ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ: ಜ.10ರಂದು ನ್ಯಾ.ನಾಗಮೋಹನ್ ದಾಸ್ ಆಯೋಗದಿಂದ ಅಭಿಪ್ರಾಯ ಸಂಗ್ರಹ

Update: 2020-01-08 17:20 GMT

ಬೆಳಗಾವಿ, ಜ.8: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲು ರಾಜ್ಯ ಸರಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದೆ. ಆಯೋಗ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಮಾವೇಶವನ್ನು ಆಯೋಜಿಸಿ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಯೋಜನೆ ರೂಪಿಸಿದೆ.

ಈ ಹಿನ್ನೆಲೆಯಲ್ಲಿ ಜನವರಿ 10ರಂದು ಬೆಳಗ್ಗೆ 10.30ಕ್ಕೆ ನಗರದ ಎಸ್.ಪಿ.ಕಚೇರಿ ಬಳಿಯಿರುವ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಯೋಗವು ಸಮಾವೇಶವನ್ನು ಏರ್ಪಡಿಸಿದೆ.

ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ(ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆ) ಸಾರ್ವಜನಿಕರು ಈ ಸಮಾವೇಶದಲ್ಲಿ ಭಾಗವಹಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ಮನವಿ ಸಲ್ಲಿಸಬಹುದು.

ಮೌಖಿಕವಾಗಿ ಮನವಿ ಮಂಡಿಸುವವರು ತಮ್ಮ ಹೆಸರನ್ನು ಕಾರ್ಯಕ್ರಮದ ಮುಂಚೆಯೇ ನಿಗಿದಿಪಡಿಸಿದ ಕೌಂಟರ್‌ಗಳಲ್ಲಿ ನೋಂದಾಯಿಸಿಕೊಂಡಿರಬೇಕು. ಹೆಸರನ್ನು ನೋಂದಾಯಿಸಿಕೊಂಡವರಿಗೆ ಮಾತ್ರ ಸಮಾವೇಶದಲ್ಲಿ ತಮ್ಮ ಅಭಿಪ್ರಾಯವನ್ನು ಮೌಖಿಕವಾಗಿ ತಿಳಿಸಲು ಅವಕಾಶವಿರುತ್ತದೆ. ಇದನ್ನು ಜಿಲ್ಲಾವಾರು ನೋಂದಾಯಿಸಲಾಗುತ್ತದೆ.

ಲಿಖಿತ ರೂಪದಲ್ಲಿ ಸಲ್ಲಿಸುವವರು ಸಮಾವೇಶದ ಸಮಯದಲ್ಲಿ ಸಂಬಂಧಿಸಿದ ಅಧಿಕಾರಿಗೆ ಜಿಲ್ಲಾವಾರು ಸಲ್ಲಿಸಬಹುದಾಗಿದೆ. ಮೌಖಿಕವಾಗಿ ವಿಚಾರ ಮಂಡಿಸುವವರು ತಮ್ಮ ಅಭಿಪ್ರಾಯವನ್ನು ವಿಷಯಕ್ಕೆ ಸೀಮಿತ ಮಾಡಿಕೊಂಡು ಸಂಕ್ಷಿಪ್ತವಾಗಿ ತಮ್ಮ ಅಭಿಪ್ರಾಯ ಮಂಡಿಸಬಹುದಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News