ಜೀವನದ ಮೌಲ್ಯ ಎತ್ತಿ ಹಿಡಿದ ಯೋಗಿ ವೇಮನ: ಎಸ್.ಆರ್.ಪಾಟೀಲ್

Update: 2020-01-19 15:10 GMT

ಬಾಗಲಕೋಟೆ, ಜ.19: ಜಾತಿ, ಮತ, ಪಂಥವೆನ್ನದೆ ಎಲ್ಲರೂ ಒಂದೆ ಎಂದು ಸಾರಿ, ಜೀವನದ ಮೌಲ್ಯವನ್ನು ಎತ್ತಿ ಹಿಡಿದ ವಿಶ್ವಮಾನವ, ಕವಿ ಮಹಾಯೋಗಿ ವೇಮನ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹೇಳಿದರು.

ರವಿವಾರ ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೇಮನರು ಜಾತಿ ವ್ಯವಸ್ಥೆ ಮೌಢ್ಯತೆ, ಅಂದಕಾರ ಹಾಗೂ ಸಂಪ್ರದಾಯವನ್ನು ಮೆಟ್ಟಿ ನಿಂತು ಜ್ಯಾತ್ಯಾತೀತ ಸಮಾಜವನ್ನು ನಿರ್ಮಿಸಿದರು. ನಿಜ ಧರ್ಮದ ಬಗ್ಗೆ ತನ್ನ ಕಾವ್ಯದ ಮೂಲಕ ಬೆಳಕು ಚಲ್ಲಿದರು ಎಂದು ಎಸ್.ಆರ್.ಪಾಟೀಲ್ ತಿಳಿಸಿದರು.

ವೇಮನರು ತೆಲುಗಿನಲ್ಲಿ ಬರೆದ ಅನೇಕ ವಚನಗಳು ಬೇರೆ ಬೇರೆ ಭಾಷೆಗಳಲ್ಲದೇ ಕನ್ನಡಕ್ಕೂ ಭಾಷಾಂತರಗೊಂಡಿವೆ. ಅವುಗಳು ಕನ್ನಡ ಭಾಷೆಯನ್ನು ಸ್ತ್ರೀಮಂತಗೊಳಿಸಿವೆ. ಅವರ ವಚನಗಳು ನೇರವಾಗಿ ಮಾನವನ ಅಂತರಂಗವನ್ನು ಶುದ್ದಗೊಳಿಸಲು ಮಾರ್ಗದರ್ಶನ ನೀಡುವಂತಹದ್ದಾಗಿವೆ ಎಂದು ಅವರು ಬಣ್ಣಿಸಿದರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಹಸಿದವರಿಗೆ ತುತ್ತು ಅನ್ನ ನೀಡುವುದೇ ನಿಜವಾದ ಧರ್ಮವೆಂದು ಸಾರಿದವರು. ನೋವುಗಳಿಗೆ ಉತ್ತರಿಸಲು ಎಲ್ಲ ಕಾಲ ಘಟ್ಟಕ್ಕೂ ಅನ್ವಯಿಸುವಂತೆ ವೇಮನರು ಕಾವ್ಯಗಳನ್ನು ಬರೆದಿದ್ದಾರೆ ಎಂದು ಎಸ್.ಆರ್.ಪಾಟೀಲ್ ತಿಳಿಸಿದರು.

ಮೇವನರು ಸಾಹಿತ್ಯವನ್ನು ಪ್ರತಿಷ್ಠೆಗಾಗಿ ರಚಿಸಿದವರಲ್ಲ. ಸಮಾಜದಲ್ಲಿನ ಮೂಢನಂಬಿಕೆ ದೂರಮಾಡಲು, ಸಮಾಜದ ಒಳಿತಿಗಾಗಿ ರಚಿಸಿದ್ದಾರೆ. ಶಿಲೆಯಲ್ಲಿ ಶಿವನನ್ನು ಕಾಣುವಂತವರಿಗೆ ಶಿವ ನಮ್ಮಲ್ಲಿಯೇ ಇದ್ದಾನೆ, ನಿತ್ಯ ಬದುಕಿನಲ್ಲಿ ಇದ್ದಾನೆ ಎಂದು ಸಾರಿದವರು. ತಮ್ಮ ಸಮುದಾಯದವರು ಮೇಲೆ ಬರುವುದರ ಜೊತೆಗೆ ಇತರ ಸಮಾಜವನ್ನು ಮೇಲೆತ್ತುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.

ಮೇವನ ಬಗ್ಗೆ ಉಪನ್ಯಾಸ ನೀಡಿದ ಶಿಕ್ಷಕಿ ಸರಳಾ ಸಿಂಗರೆಡ್ಡಿ ಮಾತನಾಡಿ, ಭರತ ಭೂಮಿಯಲ್ಲಿ ಸಾಧು ಸಂತರು, ಸತ್ಪುರುಷರು, ಯೋಗಿಗಳು ಅವತರಿಸಿ ಸಾವಿವಾರು ವರ್ಷಗಳು ಗತಿಸಿದರು ಇಂದಿಗೂ ಚಿರಸ್ಮರಣೀಯರಾಗಿದ್ದಾರೆ. ಅಂತವರ ಸಾಲಿನಲ್ಲಿ ವೇಮನರು ಕವಿ, ಯೋಗಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರು. ವೇಮನರು ಬರೆದ ಸಾಹಿತ್ಯವನ್ನು ಆಂಗ್ಲ ಭಾಷೆಗೆ ತರ್ಜುಮೆಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ರಾಜಮನೆತನದಲ್ಲಿ ಹುಟ್ಟಿದ ವೇಮನರು ಸಂಸಾರ ಬಿಟ್ಟು ತನ್ನ 33 ವಯಸ್ಸಿನಲ್ಲಿಯೇ ಯೋಗಿಯಾದವರು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಡಾ.ಸಿದ್ದಣ್ಣ ಬಾಡಗಿ ರಚಿಸಿರುವ ತ್ರಿಕಾಲಜ್ಞಾನಿ ಯೋಗಿ ವೇಮನ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅಲ್ಲದೇ ಶಿರೂರಿನ ಮಲ್ಲಮ್ಮ ಗುಲಗಂಜಿ ಅವರು 5 ಎಕರೆ ಜಮೀನನ್ನು ಸಮಾಜಕ್ಕಾಗಿ ದಾನವಾಗಿ ನೀಡಿದ್ದರಿಂದ ಅವರ ಉದಾರತೆಯ ಮನೋಭಾವನೆಯನ್ನು ಕಂಡು ಸಮಾಜದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ.ಉಪಕಾರ್ಯದರ್ಶಿ ಎ.ಜಿ.ತೋಟದ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತಹಶೀಲ್ದಾರ ಗುರುಬಸಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಶಿರೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News