ಗುಂಡ್ಲುಪೇಟೆ: ನೀರಿನಲ್ಲಿ ಮುಳುಗಿ ಜೀವ ಕಳೆದುಕೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳ

Update: 2019-12-17 17:59 GMT

ಗುಂಡ್ಲುಪೇಟೆ, ಡಿ.17: ಈಜಲು ಬಾರದಿದ್ದರೂ ವಿದ್ಯಾರ್ಥಿಗಳು ನೀರಿಗಿಳಿದು ಸಾವಿಗೀಡಾಗುತ್ತಿರುವ ಆತಂಕಕಾರಿ ಪ್ರಕರಣಗಳ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಬೇಕಾದ ಅಗತ್ಯ ಹೆಚ್ಚಾಗಿದೆ.

ಕಳೆದ ಹತ್ತಾರು ವರ್ಷಗಳಿಂದ ಮಳೆಯ ಕೊರತೆಯಿಂದ ಬರಡಾಗಿದ್ದ ತಾಲೂಕಿನ ಬಹುತೇಕ ಕೆರೆಗಳಲ್ಲಿ ರಸ್ತೆ ಕಾಮಗಾರಿ ನಡೆಸಲು ಮಣ್ಣು ಹಾಗೂ ಮರಳು ತೆಗೆಯಲಾಗಿದ್ದು, ಭಾರೀ ಪ್ರಮಾಣದ ಗುಂಡಿಗಳಾಗಿವೆ. ಕೆರೆಗಳಿಗೆ ಇತ್ತೀಚಿನ ದಿನಗಳಲ್ಲಿ ನದಿ ಮೂಲದಿಂದ ನೀರು ತುಂಬಿಸಲಾಗುತ್ತಿದ್ದು, ಕೆರೆಗಳು ತುಂಬಿರುವುದನ್ನು ನೋಡಲು ಹೆಚ್ಚಿನ ಜನರು ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಈಜಲು ಬಾರದ ವಿದ್ಯಾರ್ಥಿಗಳು ಹಾಗೂ ಯುವಕರು ನೀರಿಗಿಳಿಯಲು ಮುಂದಾಗುತ್ತಿರುವ ಪರಿಣಾಮ ಕೆರೆಯಲ್ಲಿ ಮುಳುಗಿ ಸಾವಿಗೀಡಾಗುತ್ತಿದ್ದಾರೆ. 

ನೀರು ತುಂಬಿದ ಕೆರೆಯ ಏರಿಗಳು ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಸಂಬಂಧ ಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ಇಲ್ಲವೇ ಸೂಚನಾ ಫಲಕ ಅಳವಡಿಸದಿರುವುದು ದುರಂತ ಹೆಚ್ಚಲು ಕಾರಣವಾಗಿವೆ. ತಮ್ಮಡಹಳ್ಳಿ ಹಾಗೂ ಹುತ್ತೂರು ಕೆರೆಗಳಲ್ಲಿ ಬೇರೆ ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ಸದಾ ತುಂಬಿಸಲಾಗುತ್ತಿದೆ. ಕೆಸರಿನಿಂದ ಕೂಡಿದ ಆಳವಾದ ಗುಂಡಿಗಳ ಅರಿವಿಲ್ಲದೆ ನೀರಿಗಿಳಿದವರು ಹೆಚ್ಚಾಗಿ ಸಾವಿಗೀಡಾಗುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ನೀರು ತುಂಬಿದ ಕೆರೆಗೆ ಕಾವಲುಗಾರರ ನೇಮಕ, ಸೂಚನಾ ಫಲಕ ಅಳವಡಿಕೆ, ಶಾಲಾ ಕಾಲೇಜುಗಳಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಸರಣಿ ದುರಂತಗಳನ್ನು ತಪ್ಪಿಸಬೇಕು ಎಂಬುದು ಸಾರ್ವಜನಿಕರ ಆಶಯ.

ಪ್ರಕರಣಗಳು: ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2018ರ ಜನವರಿಯಲ್ಲಿ ಕುರುಬರಹುಂಡಿ ಗ್ರಾಮದ ಭರತ್, ಫೆಬ್ರವರಿಯಲ್ಲಿ ಯರಿಯೂರಿನ ಗುರುಸ್ವಾಮಿ, 2019ರ ಫೆಬ್ರವರಿಯಲ್ಲಿ ದೇಪಾಪುರ ಗ್ರಾಮದ ರವಿ, ಮಾರ್ಚ್ ನಲ್ಲಿ ಉಡೀಗಾಲ ಕಿರಣ್, ಎಪ್ರಿಲ್‍ನಲ್ಲಿ ತೆರಕಣಾಂಬಿಯ ನಂದೀಶ್ವರ್, ಭಾವ ತಮಿಳ್ ಸೆಲ್ವನ್, ಗುಂಡ್ಲುಪೇಟೆ ಠಾಣೆ ವ್ಯಾಪ್ತಿಯಲ್ಲಿ ಮೂವರು ಅಪರಿಚಿತರು, ಮದ್ದೂರು ಕೆರೆಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಕೀಳಲು ಹೋಗಿದ್ದ ಹಸಗೂಲಿಯ ನಾಗಶೆಟ್ಟಿ, ಗುಂಡ್ಲುಪೇಟೆಯ ಕುಮಾರ, ನಂದೀಶ, ತಮಿಳುನಾಡಿನ ರಾಜೇಂದ್ರ, ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಹಿರೀಕಾಟಿಯ ಮಹದೇವಸ್ವಾಮಿ, ಬೆಳಚಲವಾಡಿಯ ಚಂದನ್ ಹಾಗೂ ಪ್ರವೀಣ್, ನಿನ್ನೆ( ಭಾನುವಾರ) ಚನ್ನವಡೆಯನಪುರದ ಲಿಖಿತ್ ಸಾವಿಗೀಡಾಗಿದ್ದಾರೆ.

ಕಳೆದ 2018ರಲ್ಲಿ 6, 2019ರಲ್ಲಿ 6 ಪ್ರಕರಣಗಳು ದಾಖಲಾಗಿದ್ದು ಒಟ್ಟು 18 ಜನರು ಮೃತಪಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ಹುತ್ತೂರು ಕೆರೆಯೊಂದರಲ್ಲಿಯೇ ಸುಮಾರು 12ಕ್ಕೂ ಹೆಚ್ಚಿನ ಜನರು ಮುಳುಗಿ ಸಾವಿಗೀಡಾಗಿದ್ದಾರೆ. ಆದರೆ ಕೆರೆಯಲ್ಲಿ ಮುಳುಗಿದ ಒಬ್ಬರನ್ನೂ ಜೀವಂತವಾಗಿ ಉಳಿಸಲು ಸಾಧ್ಯವಾಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ವಿಷಾದಿಸುತ್ತಾರೆ.

ಸರಿಯಾಗಿ ಈಜು ಬಾರದಿದ್ದರೂ ಕೆರೆಗಿಳಿದವರು, ನೀರು ಕುಡಿಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದವರು, ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಹೋಗಿ ಕೆರೆಗೆ ಬಿದ್ದವರು ಇದ್ದಾರೆ. ಕೆರೆಗಳಂತೆ ಕೃಷಿ ಹೊಂಡಗಳಿಗೂ ಸುತ್ತಲೂ ಬೇಲಿ ಹಾಗೂ ಸೂಚನಾ ಫಲಕ ಅಳವಡಿಸಬೇಕಾಗಿದೆ. ಅಲ್ಲದೆ ಪಾಲಕರು ಹಾಗೂ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ. 
-ಕಡಬೂರು ಮಂಜುನಾಥ್, ರೈತ ಮುಖಂಡರು

ಪ್ರತಿ ವರ್ಷವೂ ಶಾಲಾ ಕಾಲೇಜುಗಳಲ್ಲಿ ಇಲಾಖೆಯ ವತಿಯಿಂದ ಆಯೋಜಿಸುವ ಪ್ರಾತ್ಯಕ್ಷಿಕೆ ಹಾಗೂ ಅರಿವು ಕಾರ್ಯಕ್ರಮಗಳಲ್ಲಿ ನದಿ, ಕೆರೆ, ಕಟ್ಟೆ ಹಾಗೂ ಕೃಷಿ ಹೊಂಡಗಳ ಸಮೀಪಕ್ಕೆ ಹೋಗದಂತೆ ಎಚ್ಚರಿಕೆ ಹಾಗೂ ತಿಳುವಳಿಕೆ ಮೂಡಿಸಲಾಗುತ್ತಿದೆ. ಗಣಪತಿ ವಿಸರ್ಜನೆ ಸಂದರ್ಭದಲ್ಲಿಯೂ ಸಾಮೂಹಿಕ ವಿಸರ್ಜನೆಗೆ ಆದ್ಯತೆ ನೀಡುವಂತೆ ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಪಾಲಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಅರಿವು ಪಡೆದು ಪಾಲಿಸಬೇಕಾಗಿದೆ. ಯಾವುದೇ ಕೆರೆಯ ನೀರಿನಲ್ಲಿ ಮುಳುಗಿ ಸಾವಿಗೀಡಾದವರ ಪತ್ತೆಗೆ ತೆಪ್ಪವನ್ನು ಬೇರೆಡೆಯಿಂದ ತರುವವರೆಗೆ ಪತ್ತೆ ಕಾರ್ಯಾಚರಣೆಗೆ ವಿಳಂಬವಾಗುತ್ತಿದೆ. 

-ಚೆಲುವರಾಜು, ಅಗ್ನಿಶಾಮಕದಳದ ಅಧಿಕಾರಿ, ಗುಂಡ್ಲುಪೇಟೆ

Writer - ಅಶ್ವತ್ ಕುಮಾರ್

contributor

Editor - ಅಶ್ವತ್ ಕುಮಾರ್

contributor

Similar News