ಎನ್‌ಆರ್‌ಸಿ-ಸಿಎಎ ವಿರುದ್ಧ ದೇಶಾದ್ಯಂತ ಸರ್ವಧರ್ಮೀಯರು ಪ್ರತಿಭಟಿಸುತ್ತಿದ್ದಾರೆ: ಗುಲಾಂ ನಬಿ ಆಝಾದ್

Update: 2020-01-04 14:38 GMT

ಬೆಂಗಳೂರು, ಜ.4: ಕಾಶ್ಮೀರದಿಂದ ಕನ್ಯಾಕುಮಾರಿ, ಅಸ್ಸಾಂನಿಂದ ಗುಜರಾತ್‌ವರೆಗೆ ಎನ್‌ಆರ್‌ಸಿ ಹಾಗೂ ಸಿಎಎ ವಿರುದ್ಧ ಕೇವಲ ಮುಸ್ಲಿಮರು ಮಾತ್ರವಲ್ಲ ಸರ್ವಧರ್ಮೀಯರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಯಾವ ರೀತಿ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂಬುದನ್ನು ಇಡೀ ದೇಶ ನೋಡಿದೆ ಎಂದರು.

ಸಂಸತ್ತಿನ ಉಭಯ ಸದನಗಳಲ್ಲಿ ಸಿಎಎ ಪರವಾಗಿ ಮತ ಚಲಾಯಿಸಿದ್ದ ಓಡಿಶಾದ ಬಿಜೆಡಿ, ಬಿಹಾರದ ನಿತೀಶ್‌ ಕುಮಾರ್, ಆಂಧ್ರಪ್ರದೇಶದ ಜಗನ್ಮೋಹನ್ ರೆಡ್ಡಿ, ತೆಲಂಗಾಣ ರಾಷ್ಟ್ರೀಯ ಸಮಿತಿ ತಮ್ಮ ರಾಜ್ಯಗಳಲ್ಲಿ ಸಿಎಎ ಜಾರಿ ಮಾಡುವುದಿಲ್ಲವೆಂದಿದ್ದಾರೆ ಎಂದು ಗುಲಾಂ ನಬಿ ಆಝಾದ್ ತಿಳಿಸಿದರು.

ಜರ್ಮನ್ ಚಾನ್ಸಲರ್, ಫ್ರೆಂಚ್ ಅಧ್ಯಕ್ಷ, ಅಮೆರಿಕಾದ 19 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಬ್ರಿಟನ್ ದೇಶದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ನೋಟು ರದ್ಧತಿಯ ತೀರ್ಮಾನದ ಬಳಿಕ ಈ ಸರಕಾರ ಜಾರಿಗೆ ತರುತ್ತಿರುವುದೆಲ್ಲ ಜನ ವಿರೋಧಿ ಕಾನೂನುಗಳಾಗಿವೆ ಎಂದು ಅವರು ಆರೋಪಿಸಿದರು.

ನೋಟುಗಳ ರದ್ಧತಿಯ ಬಳಿಕ ಲಕ್ಷಾಂತರ ಸಣ್ಣ, ಮಧ್ಯಮ ಕೈಗಾರಿಕೆಗಳು ಮುಚ್ಚಲ್ಪಟ್ಟು, ಕೋಟ್ಯಂತರ ಮಂದಿ ಯುವಕ, ಯುವತಿಯರು ನಿರುದ್ಯೋಗಿಗಳಾದರು. ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಯಾರು ಮುಂದೆ ಬರುತ್ತಿಲ್ಲ. ಮೊದಲ ಬಾರಿ ಪ್ರಧಾನಿಯಾದ ಮೋದಿ ವಿದೇಶಗಳಿಗೆ ಸುತ್ತಿದರು. ಆದರೆ, ಈಗ ಯಾರೊಬ್ಬರೂ ಅವರನ್ನು ಆಹ್ವಾನಿಸುತ್ತಿಲ್ಲ ಎಂದು ಆಝಾದ್ ಟೀಕಿಸಿದರು.

ವಿದೇಶದಲ್ಲಿರುವ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬ ಬಡವನ ಖಾತೆಗೆ 15 ಲಕ್ಷ ರೂ.ಜಮೆ, ಪ್ರತಿ ವರ್ಷ 2 ಕೋಟಿಯಂತೆ ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ. ರೈತರ ಆದಾಯ ದ್ವಿಗುಣ, ಎಂಎಸ್‌ಪಿ ಹೆಚ್ಚಳ ಮಾಡುವುದಾಗಿ 2014ರಲ್ಲಿ ಬಿಜೆಪಿ ನೀಡಿದ್ದ ಒಂದೇ ಒಂದು ಭರವಸೆಯನ್ನು ಈವರೆಗೆ ಈಡೇರಿಸಿಲ್ಲ ಎಂದು ಅವರು ದೂರಿದರು.

ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿರುವ ಬಿಜೆಪಿ, ಜನರು ಸಮಸ್ಯೆಗಳ ವಿರುದ್ಧ ಹೋರಾಡುವ ಬದಲು, ಪರಸ್ಪರ ತಮ್ಮಲ್ಲಿಯೇ ಕಚ್ಚಾಡಿ ಕೊಳ್ಳುವಂತೆ ವಿಧೇಯಕಗಳನ್ನು ಜಾರಿಗೆ ತರುತ್ತಿದೆ. ಜನರಿಗೆ ಇದೀಗ ಇವರ ಧೋರಣೆ ಏನು ಎಂಬುದು ಅರ್ಥವಾಗುತ್ತಿದೆ ಎಂದು ಆಝಾದ್ ಹೇಳಿದರು.

ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 370ನೇ ವಿಧಿ ರದ್ಧತಿ ಮಾಡಲಾಯಿತು. ಆದರೆ, ಈ ರಾಜ್ಯಗಳಲ್ಲಿದ್ದ ಅಧಿಕಾರವನ್ನು ಬಿಜೆಪಿ ಕಳೆದುಕೊಳ್ಳುವಂತಾಯಿತು. ಇದೀಗ ದಿಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಸಿಎಎ ಜಾರಿಗೆ ತರಲಾಗುತ್ತಿದೆ ಎಂದು ಅವರು ಟೀಕಿಸಿದರು.

ಭಾರತವನ್ನು ಪಾಕಿಸ್ತಾನದ ಜೊತೆ ಹೋಲಿಕೆ ಮಾಡುವುದು ಅಪಮಾನಕರ. ಕಾಶ್ಮೀರದ ಪೊಲೀಸರನ್ನು ಕಳುಹಿಸಿದರೂ ಸಾಕು, ಪಾಕಿಸ್ತಾನವನ್ನು ಮಣಿಸಿ ಬರುತ್ತಾರೆ. ದೇಶದ ಯಾವೊಬ್ಬ ಪ್ರಜೆಯೂ ಸತ್ತುಹೋದ ಕುದುರೆ(ಡೆಡ್ ಹಾರ್ಸ್)ಯಾಗಿರುವ ಪಾಕಿಸ್ತಾನದಿಂದ ಭಯಪಡುವುದಿಲ್ಲ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಎನ್‌ಆರ್‌ಸಿ ಬಗ್ಗೆ ಚರ್ಚೆಯೇ ಮಾಡಿಲ್ಲ ಎನ್ನುತ್ತಾರೆ. ಆದರೆ, 2019ರ ಬಿಜೆಪಿ ಲೋಕಸಭಾ ಚುನಾವಣೆ ಪ್ರಣಾಳಿಕೆ, ಹೊಸ ಸರಕಾರ ಬಂದ ನಂತರ ರಾಷ್ಟ್ರಪತಿ ಮಾಡಿದ ಭಾಷಣದಲ್ಲಿ ‘ಎನ್‌ಆರ್‌ಸಿಯನ್ನು ಆದ್ಯತೆ ಮೇರೆಗೆ’ ಜಾರಿಗೆ ತರುವುದಾಗಿ ತಿಳಿಸಲಾಗಿದೆ ಎಂದು ಆಝಾದ್ ತಿಳಿಸಿದರು.

ಸಿಎಎ ನಂತರ ಎನ್‌ಆರ್‌ಸಿ ಇಡೀ ದೇಶದಲ್ಲಿ ಜಾರಿಯಾಗುತ್ತದೆ ಎಂದು ನವೆಂಬರ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದರೆ, ಈಗ ಎರಡು ದಿನಗಳ ಹಿಂದೆ ಸಿಎಎ ಬಗ್ಗೆ ಮಾತ್ರ ಚರ್ಚಿಸಿ, ಎನ್‌ಆರ್‌ಸಿ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎನ್ನುತ್ತಾರೆ. ಯಾವುದನ್ನು ನಂಬುವುದು ಎಂದು ಅವರು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

1947, 1971 ನಂತರ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಧಾರ್ಮಿಕ ಕಿರುಕುಳಕ್ಕೆ ಎಷ್ಟು ಮಂದಿ ನಿರಾಶ್ರಿತರಾಗಿ ನಮ್ಮ ದೇಶಕ್ಕೆ ಬಂದಿದ್ದಾರೆ ಎಂದು 2017ರ ಮಾರ್ಚ್ 23ರಂದು ಅಸ್ಸಾಂನ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಿಪನ್‌ಬೋರಾ ಸದನದಲ್ಲಿ ಕೇಳಿದ ಪ್ರಶ್ನೆಗೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಅಂಕಿ ಅಂಶಗಳು ನಮ್ಮ ಬಳಿ ಇಲ್ಲ. ಅಫ್ಘಾನಿಸ್ತಾನದ 6087, ಬಾಂಗ್ಲಾದೇಶದ 84 ಹಾಗೂ ಪಾಕಿಸ್ತಾನದ 2500 ಮಂದಿ ಪೌರತ್ವಕ್ಕಾಗಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಬಾಕಿಯಿದೆ ಎಂದು ಗೃಹ ಸಚಿವರು ಉತ್ತರಿಸಿದ್ದರು.
-ಗುಲಾಂ ನಬಿ ಆಝಾದ್, ಕಾಂಗ್ರೆಸ್ ನಾಯಕ

ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರು ಅಮಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅಸ್ಸಾಂನಲ್ಲಿ ಹತ್ಯೆಯಾದ ಐದು ಮಂದಿಯಲ್ಲಿ ಒಬ್ಬರು ಮುಸ್ಲಿಮರು, ಪೊಲೀಸ್ ಫೈರಿಂಗ್‌ನಲ್ಲಿ ಗಾಯಗೊಂಡ 24 ಮಂದಿಯಲ್ಲಿ 18 ಮಂದಿ ಮುಸ್ಲಿಮೇತರರು ಈ ಪ್ರತಿಭಟನೆಯಲ್ಲಿ ಸಾವನ್ನಪ್ಪಿದವರು, ಗಾಯಗೊಂಡವರಲ್ಲಿ ಎಲ್ಲ ಧರ್ಮದವರು ಇದ್ದಾರೆ. ಇದು ಕೇವಲ ಮುಸ್ಲಿಮರಿಗಷ್ಟೇ ಸೀಮಿತಗೊಂಡಿಲ್ಲ.

-ಗುಲಾಂ ನಬಿ ಆಝಾದ್, ಕಾಂಗ್ರೆಸ್ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News