ಕರ್ನಾಟಕ ವಿದ್ಯುತ್ ನಿಗಮದಲ್ಲಿ ಆರ್ಥಿಕ ಮುಗ್ಗಟ್ಟು: ನೌಕರರ ಸಂಬಳಕ್ಕೆ ಸಾಲ ಮಾಡಬೇಕಾದ ಸ್ಥಿತಿ

Update: 2020-01-13 16:43 GMT

ಬೆಂಗಳೂರು, ಜ.13: ಬಾಕಿ ಹೊರೆ ಹೊತ್ತಿರುವ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ)ಗೆ ಚೈತನ್ಯ ತುಂಬಲು ಮುಂದಾಗಿರುವ ಆರ್ಥಿಕ ಇಲಾಖೆ, ಬಾಕಿಯಲ್ಲಿ 8 ಸಾವಿರ ಕೋಟಿ ಪಾವತಿಸುವಂತೆ ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳಿಗೆ ಸೂಚನೆ ನೀಡಿದೆ.

ನಿಗಮ ನೌಕರರಿಗೆ ಸಂಬಳ ಕೊಡಲು ಸಾಲ ಮಾಡಬೇಕಾದ ಸ್ಥಿತಿಗೆ ಸಿಲುಕಿದೆ. ಉತ್ಪಾದಿತ ವಿದ್ಯುತ್‌ಗೆ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಮುಖ್ಯ ಖರೀದಿದಾರರಾಗಿದ್ದು, ಕೊಡಬೇಕಾದ ಬಾಕಿ ಮೊತ್ತ 18 ಸಾವಿರ ಕೋಟಿ ದಾಟಿದೆ. ವಿವಿಧ ಯೋಜನೆಗೆ ಪಡೆದ ಸಾಲಕ್ಕೆ ಅಸಲು ಮತ್ತು ಬಡ್ಡಿ ಸಹಿತ ಕಂತು ಪಾವತಿ ಹಾಗೂ ಕಾರ್ಯ ಮತ್ತು ಪಾಲನೆ ವೆಚ್ಚ ಸರಿದೂಗಿಸುವುದು ಕಷ್ಟವಾಗುತ್ತದೆ. ಹಂತ ಹಂತವಾಗಿಯಾದರೂ ಬಾಕಿ ಪಾವತಿಗೆ ವ್ಯವಸ್ಥೆ ಮಾಡಲು ಸರಕಾರಕ್ಕೆ ಕೆಪಿಸಿ ಮನವಿ ಮಾಡಿದೆ.

ಉತ್ಪಾದಿಸಿದ ವಿದ್ಯುತ್‌ನಲ್ಲಿ ಅಲ್ಪಭಾಗ ಮಾರಾಟಕ್ಕೆ ಅವಕಾಶ ನೀಡಬೇಕು ಎಂಬುದು ಹಳೆಯ ಪ್ರಸ್ತಾಪ. ನಿಗಮದ ಉನ್ನತಾಧಿಕಾರಿಗಳು ಸಂದರ್ಭೋಚಿತವಾಗಿ ರವಾನಿಸಿದ ಸಂದೇಶಕ್ಕೆ ಸರಕಾರ ಸ್ಪಂದಿಸದಿದ್ದರೆ, ಬೇಡಿಕೆಯಿಲ್ಲವೆಂದು ಶಾಖೋತ್ಪನ್ನ ಮೂಲದ ವಿದ್ಯುತ್ ಸ್ಥಾವರಗಳ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ತಿಂಗಳುಗಟ್ಟಲೇ ಕಡಿತಗೊಳಿಸುವ ಪ್ರಮೇಯ ಇರುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ದಿನದ ವಿದ್ಯುತ್ ಬೇಡಿಕೆ ಪ್ರಮಾಣ ಜ.11 ಕ್ಕೆ ದಾಖಲಾದ ಪ್ರಕಾರ 11,780 ಮೆಗಾವಾಟ್‌ಗೆ ತಲುಪಿದೆ. ಸೌರ ಮತ್ತು ಪವನ ಮೂಲದ ವಿದ್ಯುತ್ ಸಮೃದ್ಧ, ಅದೂ ಅಗ್ಗದ ದರದಲ್ಲಿ ಸಿಗುತ್ತಿರುವ ಕಾರಣ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಅರ್ಧದಷ್ಟು ತಗ್ಗಿಸಿದ್ದು, ಕೆಪಿಸಿಎಲ್ ಲೋಡ್ ಡಿಸ್ಪಾಚಿಂಗ್ ಸೂಚನೆಯಂತೆ ಉತ್ಪಾದನೆ ಏರಿಕೆಯಾಗುತ್ತಿದೆ.

ಯರಮರಸ್ ಶಾಖೋತ್ಪನ್ನ ವಿದ್ಯುತ್(ವೈಟಿಪಿಎಸ್) ಕೇಂದ್ರದ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ. ಸಾಲ ಮಾಡಿ 10 ಸಾವಿರ ಕೋಟಿ ರೂ. ಹೂಡಿ ನಿರ್ಮಿಸಿದ ಈ ಸ್ಥಾವರ ಒಂದು ವರ್ಷದಿಂದ ಸ್ತಬ್ಧವಾಗಿದ್ದು, ವೆಚ್ಚದ ಹೊರೆ ಇಳಿಸಿಕೊಳ್ಳಲೆಂದು ಕಾರ್ಯ ಮತ್ತು ಪಾಲನೆ ಖಾಸಗಿಗೆ ಒಪ್ಪಿಸಲು ಕೆಪಿಸಿ ಯೋಚಿಸಿತ್ತು. ಆದರೆ, ಕಾರ್ಮಿಕರು ಹಾಗೂ ಭೂಮಿ ಕಳೆದುಕೊಂಡ ರೈತರು ತೀವ್ರ ವಿರೋಧ ಕೈಕಟ್ಟಿ ಹಾಕಿದೆ.

ಸಿಎಂ ಸೂಚನೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದ ಕೆಪಿಸಿ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ಹೆಚ್ಚಿದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಪರಾಮರ್ಶೆಯಾಗಿದೆ. ಈ ಸಂದರ್ಭದಲ್ಲಿ ಆರ್ಥಿಕ ಇಲಾಖೆ ಹೆಚ್ಚುವರು ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಗರಂ ಆಗಿಯೇ ಎಸ್ಕಾಂ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಅವರು(ಕೆಪಿಸಿ) ಕಷ್ಟದಲ್ಲಿದ್ದಾರೆ, ನೀವು(ಎಸ್ಕಾಂ) ಎಂಜಾಯ್ ಮಾಡ್ತಿದೀರಾ ಹೇಗೆ? ನಿಗಮ ವಿದ್ಯುತ್ ಉತ್ಪಾದನೆ ನಿಲ್ಲಿಸಿ ಬಾಗಿಲು ಮುಚ್ಚಿದರೆ ಗ್ರಾಹಕರಿಗೆ ವಿದ್ಯುತ್ ಸರಬರಾಜು ಹೇಗೆ ಮಾಡುವಿರಿ? ಯಾವುದೇ ನೆಪ ಹೇಳದೆ ಬಾಕಿಯಲ್ಲಿ 8 ಸಾವಿರ ಕೋಟಿ ಮಾಸಾಂತ್ಯದೊಳಗೆ ಪಾವತಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News