ಹನುಮ, ಅಯ್ಯಪ್ಪ ಮಾಲಾಧಾರಿಗಳಿಗೆ ಉಪಹಾರ ವಿತರಣೆ: ಭಾವೈಕ್ಯ ಮೆರೆದ ಮುಸ್ಲಿಮರು
Update: 2019-12-08 12:47 GMT
ಬಳ್ಳಾರಿ, ಡಿ. 8: ಹನುಮ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಮಾಲಾದಾರಿಗಳಿಗೆ ಉಪಹಾರ ವಿತರಿಸುವ ಮೂಲಕ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ರಾಜಭಾಗ ಸವಾರ್ ದರ್ಗಾದಲ್ಲಿರುವ ಮುಸ್ಲಿಮರು ಭ್ರಾತೃತ್ವ ಸಾರಿದ್ದಾರೆ.
ಬಳ್ಳಾರಿ, ಗದಗ ಮತ್ತು ದಾವಣೆಗೆರೆ ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿರುವ ರಾಜಭಾಗ ಸವಾರ್ ದರ್ಗಾದಲ್ಲಿ ಕಳೆದ ರಾತ್ರಿ ಮುಸ್ಲಿಮ್ ಯುವಕರ ಪಡೆಯೊಂದು ಹನುಮ ಮಾಲಾದಾರಿಗಳು ಮತ್ತು ಅಯ್ಯಪ್ಪ ಮಾಲಾಧಾರಿಗಳಿಗೆ ಉಪಹಾರ ವಿತರಿಸಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಕೇವಲ ಮುಸ್ಲಿಮರಷ್ಟೇ ಅಲ್ಲ ಇಲ್ಲಿನ ಹಿಂದೂಗಳೂ ಕೂಡ ಮುಸ್ಲಿಮರು ಆಚರಿಸುವ ರಂಝಾನ್ ಉಪವಾಸ ಸಂದರ್ಭದಲ್ಲಿ ಇಪ್ತಾರ್ ಕೂಟ ಮಾಡುತ್ತಾರೆ. ಈ ಮೂಲಕ ಇಲ್ಲಿನ ಹಿಂದೂ ಹಾಗೂ ಮುಸ್ಲಿಮರು ಹೊಸ ಪದ್ಧತಿಗೆ ನಾಂದಿ ಹಾಡಿದ್ದು, ಭಾವೈಕ್ಯದ ಕೇಂದ್ರದಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸುತ್ತಿದ್ದಾರೆ.