ಸೋಮವಾರಪೇಟೆ: ಪ್ರಪಾತಕ್ಕೆ ಉರುಳಿಬಿದ್ದ ಟಿಪ್ಪರ್; ಮೂವರು ಪ್ರಾಣಾಪಾಯದಿಂದ ಪಾರು
ಸೋಮವಾರಪೇಟೆ, ಡಿ.3: ವೆಟ್ಮಿಕ್ಸ್ ಸಾಗಿಸುತ್ತಿದ್ದ ಟಿಪ್ಪರ್ ವಾಹನವೊಂದು ರಸ್ತೆ ಬದಿಯ ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಮಂಗಳವಾರ ಶಾಂತಳ್ಳಿ ಸಮೀಪದ ಪಟ್ಟಣಕೊಲ್ಲಿ ಎಂಬಲ್ಲಿ ಸಂಭವಿಸಿದ್ದು, ವಾಹನದಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಡ್ಲಿಪೇಟೆಯ ಉದಯಕುಮಾರ್ ಎಂಬವರು ಚಲಾಯಿಸುತ್ತಿದ್ದ, ಟಿ.ಆರ್. ಪುರುಷೋತ್ತಮ್ ಎಂಬವರಿಗೆ ಸೇರಿದ ಟಿಪ್ಪರ್ ವಾಹನ ಅವಘಡಕ್ಕೀಡಾಗಿದ್ದು, ವಾಹನದೊಳಗಿದ್ದ ಚಾಲಕ ಸೇರಿದಂತೆ ಇತರ ಇಬ್ಬರು ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಬೆಳಗ್ಗೆ ಶಾಂತಳ್ಳಿ ಸಮೀಪದ ಪಟ್ಟಣಕೊಲ್ಲಿ ತಿರುವಿನಲ್ಲಿ ಸರ್ಕಾರಿ ಬಸ್ ಎದುರುಗೊಂಡಾಗ ನಿಯಂತ್ರಣ ತಪ್ಪಿದ ಟಿಪ್ಪರ್ ಪ್ರಪಾತಕ್ಕೆ ಬಿದ್ದಿದೆ ಎನ್ನಲಾಗಿದೆ.
ಈ ಸಂದರ್ಭ ಟಿಪ್ಪರ್ ಚಾಲಕ ಉದಯಕುಮಾರ್ ವಾಹನದಿಂದ ಜಿಗಿದರೆ, ಉಳಿದ ಇಬ್ಬರು ಕಾರ್ಮಿಕರಾದ ಹಾವೇರಿ ಜಿಲ್ಲೆಯ ಯಲ್ಲಪ್ಪ ಮತ್ತು ನವಾಝ್ ಅವರು ಟಿಪ್ಪರ್ ನೊಳಗೆ ಸಿಲುಕಿಕೊಂಡು ಕಂದಕಕ್ಕೆ ಉರುಳಿದ್ದಾರೆ. ಪರಿಣಾಮ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಟಿಪ್ಪರ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.