ಸಿಎಎಯಿಂದ ದೇಶದ ಮುಸ್ಲಿಮರಿಗೆ ತೊಂದರೆಯಿಲ್ಲ: ಆರ್.ಅಶೋಕ್

Update: 2020-01-05 13:08 GMT

ತುಮಕೂರು,ಜ.6:ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ನಮ್ಮ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಅಶೋಕ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಸಮಾರು ವರ್ಷಗಳಿಂದ ಹಲವಾರು ನಾಯಕರು ಪ್ರಯತ್ನಪಟ್ಟಿದ್ದಾರೆ. ಆದರೆ ಆ ಕೆಲಸ ಈಗ ಸಾಧ್ಯವಾಗಿದೆ. ಪಾಕಿಸ್ತಾನ ಭಾರತದಿಂದ ವಿಭಜನೆಯಾದ ನಂತರ ಅನೇಕ ಅಲ್ಪಸಂಖ್ಯಾತರು ಭಾರತಕ್ಕೆ ಬಂದಿದ್ದಾರೆ. ವಿಭಜನೆ ನಂತರ 2ನೇ ದರ್ಜೆ ನಾಗರಿಕರ ಹಾಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣಲಾಗುತ್ತಿದೆ. ಆ ನೋವು, ದಬ್ಬಾಳಿಕೆ ತಾಳಲಾರದೆ ಭಾರತಕ್ಕೆ ಬಂದಿದ್ದಾರೆ. ಯಾವುದೇ ಪೌರತ್ವ ಇಲ್ಲದೆ ಕಳೆದ 40 ವರ್ಷಗಳಿಂದ ಟೆಂಟ್‍ನಲ್ಲಿ ವಾಸಿಸುತ್ತಿದ್ದಾರೆ ಎಂದರು.

ಈ ಕಾಯ್ದೆ ಬಗ್ಗೆ ಮೊದಲು ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಮಾತನಾಡಿದ್ದರು. ನರೇಂದ್ರ ಮೋದಿಯವರು ಈ ಕಾಯ್ದೆ ಜಾರಿಗೆ ತಂದಿದ್ದಾರೆ. ಏನೋ ಆಗುತ್ತದೆ ಎಂದು ಕಾಂಗ್ರೆಸ್‍ನವರು ಗುಲ್ಲೆಬ್ಬಿಸುತ್ತಿರುವುದರಲ್ಲಿ ಹುರುಳಿಲ್ಲ. ಈ ಕಾಯ್ದೆಯಲ್ಲಿ ನಮ್ಮ ದೇಶದ ಮುಸ್ಲಿಮರನ್ನು  ಓಡಿಸುವಂತಿಲ್ಲ. ಪಾಕಿಸ್ತಾನದಿಂದ ಯಾರೂ ಬರುವಂತಿಲ್ಲ ಅಷ್ಟೆ. ಹೀಗಿರುವಾಗ ಈ ಕಾಯ್ದೆ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಏಕೆ ಎಂದು ಪ್ರಶ್ನಿಸಿದ ಅವರು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಸುಮಾರು 2 ಕೋಟಿ ಜನ ನಮ್ಮ ದೇಶಕ್ಕೆ ಬಂದು ವಾಸ ಮಾಡುತ್ತಿದ್ದಾರೆ. ನಾವು ಕೂಡ ಅಮೆರಿಕ ತರ ಇರಬೇಕು. ಈ ದೇಶ ನಮಗೆ ಮಾತ್ರ ಇರಬೇಕು. ಯಾರು ಬೇಕಾದರೂ ಬಂದು ಹೋಗಲು ಇದೇನು ತೋಟದಪ್ಪನ ಛತ್ರವೇ ಎಂದು ಅಕ್ರಮ ವಲಸಿಗರ ವಿರುದ್ದ ಕಿಡಿಕಾರಿದರು.

ಪಾಕಿಸ್ತಾನದಿಂದ ಬರುವವರೊಂದಿಗೆ ಬೇಕಾದಷ್ಟು ಮಂದಿ ಉಗ್ರಗಾಮಿಗಳು ಬಂದಿದ್ದಾರೆ. ಅಂಥವರಿಂದಲೇ ಗಲಭೆಗಳು ನಡೆಯುತ್ತಿವೆ. ನಾವು ಇಲ್ಲಿರುವ ಯಾರ ದಾಖಲಾತಿಯನ್ನೂ ಕೇಳಿಲ್ಲ, ಕೇಳುವುದಿಲ್ಲ. ನಮ್ಮ ದೇಶದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ನಮ್ಮ ದೇಶವನ್ನು ಯಾವತ್ತೂ ಸಹ ಪಾಕಿಸ್ತಾನ ಮಾಡಲು ಸಾಧ್ಯವಿಲ್ಲ. ಹೊರಗಡೆಯಿಂದ ಬರುವವರನ್ನು ಸೇರಿಸುವ ಅವಶ್ಯಕತೆ ಇಲ್ಲ ಎಂಬುದು ಈ ಕಾಯ್ದೆಯ ಅಂಶವಾಗಿದೆ. ಕಾಂಗ್ರೆಸ್‍ನವರು ಯಾವ ದೇಶದ ಪರವಾಗಿದ್ದಾರೆ. ಪಾಕಿಸ್ತಾನದ ಪರವಾಗಿದ್ದಾರಾ, ಭಾರತದ ಪರವಾಗಿದ್ದಾರಾ ಎಂದು ಪ್ರಶ್ನಿಸಿದ ಅವರು, ಪ್ರಚೋದನಕಾರಿ ಹೇಳಿಕೆಗಳಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ದೇಶದ ಕಾನೂನಿಗೆ ಗೌರವ ಕೊಡುವಂತಹ ಮನೋಭಾವವನ್ನು ಎಲ್ಲರಲ್ಲೂ ಮೂಡಿಸುವ ಕೆಲಸ ಆಗಬೇಕಿದೆ ಎಂದರು.

ಪಾಕಿಸ್ತಾನದಿಂದ ಬಂದು ನಮ್ಮ ದೇಶದಲ್ಲಿ ನೆಲೆಸಿದರೆ ಮುಂದೊಂದು ದಿನ ನಮ್ಮ ಮಕ್ಕಳಿಗೆ ಇರಲು ಮನೆ, ಊಟ, ವಿದ್ಯಾಭ್ಯಾಸ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ಭಾರತ ದೇಶ ಭಾರತೀಯರಿಗೆ ಸೇರಿದ್ದು. ಪಾಕಿಸ್ತಾನ, ಆಫ್ಘಾನಿಸ್ಥಾನಕ್ಕೆ ಸೇರಿದ್ದಲ್ಲ. ಇದನ್ನು ಪ್ರತಿಯೊಬ್ಬ ನಾಗರಿಕರು ಅರ್ಥ ಮಾಡಿಕೊಂಡು ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಈ ಕಾಯ್ದೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಆಗಲಿದೆ ಎಂದು ಆರ್.ಅಶೋಕ್ ನುಡಿದರು.

ಪ್ರಪಂಚದಲ್ಲಿ ಭಾರತ ದೇಶ 2-3ನೇ ಸ್ಥಾನಕ್ಕೆ ಹೋಗಲು ಮತ್ತಷ್ಟು ಬಲಾಢ್ಯಗೊಳ್ಳಬೇಕು. ಇದಕ್ಕಾಗಿ ಪೌರತ್ವ ಕಾಯ್ದೆ ಜಾರಿಯಾಗಲೇಬೇಕು. ಕಾಂಗ್ರೆಸ್‍ನವರು ಮಾಡಿದ ತಪ್ಪು ನಿರ್ಧಾರಗಳಿಂದ ಇಂದು ನಮ್ಮ ದೇಶ ಭಾಗವಾಯಿತು. ನಮ್ಮ ದೇಶ ಸದೃಢವಾಗಿರಬೇಕು, ಬಲಾಢ್ಯವಾಗಿರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಡಾ. ಹುಲಿನಾಯ್ಕರ್, ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್, ಮಲ್ಲಿಕಾರ್ಜುನಯ್ಯ, ಶಿಪವ್ರಸಾದ್, ಲಕ್ಷ್ಮೀಶ್, ಕೊಪ್ಪಲ್‍ನಾಗರಾಜು, ಡಾ. ಸಂಜಯನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News