85ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡಲು ಕಲಬುರಗಿ ಜಿಲ್ಲಾಧಿಕಾರಿ ಮನವಿ
ಕಲಬುರಗಿ, ಜ.15: ಕಲಬುರಗಿಯಲ್ಲಿ ಫೆಬ್ರವರಿ 5, 6 ಹಾಗೂ 7ರಂದು ನಡೆಯಲಿರುವ 85ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ನೆರವು ನೀಡುವಂತೆ ಸರಕಾರಿ ನೌಕರರು, ಸಂಘ-ಸಂಸ್ಥೆಗಳು, ವ್ಯಾಪಾರಸ್ಥರಲ್ಲಿ ಜಿಲ್ಲಾಡಳಿತ ಮನವಿ ಮಾಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಹಾಗೂ ಕೋಶಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಬಿ.ಶರತ್, ಸಮ್ಮೇಳನವು ಈ ಹಿಂದೆ 1987ರಲ್ಲಿ ಜರುಗಿತ್ತು. ಇದೀಗ 32 ವರ್ಷಗಳ ನಂತರ ಕಲಬುರಗಿಯಲ್ಲಿ ಕನ್ನಡ ಹಬ್ಬ ಆಯೋಜಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಈ ಅಕ್ಷರ ಜಾತ್ರೆ ಯಶಸ್ವಿಯಾಗಿ ನಡೆಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದರಲ್ಲಿ ತಮ್ಮ ಪಾಲುದಾರಿಕೆ ಅತೀ ಶ್ರೇಷ್ಠವಾದದ್ದು. ಅದರಂತೆ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಾಕಷ್ಟು ಅನುದಾನದ ಅವಶ್ಯಕತೆ ಇರುತ್ತದೆ. ಸಂಘ-ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು, ಕಾರ್ಖಾನೆ-ಉದ್ದಿಮೆಗಳು, ವಿವಿಧ ವ್ಯಾಪಾರಿ ಸಂಘಗಳು ಮುಂತಾದವರು ಸ್ವಪ್ರೇರಣೆಯಿಂದ ದೇಣಿಗೆ ನೀಡಬೇಕೆಂದು ಅವರು ಕೋರಿದ್ದಾರೆ.
ಎಲ್ಲ ಸರಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಕೈಜೋಡಿಸುವಂತೆ ಮನವಿ ಮಾಡಿರುವ ಶರತ್, ದೇಣಿಗೆ ನೀಡಲಿಚ್ಛಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್. ಮೂಲಕ ಹಣ ವರ್ಗಾಯಿಸಬಹುದಾಗಿದೆ. ಚೆಕ್ ಅಥವಾ ಡಿ.ಡಿ. ಮೂಲಕವೂ ದೇಣಿಗೆ ನೀಡಬಹುದಾಗಿದೆ. ಚೆಕ್ ಮೂಲಕ ದೇಣಿಗೆ ನೀಡಬಯಸುವವರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಚೆಕ್ ಅನ್ನು ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಂಕ್ ಖಾತೆ ವಿವರ: ಬ್ಯಾಂಕ್ ಖಾತೆ ಹೆಸರು-85TH ABKSSSK, ಬ್ಯಾಂಕಿನ ಹೆಸರು-ಸಿಂಡಿಕೇಟ್ ಬ್ಯಾಂಕ್, ಶಾಖೆ ಹೆಸರು-ಸ್ಟೇಷನ್ ಬಜಾರ, ತಿಮ್ಮಾಪುರಿ ಚೌಕ್, ಕಲಬುರಗಿ, ಖಾತೆ ಸಂಖ್ಯೆ: 13012010153869, ಐ.ಎಫ್.ಎಸ್.ಸಿ.ಕೋಡ್-(SYN0001301), ಎಂ.ಐ.ಸಿ.ಆರ್.ಸಂಖ್ಯೆ- 585025003 ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿಂಗಳ ವೇತನ ನೀಡಿದ ಜಿಲ್ಲಾಧಿಕಾರಿ
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಲ್ಲಿನ ಜಿಲ್ಲಾಧಿಕಾರಿ ಶರತ್ ಬಿ. ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ. ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿಗೆಗೆ ಚೆಕ್ ಮೂಲಕ ನೀಡಿದ್ದಾರೆ.