ಸಂವಿಧಾನ ಉಲ್ಲಂಘಿಸಿ ಆಡಳಿತ ನಡೆಸಲು ಯಾವ ಸರಕಾರಕ್ಕೂ ಅಧಿಕಾರವಿಲ್ಲ: ರಮೇಶ್‍ ಕುಮಾರ್

Update: 2020-01-18 18:02 GMT

ಮೂಡಿಗೆರೆ, ಜ.18: ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ನಮ್ಮ ದೇಶಕ್ಕೆ ಬಂದಿರುವ ನುಸುಳುಕೋರರನ್ನು ಗುಂಡಿಕ್ಕಿ ಕೊಲ್ಲುತ್ತೇವೆ ಎನ್ನುತ್ತಾರೆ, ಮತ್ತೊಂದು ಕಡೆ ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ, ಇವರ ಹೇಳಿಕೆಗಳಲ್ಲಿ ಯಾರ ಹೇಳಿಕೆಯನ್ನು ನಂಬಬೇಕು. ಮೋದಿ ಅಮಿತ್ ಶಾ ಒಂದೇ ನಾಣ್ಯದ ಎರಡು ಮುಖಗಳು. ಇವರನ್ನು ನಂಬಿದರೆ ಕೆಡುವುದು ಗ್ಯಾರಂಟಿ, ಅವರ ಸಿಎಬಿ, ಎನ್‍ಆರ್‍ಸಿ ಕಾಯ್ದೆಗಳಿಂದ ದೇಶದ ಮೂಲ ನಿವಾಸಿಗಳು ಹಾಗೂ ಅಲ್ಪಸಂಖ್ಯಾತರಿಗೆ ತೊಂದರೆಯಾಗುವುದು ಸತ್ಯ ಎಂಬುದು ಇವರಿಬ್ಬರ ತದ್ವಿರುದ್ಧದ ಹೇಳಿಕೆಗಳಿಂದಲೇ  ಸ್ಪಷ್ಟವಾಗುತ್ತಿದೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದ್ದಾರೆ.

ಶನಿವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಏರ್ಪಡಿಸಿದ್ದ ಸಂವಿಧಾನ ಸಂರಕ್ಷಣಾ ದಿನಾಚರಣೆ ಹಾಗೂ ಕೇಂದ್ರ ಸರಕಾರದ ಎನ್‍ಆರ್‍ಸಿ, ಸಿಎಎ, ಎನ್‍ಪಿಆರ್ ಕಾಯ್ದೆ ವಿರೋಧಿಸಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದದ ಅವರು, ಮಾಜಿ ಪ್ರಧಾನಿ ವಾಜಪೇಯಿ ಮತ್ತು ಅಡ್ವಾಣಿಗಿಂತಲೂ ಮೋದಿ ಮತ್ತು ಅಮಿತ್‍ ಶಾ ದೊಡ್ಡವರಾಗಿದ್ದಾರೆ. ಇವರಿಗೆ ಆಡಳಿತ ನಡೆಸುವುದೇ ಗೊತ್ತಿಲ್ಲ. ಒಂದು ಕುಟುಂಬವೆಂದಾಗ ಮಕ್ಕಳ ವಿದ್ಯಾಭ್ಯಾಸ, ಮದುವೆ ಸೇರಿದಂತೆ ಅನೇಕ ಸಮಸ್ಯೆಗಳಿರುತ್ತವೆ. ಇಂತಹ ಸಮಸ್ಯೆಯನ್ನು ಪರಿಹರಿಸುವುದನ್ನು ಬಿಟ್ಟು ಗೋಡೆಗೆ ಸುಣ್ಣ ಹೊಡೆಯಲು ಮುಂದಾದರೆ ಸಮಸ್ಯೆ ಬಗೆಹರಿಯುವುದಿಲ್ಲ. ಭಾರತ ಸಂವಿಧಾನ ಪ್ರಜೆಗಳ ಇಚ್ಛೆಯಂತೆ ರೂಪಿತವಾಗಿದೆ. ಯಾವುದೇ ಸರಕಾರ ಬಂದರೂ ಸಂವಿಧಾನದ ಆಶಯದಂತೆ ಆಡಳಿತ ನಡೆಸಬೇಕು. ಅದನ್ನು ಉಲ್ಲಂಘನೆ ಮಾಡಿ ಆಡಳಿತ ನಡೆಸಲು ಯಾವ ಸರಕಾರಕ್ಕೂ ಅಧಿಕಾರವಿಲ್ಲ. ಕೇಂದ್ರದ ಬಿಜೆಪಿ ಸರಕಾರ ಸಂವಿಧಾನದಂತೆ ಆಡಳಿತ ನಡೆಸದೇ ಆರೆಸ್ಸೆಸ್ ನಾಯಕರು ಹೇಳಿದಂತೆ ಆಡಳಿತ ನಡೆಸುತ್ತಿದ್ದಾರೆ. ಇಂತಹ ಆಡಳಿದಿಂದಾಗಿ ದೇಶದ ನಿಧಾನವಾಗಿ ಹಿಟ್ಲರ್ ಸಿದ್ಧಾಂತದತ್ತ ವಾಲುತ್ತಿದ್ದು, ಜನರು ಎಚ್ಚೆತ್ತು ಕೊಳ್ಳದಿದ್ದಲ್ಲಿ ಡಿಟೆನ್ಶನ್ ಕ್ಯಾಂಪ್ ಸೇರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಧರ್ಮ ಅವರವರ ಸ್ವಂತ ವಿಚಾರ. ಆದರೆ ದೇಶ ಎಲ್ಲಾ ಜಾತಿ, ಧರ್ಮದವರ ಸೊತ್ತು. ಪೌರತ್ವ ಕಾಯ್ದೆಯನ್ನು ಒಂದು ಧರ್ಮಕ್ಕೆ 5 ವರ್ಷ, ಭಾರತದ ಭೂಮಿಯಲ್ಲಿ ಹುಟ್ಟಿದ ಇನ್ನೊಂದು ಧರ್ಮದವರಿಗೆ 11 ವರ್ಷ ನೀಡಲಾಗುತ್ತದೆ ಎಂದು ತಾರತಮ್ಯ ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ ಎಂದ ಅವರು, ಕೇಂದ್ರ ಸರಕಾರದ ಇಂತಹ ಜನವಿರೋಧಿ ಶಾಸನದಿಂದ ಇಡೀ ದೇಶದ ಜನರು ಬೀದಿಗೆ ಬೀಳುತ್ತಾರೆ. ಇತಿಹಾಸ ಮೆಲುಕು ಹಾಕಿದರೆ ಜನಶಕ್ತಿ ಮುಂದೆ ಬೇರೊಂದಿಲ್ಲ. ಜನ ದಂಗೆ ಎದ್ದರೆ ಗೆಲ್ಲೋದು ಜನರೇ ಎಂಬುದು ಅರ್ಥ ಮಾಡಿಕೊಂಡರೆ ಒಳ್ಳೆಯದು. ಇಲ್ಲವಾದರೆ ಸರ್ವನಾಶವಾಗುವುದು ಖಂಡಿತ ಎಂದು ರಮೇಶ್‍ ಕುಮಾರ್ ಎಚ್ಚರಿಸಿದರು. 

ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರು ಆಹಾರ, ಉದ್ಯೋಗ ನೆಲೆ ಬಯಸಿ ವಲಸೆ ಹೋಗುವುದು ಸಹಜ. ಕೇವಲ ಮಾನವರು ಮಾತ್ರವಲ್ಲ. ಪ್ರಾಣಿ ಪಕ್ಷಿಗಳು ಹೊರ ದೇಶಕ್ಕೆ ವಲಸೆ ಹೋಗಿ ಬರುತ್ತದೆ. ಇವರ ಕಾನೂನಿಗೆ ಪ್ರಾಣಿಪಕ್ಷಿಗಳ ವಲಸೆ ತಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಭಾರತ ಸಂವಿಧಾನ ಸರ್ವಶ್ರೇಷ್ಟವಾದದ್ದು. ಸಂವಿಧಾನದ ಮೂಲಭೂತ ಅಂಶಗಳನ್ನು ತಿದ್ದುಪಡಿ ಮಾಡಲು ಅವಕಾಶವಿಲ್ಲವೆಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಬಿಜೆಪಿಯವರು ಏನೇ ಮಾತನಾಡಿದರೂ ಸಂವಿಧಾನದ ಒಂದು ಅಕ್ಷರ ಬದಲಾಯಿಸಲು ಸಾಧ್ಯವೇ ಇಲ್ಲ. ಕೆಲವೊಂದು ಬಾರಿ ವಿರೋಧಿಗಳಿಗೆ ಧನ್ಯವಾದಗಳು ಹೇಳಬೇಕಾಗುತ್ತದೆ. ಅವರಿಗೆ ಗೊತ್ತಿಲ್ಲದಂತೆ ನಮಗೆ ಸಹಾಯ ಮಾಡಿ ನಮ್ಮೆಲ್ಲರ ಕೈಗೆ ರಾಷ್ಟ್ರಧ್ವಜ ಹಿಡಿಯುವಂತೆ ಮಾಡಿದ್ದಾರೆ. ಈ ದೇಶದಲ್ಲಿ ಸವಾಲಿಗೆ ಒಳಪಟ್ಟವರೆಲ್ಲರೂ ಹೋರಾಟಕ್ಕೆ ಮುಂದಾದರೆ ರಾಷ್ಟ್ರಧ್ವಜವನ್ನು ಅವರೇ ಕೈಗೆ ಕೊಟ್ಟಂತೆ ಎಲ್ಲ ಹಕ್ಕುಗಳನ್ನೂ ನಾವು ಪಡೆಯಬಹುದು ಎಂದು ಹೇಳಿದರು. 

ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ವೈಎಸ್‍ವಿ ದತ್ತ, ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಡಾ.ನಜ್ಮಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಷಣಕಾರರಿಗೆ ಮಾತ್ರ ವೇದಿಕೆ ಮೇಲೇರುವ ಅವಕಾಶ ನೀಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂಗೌಡ ವಹಿಸಿದ್ದರು. ಸಮಿತಿ ಕಾರ್ಯಾಧ್ಯಕ್ಷ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರಗೌಡ, ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೇನ್, ಎಂ.ಪಿ.ಮನು, ಉಪಾಧ್ಯಕ್ಷ ಬಿಎಸ್‍ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಮುಖಂಡರಾದ ಹೊಸಕೆರೆ ರಮೇಶ್, ಹಂಝಾ, ಎಂ.ಎಸ್.ಅನಂತ್, ಸಿ.ಕೆ.ಇಬ್ರಾಹಿಂ, ಮರಗುಂದ ಪ್ರಸನ್ನ, ಜಕಾರಿಯಾ, ಸಂಪತ್, ಅಂಜುಮಾನ್ ಕಮಿಟಿ ಅಧ್ಯಕ್ಷ ಹುಸೇನ್‍ಭಾಷ, ಸೇರಿದಂತೆ ಎಲ್ಲಾ ಮಸೀದಿ ಧರ್ಮಗುರುಗಳು, ಕಮಿಟಿ ಅಧ್ಯಕ್ಷರು ಉಪಸ್ಥಿತರಿದ್ದರು. 

ದಿಕ್ಕು ತಪ್ಪಿಸುವ ಆಟ
ಅಚ್ಛೇದಿನ್ ಬದಲು ಕೆಟ್ಟ ಕಾಲ ಬಂದಿದೆ. ಜಿಎಸ್‍ಟಿಯಿಂದ ಉದ್ಯಮ, ಕೈಗಾರಿಕೆ  ನೆಲಕಚ್ಚಿದೆ. ನಿರುದ್ಯೋಗ ನಿವಾರಿಸುತ್ತೇವೆಂದವರು ಹೆಚ್ಚಾಗಿ ನಿರುದ್ಯೋಗ ಸೃಷ್ಟಿಸಿದ್ದಾರೆ. ಪೆಟ್ರೋಲ್, ಡೀಸಲ್ ಬೆಲೆ ಗಗನಕ್ಕೇರಿದೆ. ಜಿಡಿಪಿ ಕೆಳಗಿಳಿದಿದೆ. ಈ ಬಗ್ಗೆ ಜನರಿಗೆ ಉತ್ತರ ಕೊಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಜನರ ದಿಕ್ಕು ತಪ್ಪಿಸಲು ಪೌರತ್ವ ಕಾಯ್ದೆ ಎಂಬ ಆಟವಾಡುತ್ತಿದ್ದಾರೆ. ಕಾಯ್ದೆ ಹಿಂಪಡೆಯುವವರೆಗೂ ಹೋರಾಡುವುದು ಅನಿವಾರ್ಯವಾಗಿದೆ.
- ಮೋಟಮ್ಮ, ಮಾಜಿ ಸಚಿವೆ

ಮೌನಕ್ಕೆ ಶರಣಾದವರಿಗೂ ಕಾದಿದೆ ಹಬ್ಬ:
ಸಂವಿಧಾನವೆಂಬ ಭಗವತ್ ಗೀತೆಯನ್ನು ಯಾರೋ ಇಬ್ಬರು ಬಂದು ಬದಲಾಯಿಸಲು ಸಾಧ್ಯವಿಲ್ಲ. ಪೌರತ್ವ ಕಾಯ್ದೆಯಿಂದ ಒಂದು ಧರ್ಮದವರಿಗೆ ಮಾತ್ರ ತೊಂದರೆಯಾಗುತ್ತದೆ. ನಮಗೇನು ಆಗುವುದಿಲ್ಲವೆಂದು ಬಹುಸಂಖ್ಯಾತ ಹಿಂದೂಗಳು ಚಿಂತನೆ ಮಾಡಿದರೆ ಅದು ತಪ್ಪು ತಿಳುವಳಿಕೆ. ನಾಳೆ ನಿಮ್ಮ ಮನೆ ಬಾಗಿಲಿಗೆ ಈ ಕಾಯ್ದೆ ಬಂದು ಕೂರುತ್ತದೆ. ಹಾಗಾಗಿ ಎಲ್ಲರೂ ಜಾಗೃತರಾಗಬೇಕು.
- ವೈಎಸ್‍ವಿ ದತ್ತ, ಮಾಜಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News