ಕೆಆರ್ಎಸ್ ಅಣೆಕಟ್ಟೆ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧ
ಮಂಡ್ಯ, ಜ.6: ಪಾಂಡವಪುರ ತಾಲೂಕು ಕೆಆರ್ಎಸ್ ಅಣೆಕಟ್ಟೆ ವ್ಯಾಪ್ತಿಯ ಬೇಬಿಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸಲಾಗಿದ್ದು, ಮತ್ತೆ ಗಣಿಗಾರಿಕೆ ಪುನರಾರಂಭಿಸಿದರೆ ಮಾಲಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ಈ ಭಾಗದಲ್ಲಿ ಒಟ್ಟು 36 ಕಡೆ ಗಣಿಗಾರಿಕೆ ನಡೆಯುತ್ತಿದ್ದವು. ರೈತರು, ಪ್ರಗತಿಪರರು, ಮಠಾಧೀಶರು ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಗೆ ಸಮಸ್ಯೆ ಆಗಲಿದೆ ಎಂದು ದೂರು ಕೊಟ್ಟಿದ್ದರು.
ನಿಷೇಧಾಜ್ಞೆ ಇದ್ದರೂ ಕೋರ್ಟ್ನಲ್ಲಿ ಸ್ಟೇ ತಂದು ಗಣಿ ಮಾಲಕರು ಗಣಿಗಾರಿಕೆ ನಡೆಸುತ್ತಿದ್ದರು. ಇವತ್ತು (ಸೋಮವಾರ) 25ಕ್ಕೂ ಹೆಚ್ಚು ಉನ್ನತಾಧಿಕಾರಿಗಳು ದಾಳಿ ಮಾಡಿದಾಗ ಗಣಿಗಾರಿಕೆ ಕ್ರಮ ಬದ್ದವಾಗಿಲ್ಲ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
ಕೆಲವು ಅವಧಿ ಮುಗಿದಿದ್ದರೂ ಗಣಿಗಾರಿಕೆ ನಡೆಸಲಾಗುತ್ತಿದೆ. ಇನ್ನೂ ಕೆಲವು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಸಮಸ್ಯೆ ಆಗಬಹುದು. ಎಲ್ಲಾ ಉದ್ದೇಶದಿಂದ ಗಣಿಗಾರಿಕೆ ನಿಷೇಧಿಸಿ 144 ಸೆಕ್ಷನ್ ಜಾರಿಗೊಳಿಸಿ ಗಣಿಗಾರಿಕೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಕೆಆರ್ಎಸ್ ಅಣೆಕಟ್ಟೆಯ 5 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಲಾಗಿದೆ.
ಮುಂದೆ ಅಣೆಕಟ್ಟೆಯ 10 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.