ಶರತ್ ಬಚ್ಚೇಗೌಡ ಮತ್ತೆ ಬಿಜೆಪಿಗೆ ?: ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಆರ್.ಅಶೋಕ್ ಹೇಳಿದ್ದು ಹೀಗೆ...

Update: 2019-12-10 14:30 GMT

ಹುಬ್ಬಳ್ಳಿ, ಡಿ.10: ಬಿಜೆಪಿ ತೊರೆದು ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಶರತ್ ಬಚ್ಚೇಗೌಡರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಈ ಕುರಿತು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಮಾತೃ ಪಕ್ಷ ಬಿಟ್ಟು ಹೋಗಿದ್ದು ತಾಯಿಗೆ ಅನ್ಯಾಯ ಮಾಡಿದಂತೆ ಎಂದು ಕಂದಾಯ ಮತ್ತು ಪೌರಾಡಳಿತ ಸಚಿವ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸೋಲಿಗೆ ಸಂಸದ ಬಿ.ಎನ್. ಬಚ್ಚೇಗೌಡರೇ ಕಾರಣವಾಗಿದ್ದಾರೆ. ಬಿಜೆಪಿ ಮುಖಂಡರಾಗಿದ್ದ ಅವರು ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸದೆ ತಟಸ್ಥವಾಗಿದ್ದರು. ಅವರ ನಡೆಯನ್ನು ವರಿಷ್ಠರು ಗಮನಿಸಿದ್ದು, ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೂ ಕೊಟ್ಟ ಮಾತಿನಂತೆಯೇ ಸಚಿವ ಸ್ಥಾನ ನೀಡಲಾಗುವುದು. ಅವರಿಂದಲೇ ಸರಕಾರ ಭದ್ರವಾಗಿದೆ ಎನ್ನುವುದು ನಮ್ಮ ಶಾಸಕರಿಗೂ ಅರಿವಿದೆ. ಸೋತವರಿಗೂ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News