ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗಿದ ಈ ಬಟ್ಟೆಗಳನ್ನು ಗುರುತಿಸಬಲ್ಲಿರಾ?

Update: 2019-12-19 08:54 GMT

ಈ ದೇಶದಲ್ಲಿ ಆಹಾರವನ್ನು ತಾಮಸ-ಸಾತ್ವಿಕ ಎಂದು ಒಡೆಯಲಾಗಿದೆ. ಬಹುಸಂಖ್ಯಾತರು ಸೇವಿಸುವ ಆಹಾರವನ್ನು ತಾಮಸಾಹಾರವೆಂದು, ಅಲ್ಪಸಂಖ್ಯಾತರು ಸೇವಿಸುವ ತರಕಾರಿಗಳನ್ನು ಸಾತ್ವಿಕ ಆಹಾರವೆಂದು ವಿಂಗಡಿಸಿ ಪರೋಕ್ಷವಾಗಿ ಸಸ್ಯಾಹಾರಿಗಳೆಲ್ಲರನ್ನೂ ಸಾತ್ವಿಕರನ್ನಾಗಿ ಘೋಷಿಸಲಾಗಿದೆ. ದುರದೃಷ್ಟಕ್ಕೆ ಈ ದೇಶಾದ್ಯಂತ ಹಿಂದುತ್ವದ ಹೆಸರಿನಲ್ಲಿ ದ್ವೇಷದ ವಿಷಗಳನ್ನು ಹರಡುತ್ತಿರುವವರೆಲ್ಲರೂ ಸಾತ್ವಿಕ ಆಹಾರಗಳನ್ನು ಸೇವಿಸುವವರೇ ಆಗಿದ್ದಾರೆ. ಇದೀಗ ಬಟ್ಟೆಯ ಮೂಲಕ ಸಾತ್ವಿಕ-ತಾಮಸಗುಣಗಳನ್ನು ಗುರುತಿಸುವ ಪ್ರಯತ್ನವೊಂದನ್ನು ಪ್ರಧಾನಿ ಮೋದಿಯವರು ಆರಂಭಿಸಿದ್ದಾರೆ. ಅಸ್ಸಾಂ ಸೇರಿದಂತೆ ದೇಶಾದ್ಯಂತ ಪೌರತ್ವ ಮಸೂದೆಯ ವಿರುದ್ಧ ಜನರು ಜಾತಿ ಭೇದ ಮರೆತು ಬೀದಿಗಿಳಿದಿದ್ದಾರೆ. ಆದರೆ ಇದನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪುವುದಕ್ಕೆ ಸಿದ್ಧರಿಲ್ಲ. ಅವರ ಪ್ರಕಾರ ‘ಪ್ರತಿಭಟಿಸುತ್ತಿರುವವರು ಯಾರು ಎನ್ನುವುದನ್ನು ಅವರ ಬಟ್ಟೆಯ ಮೂಲಕವೇ ಗುರುತಿಸಬಹುದು’ ಎಂಬ ಅತ್ಯಂತ ಹೇಯ ಹೇಳಿಕೆಯನ್ನು ನೀಡಿದ್ದಾರೆ.

ಪ್ರತಿಭಟಿಸುವವರು ಯಾಕೆ ಪ್ರತಿಭಟಿಸುತ್ತಿದ್ದಾರೆ ಎನ್ನುವುದಕ್ಕಿಂತ, ಅವರು ಯಾವ ಬಟ್ಟೆ ಧರಿಸಿದ್ದಾರೆ ಎನ್ನುವುದು ಪ್ರಧಾನಿಯವರಿಗೆ ಮುಖ್ಯವಾಗಿದೆ. ಬಹುಶಃ ನಿರ್ದಿಷ್ಟವಾದ ಕೆಲವು ಬಟ್ಟೆಗಳನ್ನು ಧರಿಸಿದವರ ಪ್ರತಿಭಟನೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿಲ್ಲ ಎನ್ನುವುದು ಅವರ ಉದ್ದೇಶವಾಗಿರಬಹುದು. ಪ್ರತಿಭಟನೆಗಳನ್ನು ಬಟ್ಟೆಗಳ ಮೂಲಕ ಒಡೆಯಲು ಹೊರಟ ಪ್ರಧಾನಿಯವರ ಲೆಕ್ಕ ತಪ್ಪಿದಂತಿದೆ. ಅವರ ಹೇಳಿಕೆಗೆ ಪ್ರತ್ಯುತ್ತರವೋ ಎಂಬಂತೆ ನಾಲ್ದೆಸೆಗಳಿಂದ ಪ್ರತಿಭಟನೆಯ ನದಿಗಳು ಹರಿದು ಕಡಲಾಗಿ ವಿಸ್ತಾರಗೊಳ್ಳುತ್ತಿದೆ. ಅಸ್ಸಾಂ ಸಹಿತ ದೇಶದ ಮೂಲೆ ಮೂಲೆಗಳಿಂದ ಪ್ರತಿಭಟನೆಯ ಧ್ವನಿಗಳು ಮುಗಿಲು ಮುಟ್ಟಿವೆ. ಪೊಲೀಸರ ಮೂಲಕ ಇಡೀ ಪ್ರತಿಭಟನೆಯನ್ನು ದಿಕ್ಕು ತಪ್ಪಿಸಬಹುದು ಎಂಬ ‘ಚಾಣಕ್ಯ ತಂತ್ರ’ ಪ್ರತಿಭಟನೆಯ ಅಲೆಗಳಿಗೆ ಕೊಚ್ಚಿ ಹೋಗಿದೆ.

‘ಬಟ್ಟೆಯನ್ನು ನೋಡಿದರೆ ಪ್ರತಿಭಟನಾಕಾರರು ಯಾರೆನ್ನುವುದು ಊಹಿಸಬಹುದು’ ಎಂದು ಮೋದಿ ಹೇಳಿದ ದಿನವೇ ಪೊಲೀಸರು ನಿರ್ದಿಷ್ಟ ಬಟ್ಟೆಗಳನ್ನು ಗುರಿಯಿಟ್ಟು ದಾಳಿ ನಡೆಸಿದ್ದು ಕಾಕತಾಳೀಯವೇನೂ ಅಲ್ಲ. ದಿಲ್ಲಿಯಲ್ಲಿ ಜಾಮಿಯಾ ಮಿಲ್ಲಿಯಾ ವಿವಿಯ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಿರ್ದಿಷ್ಟ ಸಮುದಾಯದ ಪ್ರತಿಭಟನೆಯೆಂದು ಬಿಂಬಿಸುವ ಸರಕಾರದ ಪ್ರಯತ್ನ ವಿಫಲವಾಗಿದೆ. ಇದೇ ಸಂದರ್ಭದಲ್ಲಿ ಪ್ರತಿಭಟನೆಯನ್ನು ದಮನಿಸುವುದಕ್ಕೆ ಸರಕಾರ ಅತ್ಯಂತ ಹೇಯ ತಂತ್ರಗಳನ್ನು ಬಳಸಿಕೊಳ್ಳುತ್ತಿರುವುದು ಬೇರೆ ಬೇರೆ ಮೂಲಗಳಿಂದ ಬೆಳಕಿಗೆ ಬರುತ್ತಿವೆ. ಪ್ರತಿಭಟನೆಯ ಸಂದರ್ಭದಲ್ಲಿ ಹಲವು ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಇವುಗಳೆಲ್ಲವನ್ನು ಮಾಡಿರುವುದು ಪ್ರತಿಭಟನಾಕಾರರು ಎಂದು ಬಿಂಬಿಸುವುದು ಪೊಲೀಸರ ಉದ್ದೇಶವಾಗಿತ್ತು. ಆ ಮೂಲಕ ವಿದ್ಯಾರ್ಥಿಗಳ ಮೇಲೆ ತಾವು ಎಸಗಲಿರುವ ದೌರ್ಜನ್ಯಗಳನ್ನು ಸಮರ್ಥಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದರು. ಆದರೆ ಇದೀಗ, ‘ಪೊಲೀಸರೇ ಪೆಟ್ರೋಲ್ ಸುರಿದು ಬಸ್‌ಗಳಿಗೆ ಬೆಂಕಿ ಹಚ್ಚುವ’ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಅಷ್ಟೇ ಅಲ್ಲ ದಿಲ್ಲಿಯ ಉಪಮುಖ್ಯಮಂತ್ರಿಯವರೇ ‘‘ಸಾರ್ವಜನಿಕ ಸೊತ್ತುಗಳನ್ನು ಹಾನಿಗೆಡವಲು ಕೇಂದ್ರ ಸರಕಾರ ಪೊಲೀಸರನ್ನೇ ಬಳಸಿಕೊಳ್ಳುತ್ತಿದೆ’’ ಎಂದು ಆರೋಪಿಸಿದ್ದಾರೆ. ಅಂದರೆ ಕೇಂದ್ರ ಸರಕಾರದ ಉದ್ದೇಶ ಸ್ಪಷ್ಟ. ಪ್ರತಿಭಟನಾಕಾರರು ಹಿಂಸಾಚಾರ ಎಸಗಿದ್ದಾರೆ ಎಂದು ಆರೋಪಿಸಿ, ಬಳಿಕ ಪೊಲೀಸರ ಮೂಲಕ ಬಗ್ಗು ಬಡಿಯುವುದು. ಜೊತೆಗೆ ನಿಧಾನಕ್ಕೆ ಇದನ್ನು ‘ಹಿಂದೂ-ಮುಸ್ಲಿಮ್’ ಎಂಬ ಹಣೆಪಟ್ಟಿ ಕಟ್ಟಿ ಕೋಮುಹಿಂಸಾಚಾರವಾಗಿ ಪರಿವರ್ತಿಸುವುದು. ಆ ಬಳಿಕ, ಪ್ರತಿಭಟನಾಕಾರರನ್ನು ‘ಜಿಹಾದಿಗಳು, ನಕ್ಸಲರು’ ಎಂಬೆಲ್ಲ ಹಣೆಪಟ್ಟಿ ಕಟ್ಟಿ ಕೊಂದು ಹಾಕುವುದು ಅಥವಾ ಬಂಧಿಸುವುದು. ಇದಕ್ಕೆ ಪೂರಕವಾಗಿ ಬಿಜೆಪಿಯ ನಾಯಕರು ನಕಲಿ ವೀಡಿಯೊಗಳನ್ನು ತಯಾರಿಸಿ ಪ್ರಸಾರ ಮಾಡಿದ್ದರು. ಆ ವೀಡಿಯೊಗಳಲ್ಲಿ ‘ಅಲಿಗಡ್ ವಿವಿಯ ವಿದ್ಯಾರ್ಥಿಗಳು ಹಿಂದೂಗಳ ವಿರುದ್ಧ ಘೋಷಣೆ ಕೂಗುವ’ ದೃಶ್ಯಗಳಿದ್ದವು. ಆದರೆ ಬಳಿಕ ಅದು ನಕಲಿ ಎನ್ನುವುದು ಸಾಬೀತಾಯಿತು. ಇದೀಗ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಎಸಗಿದ ದೌರ್ಜನ್ಯಗಳ ವಿರುದ್ಧ ದೇಶಾದ್ಯಂತ ಆಕ್ರೋಶಗಳು ಮೊಳಗುತ್ತಿವೆ.

ಜಾಮಿಯಾ ಮಿಲಿಯಾ ವಿಶ್ವ ವಿದ್ಯಾನಿಲಯದ ಜೊತೆಗೆ ದೇಶದ ಎಲ್ಲ ವಿಶ್ವವಿದ್ಯಾನಿಲಯಗಳೂ ಕೈ ಜೋಡಿಸಿವೆ. ಪ್ರತಿಭಟನೆ ಉತ್ತರದಿಂದ ದಕ್ಷಿಣಕ್ಕೂ ವಿಸ್ತರಿಸಿದೆ. ಹೈದರಾಬಾದ್ ವಿವಿಯಲ್ಲೂ ಪೌರತ್ವ ಕಾಯ್ದೆಯ ವಿರುದ್ಧ ಘೋಷಣೆ ಮುಗಿಲು ಮುಟ್ಟಿದೆ. ಕೇರಳದಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಜೊತೆಗೂಡಿ ಬೀದಿಗಿಳಿದಿವೆ. ಈಗಾಗಲೇ ಸುಮಾರು ಎಂಟು ಯುವಕರು ಪೊಲೀಸರ ಗುಂಡಿಗೆ ಎದೆಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಅಂತರ್‌ರಾಷ್ಟ್ರೀಯ ಮಟ್ಟದಿಂದ ಬೆಂಬಲ ದೊರಕುತ್ತಿವೆ. ಕಲಾವಿದರು ಪ್ರತಿಭನಾಕಾರರಿಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಬಟ್ಟೆಗಳಿಂದ ಜನರನ್ನು ಗುರುತಿಸುವ ಪ್ರಧಾನಿ ಮೋದಿಯವರು, ಪ್ರತಿಭಟನಾಕಾರರ ಮೇಲೆ ಲಾಠಿ ಬೀಸುತ್ತಿರುವವರ ಬಟ್ಟೆಗಳನ್ನು ಗಮನಿಸಬೇಕಾಗಿದೆ. ಅವರಲ್ಲಿ ಬಹುತೇಕರು ಪೊಲೀಸರೇ ಆಗಿರಲಿಲ್ಲ ಎನ್ನುವ ಆರೋಪಗಳಿವೆ. ಯಾಕೆಂದರೆ ಅವರು ಪೊಲೀಸರ ಸಮವಸ್ತ್ರ ಧರಿಸಿಲ್ಲ. ಅವರ ಕೈಯಲ್ಲಿರುವ ಲಾಠಿಗಳು ಪೊಲೀಸ್ ಇಲಾಖೆಯಲ್ಲಿ ಬಳಸುವುದಲ್ಲ, ಆರೆಸ್ಸೆಸ್ ಶಾಖೆಯಲ್ಲಿ ಬಳಸುತ್ತಿರುವುದು ಎನ್ನುವುದೂ ಬೆಳಕಿಗೆ ಬಂದಿದೆ. ಪೊಲೀಸರ ಜೊತೆಗೆ ಸಂಘಪರಿವಾರದ ಕಾರ್ಯಕರ್ತರನ್ನು ತುರುಕಿಸಲಾಗಿತ್ತೇ? ಈ ಹಿಂದೆ ಜೆಎನ್‌ಯು ಪ್ರತಿಭಟನೆಯನ್ನು ವಿಫಲಗೊಳಿಸಲು ಸಂಘಪರಿವಾರ ಕಾರ್ಯಕರ್ತರು ಪ್ರತಿಭಟನೆಯೊಳಗೆ ನುಸುಳಿಕೊಂಡಂತೆ, ಇಲ್ಲಿ ಪೊಲೀಸರ ವೇಷದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಹಿಂಸಾಚಾರ ಎಸಗಿದರೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಕೋಮುಗಲಭೆಯಲ್ಲಿ ಪೊಲೀಸರು ನೇರವಾಗಿ ಭಾಗವಹಿಸುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ.

ಇದೀಗ ಪೊಲೀಸರ ಜೊತೆಗೆ ಸಂಘಪರಿವಾರದ ಕಾರ್ಯಕರ್ತರು ಸೇರಿ ದೌರ್ಜನ್ಯವೆಸಗುವ ಪ್ರಕರಣಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಯಾವುದೇ ಹಿಂಸಾಚಾರವನ್ನು ನಡೆಸದೇ ಇದ್ದಾಗಲೂ, ಪೊಲೀಸರು ಬಲವಂತವಾಗಿ ವಿಶ್ವವಿದ್ಯಾನಿಲಯದೊಳಗೆ ನುಗ್ಗಿದರು ಎನ್ನುವುದು ಅಲ್ಲಿನ ಆಡಳಿತ ಮಂಡಳಿಯ ಆರೋಪವಾಗಿದೆ. ಈ ಆರೋಪವನ್ನು ಗಂಭೀರವಾಗಿ ಸ್ವೀಕರಿಸುವ ಅಗತ್ಯವಿದೆ. ದೇಶ ಆರ್ಥಿಕವಾಗಿ ಮುಗ್ಗರಿಸಿ ಕೂತಿರುವ ಈ ದಿನಗಳಲ್ಲಿ ಪೊಲೀಸರು ಮತ್ತು ಸಂಘಪರಿವಾರವನ್ನು ಬಳಸಿಕೊಂಡು ದೇಶಾದ್ಯಂತ ಅರಾಜಕತೆಯನ್ನು ಸೃಷ್ಟಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆಯೇ ಎಂಬ ಅನುಮಾನ ಜನರನ್ನು ಕಾಡುತ್ತಿದೆ. ಕಳೆದ 70 ವರ್ಷಗಳಲ್ಲಿ ಈ ದೇಶವನ್ನು ಹಲವು ಮಹನೀಯರು ಕಟ್ಟಿ ಬೆಳೆಸಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಕೃಷಿ, ಸಾಹಿತ್ಯ, ಚಿಂತನೆಗಳ ಮೂಲಕ ವಿಶ್ವದಲ್ಲೇ ಭಾರತ ಗೌರವಿತ ದೇಶವಾಗಿ ಮೂಡಿ ಬಂದಿತ್ತು. ‘ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ’ ಎಂಬಂತೆ ಆರೆಸ್ಸೆಸ್‌ನ ಕೈಯಲ್ಲಿರುವ ದೊಣ್ಣೆ, ಜಾತ್ಯತೀತ ಭಾರತವನ್ನು ಒಡೆದು ಹಾಕಲು ಮುಂದಾಗಿದೆ. ಈ ದೊಣ್ಣೆಯನ್ನು ಕಿತ್ತುಕೊಂಡು ದೇಶವನ್ನು ಕಾಪಾಡುವ ಹೊಣೆ, ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ಮೇಲೆ ನಂಬಿಕೆಯಿರುವ ಎಲ್ಲರ ಕರ್ತವ್ಯವಾಗಿದೆ. ದೇಶ ಎರಡನೆ ಸ್ವಾತಂತ್ರ ಹೋರಾಟಕ್ಕೆ ಸಜ್ಜಾಗುತ್ತಿದೆ. ಈ ಬಾರಿ ಬ್ರಿಟಿಷರ ವಿರುದ್ಧವಲ್ಲ, ನಮ್ಮವರ ವೇಷದಲ್ಲಿರುವ ಮನುವಾದಿ ಸಿದ್ಧಾಂತದ ವಿರುದ್ಧ. ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತ ಇದು ತುಂಬಾ ಕಠಿಣ. ಯಾಕೆಂದರೆ ಶತ್ರು ಇಲ್ಲಿ ನಮ್ಮವರ ವೇಷದಲ್ಲೇ ಇದ್ದಾನೆ. ಆದರೆ ಈ ಶತ್ರುಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News