ರಾಜ್ಯದ 30 ಲಕ್ಷ ಮಹಿಳೆಯರಿಗೆ ಸ್ವಯಂ ರಕ್ಷಣೆ ತರಬೇತಿ: ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು, ಡಿ.7: ರಾಜ್ಯದಲ್ಲಿ 22 ಪೊಲೀಸ್ ತರಬೇತಿ ಶಾಲೆಗಳು ಹಾಗೂ 12 ಸೆಲ್ಫ್ ಡಿಫೆನ್ಸ್(ಸ್ವಯಂ ರಕ್ಷಣೆ) ತರಬೇತಿ ಕೇಂದ್ರಗಳಿವೆ. ಇಲ್ಲಿ ಮಹಿಳೆಯರಿಗೆ ಸ್ವಯಂ ರಕ್ಷಣೆಗಾಗಿ ತರಬೇತಿ ನೀಡಲು ನಿರ್ಧರಿಸಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ವಿಕಾಸಸೌಧದಲ್ಲಿ ಕಾನೂನು ಮತ್ತು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಎನ್ಎಚ್ಆರ್ಸಿ ಹಾಗೂ ಮಹಿಳೆಯರು, ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತೇವೆ. ಈಗಾಗಲೇ 30 ಲಕ್ಷ ಮಹಿಳೆಯರನ್ನು ತರಬೇತಿಗಾಗಿ ಗುರುತಿಸಿದ್ದೇವೆ. ರಾತ್ರಿ ಪಾಳಿಯಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸುತ್ತೇವೆ. ಈ ಮೂಲಕ ಹೆಣ್ಣು ಮಕ್ಕಳ ರಕ್ಷಣೆ ಮಾಡುತ್ತೇವೆ ಎಂದು ಅವರು ಹೇಳಿದರು.
ಮಹಿಳೆಯರ ಸುರಕ್ಷತೆಗಾಗಿ ಈಗಾಗಲೇ ಸುರಕ್ಷಾ ಆ್ಯಪ್ ಬಿಡುಗಡೆ ಮಾಡಿದ್ದೇವೆ. ಇದನ್ನು ಬೆಂಗಳೂರು ನಗರದಲ್ಲಿ ಅಷ್ಟೇ ಅಲ್ಲ, ಬೇರೆ ನಗರಗಳಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಈ ಆ್ಯಪ್ ಅನ್ನು ಮತ್ತಷ್ಟು ಆಧುನಿಕರಣಗೊಳಿಸುವುದರ ಬಗ್ಗೆಯೂ ಗಮನ ಹರಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳು, ಮಹಿಳೆಯರ ಮೇಲಿನ ಅತ್ಯಾಚಾರದ ಬಗ್ಗೆ ಅಧಿಕಾರಿಗಳು ಹಲವು ಮಾಹಿತಿ ನೀಡಿದ್ದಾರೆ. 2015 ರಿಂದ 19ರವರೆಗೆ 5764 ಪ್ರಕರಣಗಳು ದಾಖಲಾಗಿದ್ದು, 4904 ಪ್ರಕರಣಗಳಲ್ಲಿ ಚಾರ್ಜ್ಶೀಟ್ ಹಾಕಲಾಗಿದೆ. 563 ಪ್ರಕರಣಗಳು ಹಲವು ಕಾರಣಗಳಿಂದಾಗಿ ದಾಖಲಾಗಿಲ್ಲ. 329 ಪ್ರಕರಣಗಳಲ್ಲಿ ಎಫ್ಎಸ್ಎಲ್ ವರದಿಗಳು ಬರಬೇಕಿದೆ ಎಂದು ಅವರು ತಿಳಿಸಿದರು.
ಅತ್ಯಾಚಾರಿಗಳಿಗೆ ಹೇಗೆ ಶಿಕ್ಷೆ ಕೊಡಿಸಬೇಕೆಂದು ಚರ್ಚಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆಳವರ್ಗದ ಮಹಿಳೆಯರ ಮೇಲೆ ಹೆಚ್ಚು ಅತ್ಯಾಚಾರಗಳು ನಡೆಯುತ್ತಿರುವುದು ವರದಿಯಾಗಿದೆ. ಅದರಲ್ಲೂ ಕಾರ್ಮಿಕರು ಇರುವ ಪ್ರದೇಶಗಳಲ್ಲಿ ಈ ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಪೋಕ್ಸೋ ಪ್ರಕರಣ ನಾವು ದಾಖಲಿಸುತ್ತೇವೆ. ಆದರೆ, ಆದರೆ ಪ್ರಾಸಿಕ್ಯೂಟ್ ವಿಳಂಬವಾಗುತ್ತಿದೆ. ಹೀಗಾಗಿ ಇಂದು ಕಾನೂನು ಇಲಾಖೆ ಜೊತೆ ಚರ್ಚಿಸಿದ್ದೇವೆ. ಎಲ್ಲ ಜಿಲ್ಲೆಗಳಲ್ಲಿ ಪೋಕ್ಸೋ ಕೋರ್ಟ್ಗಳಿವೆ. ಇನ್ನು ಹೆಚ್ಚಿನ ಕೋರ್ಟ್ಗಳ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಪ್ರಕರಣಗಳ ತ್ವರಿತ ವಿಚಾರಣೆ ಅತ್ಯವಶ್ಯಕವಾಗಿದೆ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಮಾದಕ ವಸ್ತುಗಳ ನಿಯಂತ್ರಣದ ಬಗ್ಗೆಯೂ ಒತ್ತು ನೀಡಿದ್ದೇವೆ. ಮಾದಕ ವಸ್ತುಗಳ ಸೇವನೆಯಿಂದಲೂ ಹೆಚ್ಚಿನ ಅಪರಾಧಗಳು ನಡೆಯುತ್ತಿವೆ. ಹೊರರಾಜ್ಯ ಹಾಗೂ ವಿದೇಶಗಳಿಂದ ಮಾದಕ ವಸ್ತುಗಳು ನಮ್ಮ ರಾಜ್ಯಕ್ಕೆ ಪ್ರವೇಶಿಸುತ್ತಿವೆ. ಹೊಸ ಹೊಸ ಮಾದರಿಯಲ್ಲಿ ಮಾದಕ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಇದನ್ನು ಮಟ್ಟ ಹಾಕೋಕೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಪುಡಿ ರೌಡಿಗಳ ಹಾವಳಿ ಕುರಿತು ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಇದರ ಬಗ್ಗೆ ಗಮನಹರಿಸಿದ್ದೇವೆ. 25 ವಯೋಮಾನದ ಒಳಗಿರುವ ಅಶಿಕ್ಷಿತರೇ ಹೆಚ್ಚಿನ ಪ್ರಮಾಣದಲ್ಲಿ ಈ ಕೃತ್ಯಗಳನ್ನು ಎಸಗುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಯುತ್ತಿವೆ. ಇದನ್ನು ಮಟ್ಟ ಹಾಕೋಕೆ ನಾವು ಸಿದ್ಧವಾಗಿದ್ದೇವೆ ಎಂದರು.
ಗಸ್ತು ವ್ಯವಸ್ಥೆ ಜಾರಿಗೆ
ಮಕ್ಕಳ ಕಳ್ಳತನ ಪ್ರಕರಣಗಳು ಹೆಚ್ಚಿವೆ. ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ. ಈ ಬಗ್ಗೆ ನಾವು ಹೆಚ್ಚಿನ ಒತ್ತು ನೀಡುತ್ತಿದ್ದೇವೆ. 270 ಹೊಯ್ಸಳ ವಾಹನಗಳು ಗಸ್ತು ತಿರುಗುತ್ತಿವೆ. 183 ಗಸ್ತು ವಾಹನಗಳು ರಾಜ್ಯದಲ್ಲಿವೆ. ಅವುಗಳನ್ನು 500ಕ್ಕೆ ಹೆಚ್ಚಿಸಲು ಚಿಂತನೆ ನಡೆದಿದ್ದು, ಮುಖ್ಯಮಂತ್ರಿ ಈ ಸಂಬಂಧ ಚರ್ಚಿಸಿದ್ದು, ಜಿಪಿಎಸ್ ಆಧರಿತ ಗಸ್ತು ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ