ಕೇಂದ್ರ ಗೃಹ ಸಚಿವರು ನೆರೆ ಪರಿಹಾರ, ರಾಜ್ಯದ ಪಾಲಿನ ಹಣಕಾಸಿನ ಬಗ್ಗೆ ಬಾಯಿ ತೆರೆಯಲಿ: ಎಚ್‌ಡಿಕೆ

Update: 2020-01-17 17:04 GMT

ಬೆಂಗಳೂರು, ಜ. 17: ‘ಬೀದಿಗೆ ಬಿದ್ದಿರುವ ರಾಜ್ಯದ ನೆರೆ ಸಂತ್ರಸ್ತರು ಸರಕಾರದ ಪರಿಹಾರ ನಿರೀಕ್ಷೆಯಲ್ಲಿ ‘ಜಾಗರಣೆ’ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜನ ಜಾಗರಣ ಅಭಿಯಾನಕ್ಕೆ ಆಗಮಿಸುತ್ತಿರುವುದು ಚೋದ್ಯವೇ ಸರಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ರಾಜ್ಯಕ್ಕೆ ನ್ಯಾಯೋಚಿತವಾಗಿ ಬರಬೇಕಿರುವ ಹಣಕಾಸು ನೆರವಿನ ಬಗ್ಗೆ ತುಟಿಬಿಚ್ಚದೆ, ನೆರೆ ಸಂತ್ರಸ್ತರ ಗೋಳು ಕೇಳದ ಕೇಂದ್ರ-ರಾಜ್ಯ ಸರಕಾರಗಳು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಅಭಿಯಾನ ನಡೆಸುವ ಮೂಲಕ ಸ್ವಯಂಕೃತ ಅಪರಾಧ ಮುಚ್ಚಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡು’ ಎಂದು ಟೀಕಿಸಿದ್ದಾರೆ.

‘ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವರು ನಾಳಿನ ಹುಬ್ಬಳ್ಳಿ ಸಭೆಯಲ್ಲಿ ನೆರೆ ಪರಿಹಾರ, ರಾಜ್ಯದ ಪಾಲಿನ ಹಣಕಾಸಿನ ಬಗ್ಗೆ ಬಾಯಿ ತೆರೆಯಲಿ. ಸಿಎಎ ಬಗ್ಗೆ ಅರಿವು ಮೂಡಿಸುವ ಆತುರ ತೋರುವುದಕ್ಕಿಂತ ರಾಜ್ಯಕ್ಕೆ ನೀಡಬೇಕಿರುವ ಅನುದಾನ ನೀಡಿಕೆ ಮತ್ತು ನೆರೆ ಪರಿಹಾರಕ್ಕೆ ತಕ್ಷಣ ಸ್ಪಂದಿಸಲು ಮುಂದಾಗಲಿ’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News