ಕಮಿಷನರ್ ಹರ್ಷ ಇವತ್ತೇನಾದ್ರೂ ಮತ್ತೆ ಬಾಂಬ್ ಹಾಕಿಸಿದ್ರಾ..?: ಕುಮಾರಸ್ವಾಮಿ ವ್ಯಂಗ್ಯ

Update: 2020-01-21 13:30 GMT

ಚಿಕ್ಕಮಗಳೂರು, ಜ.21: ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಮಾತ್ರ ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ. ಬಿಜೆಪಿ ಸರಕಾರಕ್ಕೂ ಮುನ್ನ ನಾನು ರಾಜ್ಯದ ಮುಖ್ಯಮಂತ್ರಿಯಾಗಿ 14 ತಿಂಗಳು ಅಧಿಕಾರ ನಡೆಸಿದ್ದೇನೆ, ಆದರೆ ಯಾವತ್ತೂ ಇಂತಹ ವಾತಾವರಣ ಕಂಡು ಬಂದಿಲ್ಲ. ಅಂತಹ ವಾತಾವರಣಕ್ಕೆ ನಾನು ಅವಕಾಶ ನೀಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಜಿಲ್ಲೆಯ ಶೃಂಗೇರಿ ಶಾರದಾಂಬ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿರುವ ಕುಮಾರಸ್ವಾಮಿ ಅವರು, ಮಂಗಳವಾರದ ಧಾರ್ಮಿಕ ಪೂಜಾ ಕಾರ್ಯಗಳನ್ನು ಮುಗಿಸಿ ಹಿಂದಿರುಗುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ್ದು, ಮಂಗಳೂರು ಪೊಲೀಸ್ ಕಮಿಷನರ್ ಹರ್ಷ ಅವರು ಇವತ್ತೇನಾದರು ಮತ್ತೆ ಬಾಂಬ್ ಹಾಕಿಸಿದ್ದಾರಾ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲೇ ಇಂತಹ ಗಲಭೆಗಳು ಏಕೆ ನಡೆಯುತ್ತದೆ ಗೊತ್ತಿಲ್ಲ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ತಾನು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಒಂದೇ ಒಂದು ಘಟನೆಯೂ ನಡೆದಿರಲಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಸಮಾಜವನ್ನು ಒಡೆಯುವ, ಅಶಾಂತಿಯ ವಾತಾವರಣ ಸೃಷ್ಟಿಸುವ ಹುನ್ನಾರಗಳು ನಡೆಯುತ್ತಿವೆ ಎಂದು ತನಗೆ ಅನಿಸುತ್ತಿದೆ ಎಂದ ಅವರು, ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಘಟನೆಯ ಬೆಳವಣಿಗೆಗಳನ್ನು ನೋಡಿದಾಗ ಮಂಗಳೂರಿನಲ್ಲೇ ಇಂತಹ ಘಟನೆಗಳು ಏಕೆ ನಡೆಯುತ್ತಿವೆ ಎಂದು ಸಂಶಯ ಮೂಡುತ್ತಿದೆ. ಇಂತಹ ಘಟನೆಗಳು ನಡೆಯಲು ರಾಜ್ಯ ಸರಕಾರ ಏಕೆ ಎಡೆ ಮಾಡಿಕೊಡುತ್ತಿದೆ ಎಂದು ತಿಳಿಯುತ್ತಿಲ್ಲ ಎಂದರು.

ಬಾಂಬ್ ಪತ್ತೆ ಪ್ರಕರಣವನ್ನು ಅಧಿಕಾರಿಗಳು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ತನಿಖೆ ಮಾಡಬೇಕು. ಯಾರದೋ ಮುಲಾಜಿಗೊಳಗಾಗಿ ಕೆಲಸ ಮಾಡಬಾರದು. ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭ ಬಾಂಬ್ ನಿಷ್ಕ್ರೀಯ ಮಾಡುವ ಅಣಕು ಪ್ರದರ್ಶನ ಮಾಡುತ್ತಾರೆ. ಮಂಗಳೂರಿನಲ್ಲಿ ಪತ್ತೆಯಾದ ಈ ಬಾಂಬ್ ಪ್ರಕರಣವೂ ತನಗೆ ಅಣಕು ಪ್ರದರ್ಶನದಂತೆಯೇ ಕಂಡು ಬರುತ್ತಿದೆ. ಇಂತಹ ಘಟನೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯಾವುದೇ ಅವಕಾಶ ನೀಡಬಾರದು. ರಾಜ್ಯದಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಬಾಳುವಂತಹ ವಾತಾವರಣವನ್ನು ನಿರ್ಮಾಣ ಮಾಡುವ ಜವಬ್ದಾರಿ ಸರಕಾರ ಮತ್ತು ಪೊಲೀಸರ ಮೇಲಿದೆ. ಪೊಲೀಸರು ಯಾರದ್ದೋ ಮುಲಾಜಿಗೊಳಗಾಗಿ ಘಟನೆಯನ್ನು ಲಘುವಾಗಿ ಪರಿಗಣಿಸಿದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಈ ಘಟನೆಯನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಅನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಸ್ಫೋಟಿಸಿರುವ ಪ್ರಕರಣ ಕಡಿಮೆ. ಮಾಧ್ಯಮಗಳಲ್ಲಿ ಸೋಮವಾರ ಬಾಂಬ್ ಸ್ಫೋಟಿಸಿದ ದೃಶ್ಯಗಳನ್ನು ನೋಡಿದಾಗ ಬರೀ ಹೊಗೆ ಕಾಣುತ್ತಿತ್ತು. ಬಾಂಬ್ ನೆಪದಲ್ಲಿ ಜನರನ್ನು ಭಯಭೀತರನ್ನಾಗಿಸುವ ಘಟನೆ ಯಾವುದೇ ಕಾರಣಕ್ಕೂ ನಡೆಯಬಾರದು. ಇಂತಹ ಘಟನೆಗಳು ಕರಾವಳಿಯ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುವುದರಿಂದ ಪೊಲೀಸರು ಮತ್ತು ಸರಕಾರ ಜನರ ಭಾವನೆಗಳೊಂದಿಗೆ ಹುಡುಗಾಟ ಆಡಬಾರದು. ಘಟನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಜನರ ಮುಂದೆ ಸತ್ಯಾಂಶವನ್ನು ಹೇಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News