ಯು.ಟಿ.ಖಾದರ್ ಒಬ್ಬ ಹುಚ್ಚ, ದೇಶದ್ರೋಹಿ ಎಂದ ಬಿಜೆಪಿ ಶಾಸಕ ರೇಣುಕಾಚಾರ್ಯ
ಬೆಂಗಳೂರು, ಡಿ. 27: ‘ಮಾಜಿ ಸಚಿವ ಯು.ಟಿ.ಖಾದರ್ ಒಬ್ಬ ಫಾಗಲ್, ಅವನೊಬ್ಬ ಹುಚ್ಚ, ದೇಶದ್ರೋಹಿ. ಆತನಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ’ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಟೀಕಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಗಲಭೆಗೆ ಖಾದರ್ ಹೇಳಿಕೆಯೇ ಮೂಲ ಕಾರಣ. ಹೀಗಾಗಿ ಸರಕಾರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ನೇಪಾಳ, ಬಾಂಗ್ಲಾ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಿಂದ ಅಕ್ರಮವಾಗಿ ಬಂದಿರುವ 50 ಸಾವಿರಕ್ಕೂ ಹೆಚ್ಚು ಮಂದಿ ರಾಜ್ಯದಲ್ಲಿ ನೆಲೆಸಿದ್ದಾರೆ. ಇಂತಹವರಿಗೆ ಅಶ್ರಯ ನೀಡಲು ‘ಭಾರತ ಮಾವನ ಮನೆ’ ಅಲ್ಲ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮ ಅನಿವಾರ್ಯ ಎಂದರು.
ದೇಶದ ಐಕ್ಯತೆ ದೃಷ್ಟಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದರ ವಿರುದ್ಧ ಹೋರಾಟದ ನೆಪದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಸಲ್ಲ. ಆಸ್ತಿ ನಷ್ಟ ಉಂಟು ಮಾಡಿದವರಿಂದಲೇ ವಸೂಲಿ ಮಾಡಬೇಕು. ಪಶ್ಚಿಮ ಬಂಗಾಳ ಸಿಎಂ ತನ್ನ ರಾಜ್ಯದ ಉಸಾಬರಿ ನೋಡಿಕೊಳ್ಳುವುದನ್ನು ಬಿಟ್ಟು ಇಲ್ಲಿ ಗಲಭೆ ಸೃಷ್ಟಿಗೆ ಯತ್ನಿಸುವುದು ಬೇಡ ಎಂದು ರೇಣುಕಾಚಾರ್ಯ ಟೀಕಿಸಿದರು.
ಉಪಮುಖ್ಯಮಂತ್ರಿ ಹುದ್ದೆ ಬೇಡ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ. ಇದನ್ನು ಮುಖ್ಯಮಂತ್ರಿ ನನ್ನ ಮೂಲಕ ಹೇಳಿಸಿದ್ದಾರೆಂಬುದು ಸುಳ್ಳು. ಅವರಿಗೆ ಅದರ ಅಗತ್ಯವಿಲ್ಲ. ಬಿಎಸ್ವೈ ಅವರು ಎಲ್ಲೆ ಇದ್ದರೂ ಹುಲಿ ಹುಲಿಯೇ ಎಂದು ಅವರು ತಿಳಿಸಿದರು.