ರಸ್ತೆ ಅಪಘಾತದಲ್ಲಿ ಉದ್ಯಮಿ ಮೃತ್ಯು
Update: 2019-12-25 18:08 GMT
ಮಂಡ್ಯ, ಡಿ.25: ಮುಂಬೈನಲ್ಲಿ ಉದ್ಯಮಿಯಾಗಿರುವ ಕೆ.ಆರ್.ಪೇಟೆ ತಾಲೂಕಿನ ಯಲಾದಹಳ್ಳಿ ಗ್ರಾಮದ ಮಹೇಂದ್ರ(51) ಹುಬ್ಬಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪತ್ನಿ ಯಶೋಧ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಂಬೈನಿಂದ ತಮ್ಮ ಸ್ವಗ್ರಾಮವಾದ ಯಲಾದಹಳ್ಳಿಗೆ ಬರುವ ಮಾರ್ಗದ ಮಧ್ಯದಲ್ಲಿ ಹುಬ್ಬಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಮತ್ತು ಇನ್ನೋವಾ ಕಾರಿನ ನಡುವೆ ಅಪಘಾತ ಸಂಭವಿಸಿ ಮಹೇಂದ್ರ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಪತ್ನಿ ಯಶೋಧಮ್ಮ, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಮಹೇಂದ್ರ ಅವರ ಅಕಾಲಿಕ ನಿಧನಕ್ಕೆ ಶಾಸಕ ನಾರಾಯಣಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಕಿಕ್ಕೇರಿ ಸುರೇಶ್, ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ.