ಏಕತೆಗೆ ವೇದಿಕೆಯಾದ ಶಾಹೀನ್‌ಬಾಗ್

Update: 2020-01-12 18:03 GMT

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ರವಿವಾರ ‘ಸರ್ವಧರ್ಮ ಸಂಭವ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವೈವಿಧ್ಯತೆಯಲ್ಲಿ ಏಕತೆ ಎಂಬ ಆಶಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಹಿಂದು ಸಂಪ್ರದಾಯದಂತೆ ಹೋಮ, ಹವನ, ಸಿಖ್ ಸಮುದಾಯದವರ ಕೀರ್ತನೆ ಹಾಗೂ ಮುಸ್ಲಿಮ್ ಸಮುದಾಯದವರ ಕುರ್‌ಆನ್ ಪಠಿಸಲಾಯಿತು. ಜೊತೆಗೆ ಸಂವಿಧಾನದ ಪೀಠಿಕೆಯನ್ನು ಪಠಿಸಿ, ಸಂವಿಧಾನದ ಸಮಾಜವಾದಿ ಮತ್ತು ಜಾತ್ಯತೀತ ವೌಲ್ಯಗಳನ್ನು ರಕ್ಷಿಸಲು ಬದ್ಧ ಎಂಬ ಪ್ರಮಾಣವಚನ ಸ್ವೀಕರಿಸಲಾಯಿತು. ಭಗವದ್ಗೀತೆ, ಬೈಬಲ್ ಮತ್ತು ಕುರ್‌ಆನ್‌ನ ಉಕ್ತಿಗಳನ್ನು ಪಠಿಸಲಾಯಿತು ಮತ್ತು ಗುರ್ಬಾನಿ ನಡೆಯಿತು. ಬಳಿಕ ಸಂವಿಧಾನದ ಪೀಠಿಕೆಯನ್ನು ವಾಚಿಸಲಾಗಿದೆ ಎಂದು ಪ್ರತಿಭಟನೆಯ ಸಂಘಟಕರಲ್ಲಿ ಒಬ್ಬರಾದ ತಸೀರ್ ಅಹ್ಮದ್ ಹೇಳಿದ್ದಾರೆ. ಧರ್ಮಗಳ ಮಧ್ಯೆ ಸೌಹಾರ್ದ, ವಿಶ್ವಾಸ ಬೆಳೆಸುವ ಉದ್ದೇಶದಿಂದ ಸ್ವಾತಂತ್ರ ಸಂಗ್ರಾಮದ ಅವಧಿಯಲ್ಲಿ ಮಹಾತ್ಮಾ ಗಾಂಧೀಜಿ ‘ಸರ್ವಧರ್ಮ ಸಂಭವ’ ಎಂಬ ಪರಿಕಲ್ಪನೆಯನ್ನು ಆರಂಭಿಸಿದ್ದರು. ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಮಕ್ಕಳ ಸಹಿತ ನೂರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor