ಹೈದರಾಬಾದ್ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸರನ್ನು ಟೀಕಿಸುವುದು ಸರಿಯಲ್ಲ: ಯದುವೀರ್
Update: 2019-12-07 17:23 GMT
ಮೈಸೂರು,ಡಿ.7: ಹೈದರಾಬಾದ್ ಅತ್ಯಾಚಾರಿಗಳ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸರ ಕ್ರಮವನ್ನು ಟೀಕಿಸುವುದು ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳು ಯಾರಿಗೂ ಸಂತೋಷ ತರುವುದಿಲ್ಲ, ಆದರೆ ಸಮಾಧಾನ ತಂದಿದೆ. ಹೈದರಾಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಪ್ರಕರಣ ಮಹಜರು ವೇಳೆ ಈ ಘಟನೆ ನಡೆದಿದೆ. ಹಾಗಾಗಿ ಆ ಸಂದರ್ಭದಲ್ಲಿ ಅವರು ಎನ್ಕೌಂಟರ್ ಮಾಡಿದ್ದಾರೆ. ನಮ್ಮೆಲ್ಲರಿಗೂ ಕಾನೂನಿನ ಮೂಲಕವೇ ಎಲ್ಲವೂ ಬಗೆಹರಿಯಬೇಕು ಎಂಬ ಆಸೆ ಇದೆ. ಈಗ ಇದು ಕಾನೂನು ಪ್ರಕಾರ ಆಗಿದ್ದರೆ ಅದು ತಪ್ಪೇ ? ರಾಜರ ಕಾಲಕ್ಕೂ ಇಂದಿನ ಕಾಲಕ್ಕೂ ವ್ಯತ್ಯಾಸ ಇದೆ. ಕಾನೂನು ಬದಲಾವಣೆಗಿಂತ ತ್ವರಿತವಾಗಿ ಕಾನೂನಿನ ಮೂಲಕ ಶಿಕ್ಷೆಯಾಗಲಿ ಅನ್ನೋದೆ ನಮ್ಮ ಆಶಯ ಎಂದು ತಿಳಿಸಿದರು