'ಡಿಸಿಎಂ ಸ್ಥಾನದ ಬೇಡಿಕೆ' ಬಗ್ಗೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟನೆ
ಬೆಂಗಳೂರು, ಡಿ.16: ರಾಜ್ಯದಲ್ಲಿ ಬಿಜೆಪಿ ಸರಕಾರ ಬರಬೇಕು ಅಂತಾ ಜನರ ಇಚ್ಛೆ ಇತ್ತು. ನನಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎನ್ನುವುದು ಅವರ ಒತ್ತಾಯ ಇದೆ ಅಷ್ಟೇ. ನಾನು ಅವರ ಒತ್ತಾಯಕ್ಕೆ ಬೇಡ ಎನ್ನುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಸೋಮವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಜನರ ಇಚ್ಛೆಗೆ ಮುಜುಗರ ಮಾಡಲು ಹೋಗುವುದಿಲ್ಲ. ಎಲ್ಲವೂ ದೇವರ ಇಚ್ಛೆ. ಪಕ್ಷದ ಹೈಕಮಾಂಡ್ ತೀರ್ಮಾನದಂತೆ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ. ಮಾಧ್ಯಮಗಳಲ್ಲಿ ಈಗ ಬರುತ್ತಿರುವ ವಿಚಾರಗಳು ಸತ್ಯಕ್ಕೆ ದೂರವಾದದ್ದು ಎಂದು ರಾಮುಲು ಹೇಳಿದರು.
ಪಕ್ಷದ ಸಲುವಾಗಿ ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡುತ್ತೇವೆ. ಬಿಜೆಪಿಯಲ್ಲಿ ಸ್ಥಾನಮಾನಕ್ಕಾಗಿ ಹೋರಾಟ ಮಾಡಿದ ಜನ ನಾವಲ್ಲ. ನಮ್ಮ ಇಲಾಖೆಯಲ್ಲಿ ನಾವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಖಾತೆಯಲ್ಲಿ ಅಪೇಕ್ಷೆ ಪಟ್ಟು ರಾಜಕಾರಣ ಮಾಡಿದವರು ನಾವಲ್ಲ ಎಂದು ಅವರು ಹೇಳಿದರು.