ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಆರ್.ಅಶೋಕ್ ಹೇಳಿಕೆಗೆ ಡಿಕೆಶಿ ತಿರುಗೇಟು

Update: 2019-12-18 15:56 GMT

ಬೆಂಗಳೂರು, ಡಿ. 18: ಇಂದಿರಾ ಗಾಂಧಿ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ನಾವಿನ್ನು ಇದ್ದೇವೆ, ಸತ್ತಿಲ್ಲ. ಸಚಿವ ಆರ್.ಅಶೋಕ್ ಅವರು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ವಿಚಾರ ಭಾವನಾತ್ಮಕವಾದುದ್ದು. ಇದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ನಾವು ಅಧಿಕಾರದಲ್ಲಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿ ಅನೇಕ ಕಾರ್ಯಕ್ರಮಗಳಿದ್ದವು.

ನಾವು ಅದನ್ನು ಬದಲಾಯಿಸಲು ಮುಂದಾಗಲಿಲ್ಲ. ಆರ್.ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಅಟಲ್ ಸಾರಿಗೆ, ಪಂಚಾಯತ್ ಸೇರಿದಂತೆ ಅನೇಕ ಹಂತಗಳಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರಲ್ಲಿ ಅನೇಕ ಕಾರ್ಯಕ್ರಮ ತಂದಿದ್ದರು. ಜಯಪ್ರಕಾಶ್ ನಾರಾಯಣ, ಮೊರಾರ್ಜಿ ದೇಸಾಯಿ ಸೇರಿದಂತೆ ಇತರೆ ನಾಯಕರ ಹೆಸರಲ್ಲಿನ ಯೋಜನೆಗಳು ಸೇರಿ ಕಾಂಗ್ರೆಸ್ ಆಡಳಿತದಲ್ಲಿ ಹೆಸರು ಬದಲಾವಣೆಗೆ ಮುಂದಾಗಿಲ್ಲ. ಬಿಜೆಪಿಯ ಈ ನಡೆಯನ್ನು ವಿರೋಧಿಸಿ ನಮ್ಮ ಸ್ನೇಹಿತರಿಗೆ ಈ ಮೂಲಕ ಎಚ್ಚರಿಕೆ ರವಾನಿಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News