ಎಚ್‌ಡಿಕೆ ಗಲಭೆಕೋರರು, ಕೇರಳದ ಗೂಂಡಾಗಳನ್ನು ಬೆಂಬಲಿಸುತ್ತಿದ್ದಾರೆ: ಸಂಸದೆ ಶೋಭಾ

Update: 2020-01-10 14:45 GMT

ಬೆಂಗಳೂರು, ಜ. 10: ಮಂಗಳೂರು ಗಲಭೆ ನಡೆದು ಇಷ್ಟು ದಿನಗಳ ಬಳಿಕ ಜೆಡಿಎಸ್ ನಾಯಕ ಕುಮಾರಸ್ವಾಮಿ ಇದೀಗ ವಿಡಿಯೋ ಬಿಡುಗಡೆ ಮಾಡಿದ್ದೇಕೇ? ಷಡ್ಯಂತ್ರದಿಂದ ಕೂಡಿರುವ ಈ ಸಿಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ನಡೆಸಿ ತನಿಖೆ ನಡೆಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಶುಕ್ರವಾರ ಮಂಗಳೂರು ಗಲಭೆ ಸಂಬಂಧ ಎಚ್‌ಡಿಕೆ ಬಿಡುಗಡೆ ಮಾಡಿರುವ ಸಿಡಿಗೆ ಪ್ರತಿಕ್ರಿಯಿಸಿದ ಅವರು, ಆರೇಳು ವರ್ಷಗಳಿಂದ ಅವರು ಅನೇಕ ಸಿಡಿ ಬಿಡುಗಡೆ ಮಾಡುತ್ತಿದ್ದು, ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲಿಲ್ಲ. ಕುಮಾರಸ್ವಾಮಿ ಸಿಡಿ ಪ್ರಿಯರಾಗಿದ್ದಾರೆ ಎಂದು ಲೇವಡಿ ಮಾಡಿದರು.

ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ಪೊಲೀಸರಿಗೆ ಒಳ್ಳೆಯ ಹೆಸರಿದೆ. ಇದಕ್ಕೆ ಮಸಿ ಬಳಿಯುವ ಪ್ರಯತ್ನ ಎಚ್‌ಡಿಕೆ ಮಾಡಿದ್ದಾರೆ. ಗಲಭೆಕೋರರಿಗೆ, ಕೇರಳದ ಗೂಂಡಾಗಳಿಗೆ ಬೆಂಬಲ ನೀಡುತ್ತಿದ್ದಾರೆ. ಶಾಂತಿ ಮರುಕಳಿಸುತ್ತಿರುವ ಬಂದರು ನಗರದಲ್ಲಿ ಮತ್ತೆ ಅಶಾಂತಿಗೆ ಕುಮ್ಮಕ್ಕು ನೀಡುವ ಪ್ರಯತ್ನ ಕುಮಾರಸ್ವಾಮಿಯವರದ್ದು ಎಂದು ಟೀಕಿಸಿದರು.

ಎಚ್‌ಡಿಕೆಗೆ ಮಂಗಳೂರಿನಲ್ಲಿ ರಾಜಕೀಯ ನೆಲೆ ಇಲ್ಲ. ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ಮೇಲೆ ಎತ್ತಿಕಟ್ಟಲು ಅವರು ಮಂಗಳೂರಿಗೆ ಹೋಗಿದ್ದರು. ಅವರು ಬಂದರು ಪೊಲೀಸ್ ಠಾಣೆ ಹೇಗಿದೆ ಎಂದು ನೋಡಿಯೇ ಇಲ್ಲ. ಆದರೂ ಅವರು ಅಲ್ಲಿ ನಡೆದ ಗೋಲಿಬಾರ್ ಖಂಡಿಸುತ್ತಾರೆ. ಅಂದು ಪೊಲೀಸರು ಕ್ರಮ ಕೈಗೊಳ್ಳದೇ ಇದ್ದರೆ ಹತ್ತಾರು ಬಂದೂಕು ಮತ್ತು ಮದ್ದುಗುಂಡುಗಳು ದುಷ್ಕರ್ಮಿಗಳ ಕೈ ಸೇರುತ್ತಿದ್ದವು. ಗಲಭೆಯಲ್ಲಿ ಗಾಯಗೊಂಡ ಪೊಲೀಸರನ್ನು ಕುಮಾರಸ್ವಾಮಿ ವಿಚಾರಿಸಿಲ್ಲ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News