ಸೋಮಶೇಖರ್ ರೆಡ್ಡಿ ಮನೆ ಮುಂದೆ ಜ.12ರಂದು ಭಾರೀ ಪ್ರತಿಭಟನೆ: ಝಮೀರ್ ಅಹ್ಮದ್ ಎಚ್ಚರಿಕೆ

Update: 2020-01-06 12:52 GMT

ಬೆಂಗಳೂರು, ಜ.6: ಪ್ರಚೋದನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿನನ್ನು ಬಂಧಿಸದಿದ್ದರೆ ಬಳ್ಳಾರಿಯಲ್ಲಿ ಜ.12ಕ್ಕೆ ಭಾರೀ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಶೇಖರ್ ರೆಡ್ಡಿ ಶಾಸಕನಾಗಿರಲು ಅನರ್ಹರಾಗಿದ್ದಾರೆ. ಅವರ ಮಾತುಗಳಿಂದ ಬಿಜೆಪಿಯ ನಿಜ ಬಣ್ಣ ಹೊರಬಂದಿದೆ. ಸರಕಾರ ಅವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ಅವರ ಮನೆ ಮುಂದೆಯೇ ಪ್ರತಿಭಟಿಸಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿ ಮಾತು ಮಾತಿಗೂ ಸಬ್ ಕಾ ಸತ್, ಸಬ್ ಕಾ ವಿಕಾಸ್, ಎಲ್ಲರೂ ಭಾರತೀಯರೇ ಎನ್ನುತ್ತಾರೆ. ಹೀಗಿರುವಾಗ, ಸೋಮಶೇಖರ್ ರೆಡ್ಡಿ ಕೋಮು ಪ್ರಚೋದನೆ ಭಾಷಣ ಮಾಡಿದ್ದಾರೆ. ಇದರಿಂದ ಬಿಜೆಪಿ ಮೂಲ ಉದ್ದೇಶಗಳಿಂದ ಹೊರಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಸೋಮಶೇಖರ್ ರೆಡ್ಡಿ ಅವರು ಶಿವಾಜಿ ಮಹಾರಾಜರಂತೆ ಖಡ್ಗ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ. ಆದರೆ, ಅವರು ಮೊದಲು ನನ್ನ ಮನೆಯ ಬಳಿಯೇ ಬರಲಿ ಎಂದು ಸವಾಲು ಹಾಕಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿವಾದಿತ ಹೇಳಿಕೆ ನೀಡಿರುವ ರೆಡ್ಡಿ ಅವರನ್ನು ಬಂಧಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News