ಮುಂದಿನ ದಿನಗಳಲ್ಲಿ ಮೀನುಗಾರಿಕೆಯಲ್ಲಿ ದೇಶ ಉನ್ನತಿಗೆ: ತುಮಕೂರಿನಲ್ಲಿ ಪ್ರಧಾನಿ ಮೋದಿ
ತುಮಕೂರು,.ಜ.2: ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಅಂತರ್ಜಲ ವೃದ್ಧಿಗಾಗಿ ಅಟಲ ಜಲ್ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ತುಮಕೂರು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೇಂದ್ರ ಕೃಷಿ ಸಚಿವಾಲಯ ಹಮ್ಮಿಕೊಂಡಿದ್ದ 2017-18 ಹಾಗೂ 2018-19ನೇ ಸಾಲಿನ ಕೃಷಿ ಸನ್ಮಾನ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಹಾಗೂ ಕೃಷಿ ಕರ್ಮಣ್ಯೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕೃಷಿಗೆ ನೀರಿನ ಅಭಾವವಿರುವುದರಿಂದ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟವನ್ನು ನೀಗಿಸಲು ಅಂತರ್ಜಲ ವೃದ್ಧಿಸಲು ಅಟಲ್ ಜಲ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಆರು ರಾಜ್ಯಗಳು ಸುಮಾರು 30ಕ್ಕೂ ಹೆಚ್ಚು ವಿವಿಧ ಬೆಳೆಗಳನ್ನು ಬೆಳೆಯುವ ಒಂದು ವಿಶೇಷ ವಲಯವಾಗಿದೆ. ಈ ಭಾಗದಲ್ಲಿ ಬೆಳೆಯುವ ಕಾಫಿ, ರಬ್ಬರ್, ಸಾಂಬಾರ ಪದಾರ್ಥಗಳು, ಹಣ್ಣು, ತರಕಾರಿ ಹಾಗೂ ಇನ್ನಿತರ ಬೆಳೆಗಳ ಮೌಲ್ಯವರ್ಧನೆ ಮಾಡಿ, ಅವುಗಳ ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಇದರ ಜೊತೆಗೆ ಮೀನುಗಾರಿಕೆಯನ್ನು ಕೃಷಿ ವಲಯದಲ್ಲಿ ಸೇರಿ, ಆಳ ಸಮುದ್ರದಲ್ಲಿ ಬಾಹ್ಯಾಕಾಶ ಸಂಶೋಧಿತ ಯಂತ್ರದ ಸಹಕಾರದಿಂದ ಮೀನುಗಾರಿಕೆ ನಡೆಸಲು ಅನುಕೂಲವಾಗುವಂತೆ ಮತ್ಸ್ಯ ಅಭಿವೃದ್ಧಿ ಮಂತ್ರಾಲಯವನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗಿದೆ. ಈಗಾಗಲೇ ತಮಿಳುನಾಡಿನ ಹಲವು ಮೀನುಗಾರರಿಗೆ ಅಧುನಿಕ ದೋಣಿಗಳ ಜೊತೆಗೆ, ಎಲ್ಲೆಲ್ಲಿ ಹೆಚ್ಚು ಮೀನಿನ ಸಂತತಿ ಇದೆ ಎಂದು ತಿಳಿಸಬಲ್ಲ ಯಂತ್ರವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೀನುಗಾರಿಕೆಯಲ್ಲಿ ದೇಶ ಉನ್ನತಿಗೆ ಬರಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಇದುವರೆಗೂ ದೇಶದ 8 ಕೋಟಿ ರೈತರ ಖಾತೆಗಳಿಗೆ ಕೃಷಿ ಸನ್ಮಾನ ಯೋಜನೆಯ ಮೂಲಕ ಹಣ ನೇರವಾಗಿ ಸೇರಿದೆ. ಇಂದು ದೇಶದ 6 ಲಕ್ಷ ರೈತರಿಗೆ 12 ಸಾವಿರ ಕೋಟಿ ರೂ.ಗಳು ನೇರವಾಗಿ ಅವರ ಖಾತೆಗೆ ಸೇರುವಂತೆ ವ್ಯವಸ್ಥೆ ಮಾಡಿ, ದೇಶದಲ್ಲಿ ಭ್ರಷ್ಟಾಚಾರ ರಹಿತ ಆಡಳಿತವನ್ನು ಜಾರಿಗೆ ತರಲಾಗಿದೆ. ಇದುವರೆಗೆ ಕೃಷಿ ಸನ್ಮಾನ ಯೋಜನೆಯನ್ನು ಜಾರಿ ಮಾಡದ ರಾಜ್ಯಗಳು ಸಹ ಇದರಲ್ಲಿ ಸೇರಿಕೊಳ್ಳುವ ಮೂಲಕ ಬಡವರಿಗೆ ಸರಕಾರದ ಯೋಜನೆ ತಲುಪುವಂತೆ ಮಾಡಿ ಎಂದು ಮನವಿ ಮಾಡಿದ ಪ್ರಧಾನಿ, ರೈತರ ಸಮಸ್ಯೆಯನ್ನು ಬಿಡಿಬಿಡಿಯಾಗಿ ನೋಡದೆ ಸಮಗ್ರ ದೃಷ್ಟಿಕೋನದಿಂದ ಗಮನಿಸುತ್ತಿದ್ದು, ಕೃಷಿ ರಪ್ತು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಸರಕಾರ ತೆಗೆದುಕೊಂಡಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್, ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಉತ್ತರಾಖಾಂಡ ಮುಖ್ಯಮಂತ್ರಿ ತ್ರಿವೇಂದ್ರರ್ ರಾವತ್, ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವರಾದ ಲಕ್ಷ್ಮಣ ಸವದಿ, ವಿ.ಸೋಮಣ್ಣ, ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಜಿ.ಎಸ್.ಬಸವರಾಜು ಉಪಸ್ಥಿತರಿದ್ದರು.
ಹಸಿರು ಶಾಲು ಹೊದ್ದು ಭಾಷಣ
ಕರ್ನಾಟಕಕ್ಕೆ ಆಗಮಿಸಿದ್ದ ಪ್ರಧಾನಿಯನ್ನು ರಾಜ್ಯದ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮೈಸೂರು ಪೇಟೆ, ಏಲಕ್ಕಿ ಹಾರ, ಹಸಿರು ಶಾಲು, ಶ್ರೀಗಂಧದ ವಿಗ್ರಹ ನೀಡಿ ಸ್ವಾಗತಿಸಿದರು. ಬಿಎಸ್ವೈ ಹೊದಿಸಿದ ಶಾಲನ್ನು ಹೆಗಲಿಗೇರಿಸಿಕೊಂಡು ಇಡೀ ಕಾರ್ಯಕ್ರಮದಲ್ಲಿ ಕುಳಿತಿದ್ದ ಪ್ರಧಾನಿ ಮೋದಿ, ಶಾಲು ಹೊದ್ದೇ ಸುಮಾರು 40 ನಿಮಿಷಗಳ ಕಾಲ ಭಾಷಣ ಮಾಡಿದರು. ಆದರೆ ಭಾಷಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೀರಾವರಿ ಯೋಜನೆಗೆ ವಿಶೇಷ ಅನುದಾನ, ಭಕ್ತರ ಕೋರಿಕೆಯಂತ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಸೇರಿದಂತೆ ಜಿಲ್ಲೆಯ ಜನರ ಬೇಡಿಕೆಗಳ ಬಗ್ಗೆ ಮಾತನಾಡಿಲಿಲ್ಲ.
ಅರ್ಧಕ್ಕೆ ಎದ್ದು ಹೊರಟ ಜನರು
ಮೋದಿ ಭಾಷಣ ಆರಂಭಿಸಿದ ಮೊದಲ ಹತ್ತು ನಿಮಿಷಗಳ ಕಾಲ ಶಾಂತರಾಗಿ ಕುಳಿತಿದ್ದ ಜನರು, ನಂತರ ಒಬ್ಬೊಬ್ಬರಾಗಿ ಎದ್ದು ಹೊರಟರು. ಇದನ್ನು ಗಮನಿಸಿದ ಪ್ರಧಾನ ಮಂತ್ರಿ, ಹಿಂಬದಿಯ ಜನರಿಗೆ ಭಾಷಣ ಕೇಳಿಸುತ್ತಿಲ್ಲವೆನಿಸುತ್ತದೆ, ನೋಡಿ ಎಂದು ಮೈಕ್ ವ್ಯವಸ್ಥೆಯವರಿಗೆ ತಿಳಿಸಿದರು. ಆದರೆ ಮೈಕ್ನಲ್ಲಿ ಯಾವುದೇ ತೊಂದರೆ ಇರಲಿಲ್ಲ. ಇಂದು ಬೆಳಗ್ಗೆಯಿಂದಲೇ ಕಾರ್ಯಕ್ರಮದಲ್ಲಿ ಕುಳಿತಿದ್ದ ಜನರು ಸಂಜೆಯಾಗುತ್ತಲೆ, ತಮ್ಮ ಗ್ರಾಮಗಳಿಗೆ ಹೊರಡಲು ಅಣಿಯಾದರು. ಪ್ರಧಾನಿ ಭಾಷಣದ ಕೊನೆಗೆ ಹಿಂಬದಿಯ ಬಹುತೇಕ ಕುರ್ಚಿಗಳು ಖಾಲಿ ಇದ್ದವು.