'ಕೂಸು ಹುಟ್ಟುವ ಮೊದಲೇ...': ಕಾಂಗ್ರೆಸ್‌ ನಾಯಕರನ್ನು ಕುಟುಕಿದ ಜಗದೀಶ್ ಶೆಟ್ಟರ್

Update: 2019-12-08 15:35 GMT

ಹುಬ್ಬಳ್ಳಿ, ಡಿ. 8: ಕಾಂಗ್ರೆಸ್‌ನವರು ಉಪಚುನಾವಣೆ ಫಲಿತಾಂಶಕ್ಕೂ ಮೊದಲೇ ಅಧಿಕಾರದ ಕನಸು ಕಾಣುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ರವಿವಾರ ಬಿಜೆಪಿಯ ಸಾಂಸ್ಥಿಕ ಚುನಾವಣಾ ವೀಕ್ಷಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ನೀಡಿದ ಯಾವುದೇ ಯೋಜನೆಗಳು ಜನರಿಗೆ ತಲುಪಿಲ್ಲ. ಅವರಿಗೆ ಜನರ ನಾಡಿಮಿಡಿತವೇ ಗೊತ್ತಿಲ್ಲ ಎಂದು ಹೇಳಿದರು.

ಅಹಂಕಾರದಿಂದ ಮಾತನಾಡುವ ಸಿದ್ದರಾಮಯ್ಯರ ನಾಯಕತ್ವ ಅಂತ್ಯ ಕಾಲಕ್ಕೆ ಬಂದಿದೆ. ಫಲಿತಾಂಶದ ಬಳಿಕ ಬಿಜೆಪಿ ಸರಕಾರವೇ ಮುಂದುವರಿಯಲಿದೆ. ಸಿದ್ದರಾಮಯ್ಯ ಮೊದಲು ಪ್ರತಿಪಕ್ಷದ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದು ತಿಳಿಸಿದರು.

ಬಿಜೆಪಿ ಬಗ್ಗೆ ಅನಾವಶ್ಯಕವಾಗಿ ಟೀಕೆ ಮಾಡುತ್ತಾ ಕಾಲ ಕಳೆಯುವುದನ್ನು ಸಿದ್ದರಾಮಯ್ಯ ಕೈ ಬಿಡಬೇಕು. ಉಪ ಚುನಾವಣೆ ನಡೆದ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದು, ಸರಕಾರ ಸುಭದ್ರವಾಗಿರಲಿದೆ ಎಂದು ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News