ಮಡಿಕೇರಿ: ಇತಿಹಾಸ ಪ್ರಸಿದ್ಧ ದೇವಾಲಯದಲ್ಲಿ ಚಿನ್ನಾಭರಣ, ನಗದು ಕಳ್ಳತನ

Update: 2019-12-09 18:06 GMT

ಮಡಿಕೇರಿ, ಡಿ.9: ನಗರದ ಹೊರ ವಲಯದ ಇತಿಹಾಸ ಪ್ರಸಿದ್ಧ ಕರವಲೆ ಶ್ರೀಭಗವತಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಅಂದಾಜು 5 ಲಕ್ಷ ರೂ. ಮೌಲ್ಯದ ದೇವರ ಆಭರಣಗಳನ್ನು ಚೋರರು ಹೊತ್ತೊಯ್ದಿದ್ದಾರೆ. ಎರಡು ಭಂಡಾರದ ಬೀಗ ಮುರಿದು ಹುಂಡಿಯಲ್ಲಿದ್ದ ಹಣವನ್ನು ಕೂಡ ದೋಚಿದ್ದಾರೆ. 

ಸೋಮವಾರ ಬೆಳಗಿನ ಜಾವ ದೇವಾಲಯದ ಅರ್ಚಕರು ಪೂಜೆಗೆಂದು ದೇವಾಲಯಕ್ಕೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಕಳ್ಳರ ತಂಡ ದೇವಾಲಯಕ್ಕೆ ನುಗ್ಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ದೇವಾಲಯದ ಮುಖ್ಯ ದ್ವಾರದಲ್ಲಿದ್ದ ಸಿ.ಸಿ.ಕ್ಯಾಮರಾವನ್ನು ಬೇರೆಡೆಗೆ ತಿರುಗಿಸಿ, ಬಾಗಿಲಿಗೆ ಅಳವಡಿಸಿದ್ದ ಚಿಲಕವನ್ನು ಕಳಚಿ ಕಳ್ಳರು ಒಳ ನುಗಿದ್ದಾರೆ. ಬಳಿಕ ಗರ್ಭ ಗುಡಿಯಲ್ಲಿದ್ದ ಭಗವತಿ ದೇವಿಯ ವಿಗ್ರಹಕ್ಕೆ ಅಳವಡಿಸಲಾಗಿದ್ದ ಬೆಳ್ಳಿಯ 2 ಕವಚ, ಜೋಡು ದೀಪ ಮತ್ತು ದೇವಿಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ತಾಳಿ ಸರವನ್ನು ಕದ್ದಿದ್ದಾರೆ. 

ಗರ್ಭಗುಡಿಯ ಪಕ್ಕದಲ್ಲಿರುವ ಶ್ರೀಗಣಪತಿ ಗುಡಿಗೆ ತೆರಳಿದ ಕಳ್ಳರು ಗಣಪತಿಯ ವಿಗ್ರಹಕ್ಕೆ ಅಳವಡಿಸಿದ್ದ 2 ಬೆಳ್ಳಿಯ ಕವಚಗಳನ್ನು ಕದ್ದಿದ್ದಾರೆ. ಅಲ್ಲಿದ್ದ 2 ದೀಪಗಳನ್ನು ಕೂಡ ಕಳವು ಮಾಡಿದ್ದಾರೆ. ದೇವಾಲಯದ ಆವರಣದಲ್ಲಿದ್ದ 2 ಭಂಡಾರದ ಹುಂಡಿಯ ಬೀಗ ಮುರಿದು ಅಂದಾಜು 10 ಸಾವಿರ ರೂ. ಹಣವನ್ನು ಕೂಡ ಕದ್ದೊಯ್ದಿದ್ದಾರೆ. ಎರಡೂ ಗರ್ಭ ಗುಡಿಗಳಲ್ಲಿ ಅಮೂಲ್ಯ ವಸ್ತುಗಳಿಗಾಗಿ ಶೋಧ ನಡೆಸಿರುವ ಚೋರರು ನೈವೇದ್ಯ, ಕುಂಕುಮವನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಚೋರರು ಶ್ರೀಭಗವತಿ ದೇವಿಯ ವಿಗ್ರಹದ ಶಿರದಿಂದ ಪಾದ ಪೀಠದವರೆಗೆ ಕುಂಕುಮವನ್ನು ಸುರಿದಿದ್ದಾರೆ. 

ಸೋಮವಾರ ಬೆಳಗ್ಗೆ ದೇವಾಲಯಕ್ಕೆ ಪೂಜೆಗೆಂದು ಬಂದ ಅರ್ಚಕರು ಒಳಗೆ ಹೋಗಿ ನೋಡಿದಾಗ ದೇವರ ಆಭರಣಗಳು ಕಳುವಾಗಿರುವುದು ಕಂಡು ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು, ಬೆರಳಚ್ಚು ಸಿಬ್ಬಂದಿಗಳು ಹಾಗೂ ಶ್ವಾನದಳದ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ದೇವಾಲಯದ ಮುಂದಿನಿಂದ ಕಳ್ಳರ ಜಾಡು ಹಿಡಿದ ಪೊಲೀಸ್ ಶ್ವಾನ ದೇವಾಲಯದ ಹಿಂಬದಿ ಮೂಲಕ ಭಗವತಿ ದೇವಾಲಯದ ಹಿಂದಿನ ರಸ್ತೆಗೆ ತೆರಳಿ ವಾಪಾಸು ಮರಳಿದೆ. ದೇವಾಲಯದ ಆಭರಣ ಕದ್ದ ಕಳ್ಳರು ಹಿಂಬದಿ ರಸ್ತೆಯ ಮೂಲಕ ವಾಹನದಲ್ಲಿ ಪರಾರಿಯಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದೇವಾಲಯದ ಸಿ.ಸಿ.ಕ್ಯಾಮರಾಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪರಿಶೀಲನೆಗೆ ಒಳಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್‍ಪಿ ದಿನೇಶ್ ಕುಮಾರ್, ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಅಪರಾಧ ದಳದ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News