ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಶೀಲಕ್ಕೆ ಕೈ ಹಾಕುತ್ತಿದೆ: ದೇವನೂರು ಮಹಾದೇವ

Update: 2019-12-24 16:40 GMT

ಮೈಸೂರು,ಡಿ.24: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿಸಿ ಮೈಸೂರಿನಲ್ಲಿ ಸಂವಿಧಾನ ರಕ್ಷಣಾ ಸಮಿತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ದಸಂಸ, ಮುಸ್ಲಿಂ ಸಂಘಟನೆಗಳು, ಮೈಸೂರು ವಿ.ವಿ.ಸಂಶೋಧಕರ ಸಂಘ, ಸಿಪಿಐಎಂ, ಸಿಪಿಐ, ಪಿಯುಸಿಎಲ್, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಪುರಭವನದ ಆವರಣದಲ್ಲಿ ಬುಧವಾರ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಹಿರಿಯ ಸಾಹಿತಿ ದೇವನೂರು ಮಹಾದೇವ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಶೀಲಕ್ಕೆ ಕೈ ಹಾಕುತ್ತಿದೆ ಮತ್ತು ಸಂವಿಧಾನದ ಶೀಲವನ್ನು ಕೆಡಿಸುತ್ತಿದೆ ಎಂದು ಕಿಡಿಕಾರಿದರು.

ಸಂವಿಧಾನವನ್ನು ಪ್ರತ್ಯಕ್ಷವಾಗಿ ವಿರೋಧಿಸದೆ ಅದರ ಶೀಲ ಕೆಡಿಸಿ ಪರೋಕ್ಷವಾಗಿ ಸಂವಿಧಾನವನ್ನು ಮುಳುಗಿಸಿ ಬಿಡುವ ಹುನ್ನಾರ ಇದು. ಸಿಎಎ ಎಂಬುದು ಕಾಗೆಯ ಕೂಗಿನಂತೆ ಕೇಳಿಸುತ್ತಿದೆ. ಇದು ಅಪಶಕುನ, ಕೇಡು ಎಂದು ಭಾರತೀಯರ ಮನಸ್ಸಿಗೆ ಅನ್ನಿಸತೊಡಗಿದೆ ಎಂದು ಹೇಳಿದರು.

ಅಮಿತ್ ಶಾ ಹಲವು ಸಲ ಎನ್‌ಆರ್‌ಸಿ ಜಾರಿಗೆ ತರುತ್ತೇನೆ ಎಂದು ಹೇಳಿದ್ದಾರೆ. ಆದರೆ ಮೋದಿ, ಹಾಗೇನು ಆಲೋಚನೆ ಇಲ್ಲ, ಭಯಪಡಬೇಡಿ ಎಂದು ದೇಶಕ್ಕೆ ಆಶ್ವಾಸನೆ ಕೊಟ್ಟಿದ್ದಾರೆ. ಯಾರನ್ನು ನಂಬುವುದು? ಯಾರನ್ನು ಬಿಡುವುದು? ಇವರಿಬ್ಬರೂ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

1906ರಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ಬ್ರಿಟಿಷರು ತಂದಿದ್ದ ಗುರುತು ಯೋಜನೆಯನ್ನು ಗಾಂಧೀಜಿ ವಿರೋಧಿಸಿದ ರೀತಿಯಲ್ಲೇ ಎನ್‌ಆರ್‌ಸಿ ಪ್ರಕ್ರಿಯೆ ವಿರೋಧಿಸುತ್ತೇನೆ. ಎನ್‌ಆರ್‌ಸಿ ಜಾರಿಗೊಂಡರೆ ಅದರ ದಾಖಲೆಗೆ ಸಹಿ ಹಾಕದ ಮೊದಲ ವ್ಯಕ್ತಿ ನಾನೆ ಆಗಲಿದ್ದೇನೆ. ಸಂವಿಧಾನದ ಶೀಲ ಹಾಗೂ ಭಾರತೀಯತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಭಾರತ ಮಾತೆಯ ಮಕ್ಕಳಾಗಿ ನಾವು ಇಷ್ಟಾದರೂ ಮಾಡಬೇಕಾಗುತ್ತದೆ ಎಂದು ಹೇಳಿದರು.

ಈಗ ಈ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಅಂದೋಲನ ಸರಿಯಾದ ಜಾಗಕ್ಕೆ ಅಂದರೆ ವಿದ್ಯಾರ್ಥಿಗಳ ಅಂಗಳಕ್ಕೆ ಬಂದಿದೆ. ಭಾರತೀಯತೆ ಮತ್ತು ಸಂವಿಧಾನವನ್ನು ಉಳಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಟೊಂಕ ಕಟ್ಟಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಒಂದು ಪ್ರಾರ್ಥನೆ. ದಯವಿಟ್ಟು ಸಂಯಮ ಕಳೆದುಕೊಳ್ಳಬೇಡಿ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಕ್ಷಣೆ ಮಾಡುವ ಹೊಣೆಗಾರಿಕೆ ಕೂಡ ನಿಮ್ಮದೆ. ಜೊತೆಗೆ ವಿದ್ಯಾರ್ಥಿ ಚಳವಳಿ ಒಳಗೆ ಸಮಾಜಘಾತುಕ ಶಕ್ತಿಗಳು ನುಸುಳದಂತೆ ಎಚ್ಚರಿಕೆ ವಹಿಸಿ ಎಂದು ಹೇಳಿದರು.

ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್ ಮಾತನಾಡಿ, ಕೇವಲ ನಾವು ಧರಿಸಿರುವ ಬಟ್ಟೆಯನ್ನ ನೋಡಿ ನಮ್ಮ ಧರ್ಮವನ್ನು ಪ್ರಧಾನಿ ಗುರುತಿಸುವುದಾದರೆ, ನನ್ನ ಹೆಸರು ಕೃಷ್ಣಪ್ರಸಾದ್, ನಾನು ಹಿಂದು. ಈ ಟೋಪಿಯನ್ನು ಧರಿಸುವುದರಿಂದ ನನ್ನ ಧರ್ಮವನ್ನು ಪ್ರಧಾನಿ ಗುರುತಿಸಲಿ ಎಂದರು. ಸುಳ್ಳು ಹೇಳಿದರೆ ನಮ್ಮ ಮನಸ್ಸಿಗೆ ನೋವಾಗುತ್ತದೆ. ಆದರೆ ಪ್ರಧಾನಿಗೆ ಯಾಕೆ ನೋವಾಗುತ್ತಿಲ್ಲ ಎಂದು ತಿಳಿಯುತ್ತಿಲ್ಲ. ಈ ರೀತಿ ಸುಳ್ಳು ಹೇಳುವುದರಲ್ಲಿ ಅವರಿಗೇನು ಖುಷಿಯಿದೆಯೋ ತಿಳಿದಿಲ್ಲ. 1975ಕ್ಕಿಂತಲೂ ಪರಿಸ್ಥಿತಿ ಈಗ ಹದಗೆಟ್ಟಿದೆ. ದೇಶದ ಯುವಕರು ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಜನಸಂಗ್ರಾಮ ಪರಿಷತ್‍ನ ಎಸ್.ಆರ್.ಹಿರೇಮಠ್, ಹಿರಿಯ ಸಮಾಜವಾದಿ ಪ.ಮಲ್ಲೇಶ್, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಿಐಟಿಯುನ ಉಮಾದೇಮಿ, ವಕೀಲೆ ಸುಮನಾ, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಮಂಜುಳಾ ಮಾನಸ, ರತಿರಾವ್, ಪ್ರೊ.ಶಬ್ಬೀರ್ ಮುಸ್ತಫ, ಮಾಜಿ ಮೇಯರ್ ಪುರುಷೋತ್ತಮ್, ಪಂಡಿತಾರಾಧ್ಯ, ಸಿಪಿಎಂನ ಕೆ.ಬಸವರಾಜು, ಮುನವ್ವರ್, ದಸಂಸ ಮುಖಂಡರಾದ ಬೆಟ್ಟಯ್ಯ ಕೋಟೆ, ಚೋರನಹಳ್ಳಿ ಶಿವಣ್ಣ, ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಆಲಗೋಡು ಶಿವಕುಮಾರ್, ಮಲ್ಲಹಳ್ಳಿ ನಾರಾಯಣ, ಜನಸಂಗ್ರಾಮ ಪರಿಷತ್ ವಿಭಾಗೀಯ ಸಂಚಾಲಕ ನಗರ್ಲೆ ವಿಜಯ್‍ ಕುಮಾರ್, ವಿದ್ಯಾರ್ಥಿ ಸಂಘಟನೆಯ ಚಂದ್ರಕಲಾ, ಸುಮನಾ, ಮೈಸೂರು ವಿ.ವಿ.ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ಮಹೇಶ್ ಸೊಸಲೆ, ಹಿಂದುಳಿದ ವರ್ಗಗಳ ಅಧ್ಯಕ್ಷ ಶಿವರಾಂ, ಮೌಲವಿ ಮಹಮದ್ ಖಾನ್, ಮೌಲಾನ ತಾಜುದ್ದೀನ್, ಮೌಲಾನ ಜಖಾವುಲ್ಲಾ, ಮೌಲವಿ ಮಹಮದ್ ನಸೀಮ್, ಅಯೂಬ್ ಅನ್ಸಾರಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಅನೇಕ ಮಂದಿ ಪಾಲ್ಗೊಂಡಿದ್ದರು. 

ಮೋದಿ ಮತ್ತು ಶಾ ಅವರ “ಕಾ ಕಾ” ಕೂಗಿಗೆ  ದೇಶ ಬೆಚ್ಚಿಬಿದ್ದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಧ್ವನಿ ಕಾಗೆಯ ಕೂಗಿನಂತೆ ದೇಶದ ಮನಸ್ಸಿಗೆ ತಟ್ಟಿರಬೇಕು. ಭಾರತೀಯರ ಮನಸ್ಸಿಗೆ “ ಕಾ ಕಾ” ಶಬ್ಧ ಅಪಶಕುನ, ಕೇಡು ಎಂಬಂತೆ ಕೇಳಿಸುತ್ತದೆ. ಹೇಗೆಂದರೆ ನಮ್ಮ ಸಂವಿಧಾನಕ್ಕೆ ಒಂದು ಚರಿತ್ರೆ ಇದೆ. ಹಾಗೆಯೇ ಒಂದು ಚಾರಿತ್ರ್ಯ ಕೂಡ ಇದೆ. ಚಾರಿತ್ರ್ಯ ಎಂದರೆ ಶೀಲ. ನಮ್ಮ ಸಂವಿಧಾನದ ಶೀಲಗಳಲ್ಲಿ ಜಾತ್ಯತೀತ ಮೌಲ್ಯ ತುಂಬಾ ಮುಖ್ಯವಾದುದು, ಆಳ್ವಿಕೆಗೆ ಜಾತಿ ಧರ್ಮಗಳ ವಾಂಛೆ ಇರಬಾರದು ಎನ್ನುವ ಮೌಲ್ಯ ಅದು

- ದೇವನೂರು ಮಹಾದೇವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News