ದೈಹಿಕ ಸಂಬಂಧಕ್ಕೆ ಒಪ್ಪದ ಚಿಕ್ಕಮ್ಮನ ಕೈ ಕಡಿದಿದ್ದ ಆರೋಪ: ಯುವಕನಿಗೆ ಹತ್ತು ವರ್ಷ ಜೈಲು

Update: 2019-12-13 17:53 GMT

ಮೈಸೂರು,ಡಿ.13: ದೈಹಿಕ ಸಂಬಂಧಕ್ಕೆ ಒಪ್ಪದ ಚಿಕ್ಕಮ್ಮನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಕೈ ಕಡಿದು ಹಾಕಿದ್ದ ಆರೋಪದ ಮೇರೆಗೆ ಪಿರಿಯಾಪಟ್ಟಣ ತಾಲೂಕಿನ ಯುವಕನೋರ್ವನಿಗೆ ನಾಲ್ಕನೇ ಹೆಚ್ಚುವರಿ ಜಿಲ್ಲಾ  ಮತ್ತು ಸೆಷನ್ಸ್ ನ್ಯಾಯಾಲಯ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ 4.10 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ಪಿರಿಯಾಪಟ್ಟಣ ತಾಲೂಕಿನ ಗ್ರಾಮವೊಂದರ ಯುವಕ ಶಿವು ಎಂಬಾತನೇ ಶಿಕ್ಷೆಗೊಳಗಾದವ. ಈತ 2016ರ ಜೂನ್ 13ರಂದು ದೈಹಿಕ ಸಂಬಂಧಕ್ಕೆ ಒಪ್ಪಲಿಲ್ಲವೆಂದು ತನ್ನ ಚಿಕ್ಕಮ್ಮನ ಮೇಲೆ ತೀವ್ರತರವಾಗಿ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಇದರಿಂದ ಚಿಕ್ಕಮ್ಮನ ಬಲಗೈ ಮೂಳೆಗಳು ಮತ್ತು ನರಗಳು ಕತ್ತರಿಸಿ ಹೋಗಿದ್ದವು. ಶಾಶ್ವತವಾಗಿ ಇವರು ತಮ್ಮ ಕೈ ಕಳೆದುಕೊಳ್ಳಬೇಕಾಯಿತು. ಈ ಕುರಿತು ಪಿರಿಯಾಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಲ್.ನಾಗರಾಜ್ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News