಡೊಂಜಿ ದಿನ' ತುಳು ಸಿನೆಮಾ ಬಿಡುಗಡೆಗೂ ಮುನ್ನ ಚಿಕ್ಕಮಗಳೂರಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ಚಲನಚಿತ್ರದ ದೃಶ್ಯವೊಂದರಲ್ಲಿ ನಾಯಕ ನಟ ನವೀನ್ ಡಿ.ಪಡೀಲ್ ಅವರು ಮಲೆನಾಡಿನ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಲಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ತುಳುನಾಡಿಗೂ ಮಲೆನಾಡಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ, ಭೌಗೋಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಅವಿನಾಭಾವ ಸಂಬಂಧವಿದೆ. ಮಲೆನಾಡು ಹಾಗೂ ಕರಾವಳಿಯ ಜನರು ಜನರು ಉದ್ಯೋಗ, ವ್ಯಾಪಾರ ಮತ್ತಿತರ ಚಟುವಟಿಕೆಗಳಿಂದ ಪರಸ್ಪರ ಸಂಬಂಧ ಹೊಂದಿದ್ದಾರೆ. ಈ ಕಾರಣಕ್ಕೆ ಮಲೆನಾಡಿನಲ್ಲಿ ಸಾವಿರಾರು ತುಳು ಭಾಷಿಗರು ಕಾಣಸಿಗುತ್ತಾರೆ. ಕರಾವಳಿಯ ವಿಶಿಷ್ಟ ಭಾಷೆ ತುಳು ಅನ್ನು ಮಲೆನಾಡಿನ ಜನರೂ ನಮ್ಮದೆ ಭಾಷೆ ಎಂಬಂತೆ ಮಾತನಾಡುತ್ತಿದ್ದಾರೆ. ಹೀಗೆ ವಿಶಿಷ್ಟ ಅವಿನಾಭಾವ ಬೆಸುಗೆ ಹೊಂದಿರುವ ಕರಾವಳಿ ಮತ್ತು ಮಲೆನಾಡಿನ ಜನರ ನಡುವೆ ಇದೀಗ ತುಳು ಭಾಷೆಯ ಸಿನೆಮಾ ಒಂದು ಪರಸ್ಪರ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆಯಾಗಲಾರಂಭಿಸಿದೆ.

ತುಳು ಭಾಷೆಯ ಸಿನೆಮಾಗಳು ಮಲೆನಾಡಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಿದ್ದರೂ ಹಲವರು ಯೂಟ್ಯೂಬ್, ಮೊಬೈಲ್‍ಗಳಲ್ಲಿ ತುಳುಭಾಷೆಯ ಸಿನೆಮಾಗಳನ್ನು ನೀಡುತ್ತಾರೆ. ಅದರಲ್ಲೂ ಕರಾವಳಿಯ ಪ್ರಸಿದ್ಧ ಹಾಸ್ಯ ನಟ ನವೀನ್ ಪಡೀಲ್ ನಟನೆಯ ಸಿನೆಮಾಗಳನ್ನು ಹೆಚ್ಚಾಗಿ ನೋಡುತ್ತಾರೆ. ಈ ಕಾರಣಕ್ಕೆ ಮಲೆನಾಡಿನಲ್ಲಿ ಸಾವಿರಾರು ಮಂದಿ ನವೀನ್.ಡಿ ಪಡೀಲ್ ಅವರ ಅಭಿಮಾನಿಗಳಿದ್ದಾರೆ. ಕೆಲ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳಂದು ನವೀನ್ ಪಡೀಲ್ ಅವರನ್ನು ಕರೆಸಿ ಅವರ ನಾಟಕಗಳ ಅಭಿನಯಗಳನ್ನು ಕಣ್ತುಂಬಿಕೊಂಡಿರುವಂತಹ ಕಾರ್ಯಕ್ರಮಗಳು ಮಲೆನಾಡಿನಾದ್ಯಂತ ನಡೆದಿರುವುದೇ ಇದಕ್ಕೆ ಸಾಕ್ಷಿ. ಹೀಗೆ ನವೀನ್ ಪಡೀಲ್ ಅವರ ನಟನೆಗೆ ಮಾರು ಹೋಗಿರುವ ಇಲ್ಲಿನ ಜನರು, ಕಾಲೇಜು ವಿದ್ಯಾರ್ಥಿಗಳು ಇದೀಗ ಅವರೇ ಅಭಿನಯಿಸಿರುವ, ಬಿಡುಗಡೆಗೆ ಸಿದ್ಧವಾಗಿರುವ ಹೊಸ ತುಳು ಸಿನೆಮಾವೊಂದರ ವಿರುದ್ಧ ಕಿಡಿಕಾರಿದ್ದು, ಪ್ರತಿಭಟನೆಗೂ ಸಿದ್ಧತೆ ನಡೆಸಿದ್ದಾರೆ.

ಅಷ್ಟಕ್ಕೂ ಮಲೆನಾಡಿನಲ್ಲಿ ಈ ಆಕ್ರೋಶ ಏಳಲು ಕಾರಣವಾಗಿರುವುದು ನವೀನ್ ಪಡೀಲ್ ಅಭಿನಯದ ಆಟಿಡೊಂಜಿ ದಿನ ಸಿನೆಮಾದಲ್ಲಿ ಮಲೆನಾಡಿನ ಜನರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಲಾಗಿದೆ ಎಂಬ ಆರೋಪ. ಈ ಸಿನೆಮಾದಲ್ಲಿ ಬಳಸಲಾಗಿರುವ, ನಟ ನವೀನ್ ಅವರೇ ಮಾತನಾಡಿರುವ ಡೈಲಾಗೊಂದರ ವಿರುದ್ಧ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಟಿಡೊಂಜಿ ದಿನ ಸಿನೆಮಾದ ದೃಶ್ಯವೊಂದರಲ್ಲಿ ನಟ ನವೀನ್ ಅವರು, "ತುಳುನಾಡಿನ ಹೆಣ್ಣಿಗೆ ತೊಂದರೆ ಆದರೆ ಅದನ್ನು ನೋಡಿಕೊಂಡಿರಲು ನಾವೇನು ಘಟ್ಟದವರಲ್ಲ" ಎಂಬ ಅರ್ಥ ಇರುವ ತುಳು ಡೈಲಾಗ್ ಹೇಳಿದ್ದು, ಇದು ಮಲೆನಾಡಿನ ಜನರನ್ನು, ವಿಶೇಷವಾಗಿ ತುಳು ಭಾಷೆ ಮಾತನಾಡುವ ಕರಾವಳಿ ಮೂಲದವರೇ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಣ್ಣಿಗೆ ಎಲ್ಲೇ ತೊಂದರೆಯಾದರೆ ಮಾನವೀಯತೆ ಇರುವ ಜನರ ನೆರವಿಗೆ ಬಂದೇ ಬರುತ್ತಾರೆ, ಆದರೆ ಆಟಿಡೊಂಜಿ ದಿನ ಸಿನೆಮಾದಲ್ಲಿ ಕರಾವಳಿಯ ಹೆಣ್ಣಿಗೆ ತೊಂದರೆಯಾದರೆ ಮಲೆನಾಡಿನ(ಘಟ್ಟದವರು) ಜನರು ಸುಮ್ಮನಿರುತ್ತಾರೆ ಎಂದು ಹೇಳುವ ಮೂಲಕ ಸಿನೆಮಾದ ಮೂಲಕ ಮಲೆನಾಡಿನ ಜನರನ್ನು ಕೆಟ್ಟವರೆಂದು ಬಿಂಬಿಸಲಾಗಿದೆ ಎಂದು ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೆಣ್ಣಿಗೆ ತೊಂದರೆಯಾದರೆ ಮಲೆನಾಡಿನ ಜನರು ಸುಮ್ಮನೆ ಕೂರುವವರಲ್ಲ. ಹೆಣ್ಣನ್ನು ಗೌರವಿಸುವ, ಸತ್ಕಾರ ಮಾಡುವ ಸಂಸ್ಕೃತಿ ಮಲೆನಾಡಿನವರದ್ದಾಗಿದೆ. ಧರ್ಮಸ್ಥಳದಲ್ಲಿ ಸೌಜನ್ಯಾ ಹತ್ಯೆಯಾದಾಗ ಮಲೆನಾಡಿನ ಜನರು ನ್ಯಾಯಕ್ಕಾಗಿ ಬೀದಿಗಿಳಿದಿದ್ದಾರೆ. ಆದರೆ ಕರಾವಳಿಯ ಜನರು ಸೌಜನ್ಯಾಳಿಗೆ ಇನ್ನ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ ಎಂಬಂತಹ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಇನ್ನು ಕೆಲವರು ಕರಾವಳಿಗೆ ಕುಡಿಯಲು ನೀರು ಬಿಡಬಾರದು, ಕುದುರೆಮುಖದಿಂದ ನೀರು ಬಂದ್ ಮಾಡಬೇಕು, ಸಿನೆಮಾದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ, ಸಿನೆಮಾವನ್ನು ಬ್ಯಾನ್ ಮಾಡಬೇಕು, ಸಿನೆಮಾದ ನಟರು, ನಿರ್ದೇಶಕರು ಕ್ಷಮೆಯಾಚನೆ ಮಾಡಬೇಕು ಎಂಬಿತ್ಯಾದಿಯಾಗಿ ಜಾಲತಾಣಗಳ ಮೂಲಕ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ತುಳು ಭಾಷೆಯ ಸಿನೆಮಾವೊಂದರ ಡೈಲಾಗ್ ಇದೀಗ ಕರಾವಳಿ ಹಾಗೂ ಮಲೆನಾಡಿನ ಜನರ ನಡುವೆ ವಾಕ್ಸಮರಕ್ಕೆ ಕಾರಣವಾಗುತ್ತಿದೆ.

ತುಳುನಾಡಿಗೂ ಮಲೆನಾಡಿಗೂ ಅವಿನಾಭಾವ ಸಂಬಂಧವಿದೆ. ತುಳು ಭಾಷೆ ಮಲೆನಾಡಿನ ಭಾಷೆಯಾಗಿಯೇ ಹೋಗಿದೆ. ನಾವು ತುಳುಭಾಷೆಯ ಸಿನೆಮಾಗಳನ್ನು ನೋಡುತ್ತೇವೆ. ಆನಂದಿಸುತ್ತೇವೆ. ಅದರಲ್ಲೂ ನವೀನ್ ಅವರ ಹಾಸ್ಯದ ಸಿನೆಮಾಕ್ಕೆ ಇಲ್ಲಿ ಭಾರೀ ಬೇಡಿಕೆ ಇದ್ದು, ಅವರಿಗೆ ಇಲ್ಲಿ ಅಭಿಮಾನಿಗಳೂ ಇಲ್ಲಿದ್ದಾರೆ. ಆದರೆ ಸಿನೆಮಾಕ್ಕಾಗಿ ನೆರೆಯ ಜಿಲ್ಲೆಯ ಜನರ ಬಗ್ಗೆ ಅವಹೇಳನಕಾರಿಯಾಗಿ ಸಂಭಾಷಣೆ ಬರೆದಿರುವುದು ಖಂಡನೀಯ. ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಸಿನೆಮಾದಲ್ಲಿ ಮಲೆನಾಡಿನ ಜನರ ಬಗ್ಗೆ ಬಳಸಲಾಗಿರುವ ಶಬ್ದಗಳನ್ನು ತೆಗೆದು ಹಾಕಬೇಕು ಮತ್ತು ಸಿನೆಮಾ ತಂಡದವರು ಕ್ಷಮೆಯಾಚನೆ ಮಾಡಬೇಕು.

- ರಿಝ್ವಾನ್, ಕಾಂಗ್ರೆಸ್ ಮುಖಂಡ, ಕಳಸ

ಕರಾವಳಿಯಲ್ಲಿ ಏನೇನಾಗುತ್ತಿದೆ ಎಂದು ಮಲೆನಾಡಿನ ಜನರಿಗೆ ತಿಳಿದಿದೆ. ಆದರೆ ಕೇವಲ ಜನರನ್ನು ಖಷಿ ಪಡಿಸುವ ಸಲುವಾಗಿ ಸಿನೆಮಾದಲ್ಲಿ ಇಲ್ಲಿನ ಜನರ ಬಗ್ಗೆ ಅವಹೇಳನಕಾರಿಯಾಗಿ ಸಂಭಾಷಣೆ ಬರೆದಿರುವುದು ಸರಿಯಲ್ಲ. ಇದು ಖಂಡನೀಯ.

- ಟಿಟ್ಟು ಥಾಮಸ್, ವ್ಯಾಪಾರಿ

Writer - ಕೆ.ಎಲ್ ಶಿವು

contributor

Editor - ಕೆ.ಎಲ್ ಶಿವು

contributor

Similar News