×
Ad

ಆರೆಸ್ಸೆಸ್, ಬಿಜೆಪಿ, ಜನಸಂಘ ಗಿರಾಕಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಇರಲೇ ಇಲ್ಲ: ಸಿದ್ದರಾಮಯ್ಯ

Update: 2019-12-28 17:59 IST

ಬೆಂಗಳೂರು, ಡಿ.28: ಬಿಜೆಪಿಯವರು ಸಿಎಎ, ಎನ್‌ಆರ್‌ಸಿ ಜಾರಿಗೆ ತರುವ ಮೂಲಕ ಭಾರತವನ್ನು ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಹೊರಟಿದ್ದು, ಇಂತಹ ಅನಿಷ್ಟ ನೀತಿಗಳನ್ನು ವಿರೋಧಿಸಿ ತೀವ್ರ ಸ್ವರೂಪದ ಹೋರಾಟ ಮಾಡಬೇಕಾಗಿದೆ. ಸಂವಿಧಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ನಾಯಕರು ಒಕ್ಕೊರಲಿನಿಂದ ಕರೆ ನೀಡಿದ್ದಾರೆ.

ಶನಿವಾರ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಿಂದ ಸ್ವಾತಂತ್ರ ಉದ್ಯಾನದವರೆಗೆ ನಡೆದ ಜಾಥಾ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರುಗಳು, ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಗಳನ್ನೇ ಜಾರಿಗೆ ತಂದಿದೆ. ಈಗ ಮತ್ತೆ ಸಿಎಎ, ಎನ್‌ಆರ್‌ಸಿಯನ್ನು ಜಾರಿಗೆ ತರುವ ಮೂಲಕ ಧರ್ಮಗಳನ್ನು ಒಡೆಯುವ ಕೆಲಸಕ್ಕೆ ಕೈಹಾಕಿದೆ. ಇಂತಹ ಅನಿಷ್ಟ ನೀತಿಗಳನ್ನು ವಿರೋಧಿಸಿ ಹೋರಾಟ ಮಾಡಬೇಕಾಗಿದೆ ಕರೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪಕ್ಷ 135ನೆ ವರ್ಷಕ್ಕೆ ಕಾಲಿಡುತ್ತಿದ್ದು, ಈ ಸಂದರ್ಭದಲ್ಲಿ ನಾವೆಲ್ಲರೂ ಇದರ ಉದ್ದೇಶ, ಆಶಯ ಈಡೇರಿಸುವ ಸಂಕಲ್ಪ ಮಾಡಬೇಕು. ದೇಶದಲ್ಲಿ ಇಷ್ಟೊಂದು ದೊಡ್ಡ ಪಕ್ಷ ಮತ್ತೊಂದಿಲ್ಲ. ಆರೆಸೆಸ್ಸ್, ಬಿಜೆಪಿ, ಜನಸಂಘ ಗಿರಾಕಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಇರಲೇ ಇಲ್ಲ. ದೇಶದಲ್ಲಿ ಸಾಮಾಜಿಕ, ಆರ್ಥಿಕ, ಸಾಮಾಜಿಕ ಬೆಳವಣಿಗೆ ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ ಹೊರತು ಬೇರಾರೂ ಅಲ್ಲ ಎಂದು ಹೇಳಿದರು.

ನೆಹರು ಅವರು ಮಿಶ್ರ ಆರ್ಥಿಕ ನೀತಿಗೆ ಒತ್ತು ನೀಡಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಸಂಸ್ಥೆಯನ್ನೂ ಖಾಸಗಿಯವರಿಗೆ ಮಾರಾಟ ಮಾಡಿ, ಸಾಮಾಜಿಕ ನ್ಯಾಯಕ್ಕೆ ದೊಡ್ಡ ಕೊಡಲಿ ಪೆಟ್ಟು ಕೊಟ್ಟಿದ್ದಾರೆ ಎಂದರು.

ಇತಿಹಾಸ ತಿರುಚುವುದೇ ಬಿಜೆಪಿ ಕೆಲಸವಾಗಿದ್ದು, ದೇಶದ ಯುವಕರಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ಮೋದಿ ಚೌಕಿದಾರ ಎಂದು ಹೇಳುತ್ತಾರೆ. ಉಪಚುನಾವಣೆಯಲ್ಲಿ ಬಿಎಸ್‌ವೈ 30 ಕೋಟಿ ರೂ.ತಲಾ ಒಂದೊಂದು ಅಭ್ಯರ್ಥಿಗಳಿಗೆ ನೀಡಿದಾಗ ಯಾಕೆ ಚೌಕಿದಾರಿಕೆ ಮಾಡಲಿಲ್ಲ. ಇದನ್ನೂ ನಾವೇ ಪ್ರಶ್ನಿಸಬೇಕಿದೆ. ದೇಶದ ಜನರ ದಾರಿ ತಪ್ಪಿಸುವ ಕಾರ್ಯ ಬಿಜೆಪಿ ನಾಯಕರಿಂದ ಆಗುತ್ತಿದೆ. ದೇಶದ ಜಿಡಿಪಿ ಕುಸಿದಿದ್ದು, ಖಾಸಗಿ ಕ್ಷೇತ್ರದ ಕಂಪೆನಿ, ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ ಕಡಿಮೆ ಆಗುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ಆಡಳಿತದ ಅಂತ್ಯದ ಆರಂಭವಾಗಿದೆ. ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಮುಂದೆ ಹೆಜ್ಜೆ ಇಟ್ಟರೆ ಪಕ್ಷಕ್ಕೆ ಯಶಸ್ಸು ಸಿಗುವುದು ನಿಶ್ಚಿತ. ಈಚೆಗೆ ನಡೆದ ಚುನಾವಣಾ ಫಲಿತಾಂಶಗಳು ನಮ್ಮ ನಿರೀಕ್ಷೆಗಳನ್ನು ಪುಷ್ಟೀಕರಿಸಿವೆ. 300 ಸೀಟು ಬಿಜೆಪಿಗೆ ಬಂತು ಎಂದು ಕಾಂಗ್ರೆಸ್ ಪಕ್ಷದವರು ಹೆದರಬೇಕಿಲ್ಲ. ನಮ್ಮ ಶಕ್ತಿ ಏನೆಂದು ತೋರಿಸಬೇಕಾಗಿದೆ ಎಂದು ಹೇಳಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಜನಪರ ಆಡಳಿತ ನೀಡುವುದನ್ನು ಮೋದಿ ಮರೆತಿದ್ದು, ಬಿಜೆಪಿ ದೇಶವನ್ನು ಹಿಂದೂರಾಷ್ಟ್ರ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಸಿಎಎ, ಎನ್‌ಆರ್‌ಸಿ ವಿರೋಧಿಸಿದ ವಿದ್ಯಾರ್ಥಿಗಳನ್ನು ಹೊಡೆದಿದ್ದು, ಕೊಂದಿದ್ದನ್ನು ಇಡೀ ವಿಶ್ವವೇ ನೋಡುತ್ತಿದೆ. ವಿಶ್ವದ ವಿವಿಧ ರಾಷ್ಟ್ರದ ವಿವಿಗಳ ವಿದ್ಯಾರ್ಥಿಗಳು ಖಂಡಿಸಿದ್ದಾರೆ. ದೇಶ ಬಡತನಕ್ಕೆ ಬಂದಿದೆ. ರೈತ, ಬಡವ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾನೆ. ಬಿಜೆಪಿ, ಕಾಂಗ್ರೆಸ್ ಮುಕ್ತ ಮಾಡಲು ಹೊರಟು ತಾನೆ ಮುಕ್ತವಾಗುತ್ತಿದೆ ಎಂದು ಹೇಳಿದರು.

ದಿನೇಶ್ ಗುಂಡೂರಾವ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಸುಪ್ರೀಂಕೋರ್ಟ್ ಇದನ್ನು ರದ್ದು ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ದೇಶದ ಜನರು ನಾಲ್ಕಾರು ವರ್ಷದಿಂದ ಹಿಂಸೆ ಅನುಭವಿಸುತ್ತಿದ್ದಾರೆ. 19 ಲಕ್ಷ ಜನ ಪೌರತ್ವ ಕಳೆದುಕೊಳ್ಳುತ್ತಿದ್ದು, ಬಿಜೆಪಿಯವರು ಇದರಲ್ಲಿ ಹೆಚ್ಚಿನವರು ಮುಸಲ್ಮಾನರು ಎಂದು ಕೊಂಡಿದ್ದರು. ಆದರೆ 15 ಲಕ್ಷ ಜನ ಹಿಂದುಗಳು ಇದ್ದಾರೆ ಎಂಬ ಮಾಹಿತಿ ಇದೆ. 25 ಮಂದಿ ಸಾವನ್ನಪ್ಪಿದ್ದಾರೆ. ಜನ ಬೀದಿಗೆ ಬಂದಿದ್ದಾರೆ. ಮಂಗಳೂರಿನ ಲ್ಲಿ 200 ಮಂದಿ ಪ್ರತಿಭಟನೆ ನಡೆಸಿದ್ದನ್ನು ತಡೆಯದೇ ಹಿಂಸೆಗೆ ದೂಡಿ ಇಬ್ಬರು ಅಮಾಯಕರನ್ನು ಸಾಯಿಸಿದ್ದೀರಿ. ಇದರಿಂದ ಲಾಭ ಪಡೆಯಲು ಮುಂದಾದರೆ, ಇದೇ ತಿರುಗಿ ಬೀಳಲಿದೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಮುಕ್ತ ಭಾರತ ಆಗಲಿದೆ. ಸಂವಿಧಾನ ಉಳಿಸುವ ಸಂಕಲ್ಪಮಾಡಿದ್ದೇವೆ. ಈ ಮೂಲಕ ದೇಶ ಉಳಿಸುವ ಕಾರ್ಯ ಮಾಡಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಸುದರ್ಶನ್, ವಿ.ಎಸ್.ಉಗ್ರಪ್ಪ, ಎಚ್.ಸಿ.ಮಹದೇವಪ್ಪ, ಶಾಸಕಿ ಸೌಮ್ಯ ರೆಡ್ಡಿ, ರಿಜ್ವಾನ್ ಅರ್ಷದ್, ರಾಜೀವ್‌ಗೌಡ, ಬಿ.ಎಲ್. ಶಂಕರ್, ರೆಹಮಾನ್ ಖಾನ್, ಎಚ್.ಎಂ. ರೇವಣ್ಣ, ಭೈರತಿ ಸುರೇಶ್, ಎಐಸಿಸಿ ನಾಯಕ ವಿಶ್ವನಾಥನ್, ಕಾಂಗ್ರೆಸ್‌ನ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರುಗಳು ಭಾಗಿಯಾಗಿದ್ದರು.

‘ಸಂವಿಧಾನವನ್ನು ಶಕ್ತಿಹೀನ ಮಾಡಿ, ಜಾತ್ಯತೀತ ಶಕ್ತಿಯನ್ನು ನಾಶ ಮಾಡುತ್ತಿದ್ದಾರೆ. ಈ ದೇಶ ಜಾತ್ಯತೀತ ರಾಷ್ಟ್ರವಾಗಿದೆ. ಆದರೆ, ಬಿಜೆಪಿ ಅವರು ಧರ್ಮ, ಜಾತಿ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿದ್ದಾರೆ’.

ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

 ‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಡಿದವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಗರ ನಕ್ಸಲರೆಂದು ಕರೆದಿದ್ದು, ಯುವಕರು ಸುಮ್ಮನೆ ಕುಳಿತುಕೊಳ್ಳದೇ, ಬಿಜೆಪಿಗೆ ತಕ್ಕ ಉತ್ತರ ನೀಡಬೇಕು.’
ಡಿ.ಕೆ.ಶಿವಕುಮಾರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News