ಅಂಗನವಾಡಿ ಕಾರ್ಯಕರ್ತೆಯರ ಪಾದಯಾತ್ರೆಗೆ ಸರಕಾರ ತಡೆ: ಸಿಐಟಿಯು ಖಂಡನೆ

Update: 2019-12-10 17:10 GMT

ತುಮಕೂರು, ಡಿ.10: ಎಲ್‍ಕೆಜಿ-ಯುಕೆಜಿ ಶಿಕ್ಷಣವನ್ನು ಅಂಗನವಾಡಿಯಲ್ಲಿಯೇ ಪ್ರಾರಂಭಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಕಾನೂನು ಸುವ್ಯವಸ್ಥೆ ನೆಪವೊಡ್ಡಿ ರಾಜ್ಯ ಸರಕಾರ ತಡೆಯೊಡ್ಡಿರುವುದನ್ನು ಸಿಐಟಿಯು ರಾಜ್ಯ ಸಮಿತಿ ಖಂಡಿಸಿದೆ.

ತುಮಕೂರಿನಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ತುಮಕೂರಿನಿಂದ ಆರಂಭಗೊಳ್ಳುವ ಮುಂಚೆಯೇ, ಅಂಗನವಾಡಿ ಕಾರ್ಯಕರ್ತೆಯರನ್ನು ರಾಜ್ಯ ಸರ್ಕಾರ ಗೃಹ ಬಂಧನಕ್ಕೆ ಒಳಪಡಿಸಿದೆ. ರಾಜ್ಯ ಸಮಿತಿ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಿದ್ದು, ಸರ್ಕಾರದ ದಮನಕಾರಿ ಪ್ರವೃತ್ತಿಯಾಗಿದೆ, ಐಡಿಎಸ್ ಯೋಜನೆಯನ್ನು ಮುಚ್ಚುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಹಿಂದಿನ ಸಮ್ಮಿಶ್ರ ಸರಕಾರವು ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ‘ಎಲ್‍ಕೆಜಿ- ಯುಕೆಜಿ ತರಗತಿಗಳನ್ನು ಆರಂಭಿಸಿತ್ತು. ಬಾಲ್ಯ ವ್ಯವಸ್ಥೆಯ ಶಿಕ್ಷಣವು ಮಕ್ಕಳ ಸರ್ವತೋಮುಖ ಅಭಿವೃದ್ದೀ ದೃಷ್ಟಿಯಿಂದ ಅಂಗನವಾಡಿಯಲ್ಲೇ ನಡೆಯುವುದು ಸೂಕ್ತವಾದುದು ಎನ್ನುವುದು ಶಿಕ್ಷಣ ತಜ್ಞರ ಅಭಿಮತವಾಗಿದೆ. ಇದರಿಂದಾಗಿ ಅಂಗನವಾಡಿ ಕೇಂದ್ರಗಳನ್ನು ಮತ್ತಷ್ಟು ಬಲಪಡಿಸಬೇಕಿರುವುದು ಕೇಂದ್ರ ಹಾಗೂ ರಾಜ್ಯ ಸರಕಾರ ಜವಾಬ್ದಾರಿಯಾಗಿದೆ. ಆದರೆ ಹಿಂದಿದ್ದ ರಾಜ್ಯ ಸರಕಾರ ಬಡವರು ಹಾಗೂ ಗ್ರಾಮೀಣ ಜನರ ವಿರೋಧಿಯಾದ ನಿಲುವು ಕೈಗೊಂಡಿತ್ತು. ಇದನ್ನು ಆರಂಭದಲ್ಲೇ ವಿರೋಧಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಪ್ರತಿಭಟನೆ ನಡೆಸಿತ್ತು. ಇದೀಗ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಮುಂದೆಯೂ ಇದೇ ಬೇಡಿಕೆಯನ್ನು ಮಂಡಿಸಿ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. ಆದರೆ ಈ ಬಗ್ಗೆ ಸರಕಾರ ಯಾವುದೇ ಕ್ರಮವನ್ನು ಕೈಗೊಳ್ಳದ ಕಾರಣ ಡಿಸೆಂಬರ್ 2 ರಿಂದ ರಾಜ್ಯದ್ಯಂತ ಅಂಗನವಾಡಿ ನೌಕರರು ವಾಹನ ಜಾಥಗಳನ್ನು ಸಂಘಟಿಸಿ ಜಿಲ್ಲಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಮೂಲಕ ರಾಜ್ಯ ಸರಕಾರಕ್ಕೆ ಮನವಿಗಳನ್ನು ಸಲ್ಲಿಸಿ ರಾಜ್ಯ ಸರಕಾರ ಈ ಬಗ್ಗೆ ಗಮನ ನೀಡಬೇಕು. ಇಲ್ಲದಿದ್ದರೆ ಡಿಸೆಂಬರ್ 10 ರಿಂದ ತುಮಕೂರಿನಿಂದ ಬೆಂಗಳೂರಿನ ವರೆಗೂ ಪಾದಯಾತ್ರೆ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ನೀಡಲಾಗಿತ್ತು.

ಆದರೆ ಅನರ್ಹ ಶಾಸಕರನ್ನು ರಕ್ಷಿಸುವ ಹಾಗೂ ಚುನಾವಣೆಯಲ್ಲಿ ಅವರನ್ನು ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವುದರಲ್ಲೇ ಗಮನಹರಿಸಿದ ಯಡಿಯೂಪ್ಪ ನೇತೃತ್ವದ ಸರಕಾರ ಅಂಗನವಾಡಿ ತಾಯಂದಿರ ಬೇಡಿಕೆಗಳ ಬಗ್ಗೆ ಯಾವುದೇ ಕ್ರಮವಹಿಸಲಿಲ್ಲ. ಅದರ ಬದಲಾಗಿ ಇಂದಿನಿಂದ ತುಮಕೂರಿನಿಂದ ಆರಂಭಗೊಳ್ಳಬೇಕಿದ್ದ ಪಾದಯಾತ್ರೆಗೆ ಹಲವಾರು ಅನುಮತಿ ನಿರಾಕರಣೆ, ಬೆಂಗಳೂರಿನಲ್ಲಿ ಪ್ರತಿಭಟನೆ ನಿರ್ಬಂಧಿಸಿ 144 ಕಲಂನ ನಿರ್ಬಂಧ ಇತ್ಯಾಧಿಗಳನ್ನು ವಿಧಿಸಿದ್ದಾರೆ ಮಾತ್ರವಲ್ಲ ಅಂಗನವಾಡಿ ನೌಕರರ ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮೀಯವರನ್ನು ಗುರಿಯಾಗಿಸಿ ಸಾಮೂಹಿಕ ನಾಯಕತ್ವದಲ್ಲಿ ನಡೆಯುವ ಚಳವಳಿಯನ್ನು ಹತ್ತಿಕ್ಕುವ ಯತ್ನವನ್ನು ಪೊಲೀಸರು ನಡೆಸಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. 

ಮುಖ್ಯಮಂತ್ರಿಗಳ ಜೊತೆ ಮಾತುಕತೆಗೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ದ ರಾಜ್ಯ ಅಧ್ಯಕ್ಷರಾದ ಎಸ್.ವರಲಕ್ಮೀ ಹಾಗೂ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎ.ಆರ್.ಸಿಂಧು ನೇತೃತ್ವದಲ್ಲಿ ಮುಖಂಡರ ತಂಡ ತೆರಳಿದೆ. ರಾಜ್ಯದ ಸರಕಾರ ಈ ನೌಕರರ ಬೇಡಿಕೆಗಳ ಕುರಿತಾಗಿ ಹೇಗೆ ಸ್ಪಂದಿಸಲಿದೆ ಎನ್ನುವುದರ ಮೇಲೆ ಮುಂದಿನ ಹೋರಾಟ ನಿರ್ಧಾರವಾಗಿದೆ. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಸಮಿತಿ ಹೋರಾಟ ನಿರತ ನೌಕರರ ಜೊತೆ ದೃಡವಾಗಿ ನಿಲ್ಲಲಿದೆ. ಮಾತ್ರವಲ್ಲ ಅವರ ಬೇಡಿಕೆಗಳನ್ನು ಇತ್ಯರ್ಥಪಡಿಸದೆ ಇದ್ದಲ್ಲಿ ನೌಕರರ ಜೊತೆ ಇಡೀ ಕಾರ್ಮಿಕ ವರ್ಗವನ್ನು ಹೋರಾಟಕ್ಕೆ ಇಳಿಸಲು ಸಿಐಟಿಯು ಮುಂದಾಗಲಿದೆ ಎಂದು ಎಚ್ಚರಿಸಿದೆ.

ಹೋರಾಟದಲ್ಲಿ ಪ್ರಸನ್ನ ಹೆಗ್ಗೋಡು, ವರಲಕ್ಷ್ಮೀ, ಗುಲ್ಜಾರ್, ಮಲ್ಲಿಕಾ, ಮೀನಾಕ್ಷೀ ಸುಂದರಂ, ಕೆ.ಮಹಾಂತೇಶ್, ಕೆ.ಎನ್.ಉಮೇಶ್, ಸೈಯದ್ ಮುಜೀಬ್, ಸುಬ್ರಮಣ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News