ಆದಿತ್ಯ ರಾವ್ ಗೆ ಇದೆ 'ಬಾಂಬ್' ಹಿನ್ನೆಲೆ !

Update: 2020-01-22 14:37 GMT

ಬೆಂಗಳೂರು, 22: 'ಇದು ಎರಡು ವರ್ಷ ಹಿಂದಿನ ಘಟನೆ. ಮಧ್ಯಾಹ್ನ ಸಯಮಕ್ಕೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ವ್ಯಕ್ತಿಯೋರ್ವ, ಹೆಂಗಸಿನ ಧ್ವನಿಯಲ್ಲಿಯೇ ನಿಲ್ದಾಣದ ಪಾರ್ಸಲ್ ಕೊಠಡಿ ಬಳಿ ಬಾಂಬ್ ಇಟ್ಟಿದ್ದೇನೆ ಎಂದು ಹೇಳಿ ಮಾತು ಮುಗಿಸಿದ. ಇದನ್ನು ಕೇಳಿದ ಸಿಬ್ಬಂದಿ, ಮೇಲಾಧಿಕಾರಿಗೆ, ಬಳಿಕ ರೈಲ್ವೆ ಪೊಲೀಸರಿಗೂ ದೂರು ಹೋಗಿ, ಎಲ್ಲರೂ ಆತಂಕಗೊಂಡಿದ್ದರು. 4 ಗಂಟೆಗಳ ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾಯಿತು. ಇದಕ್ಕೆಲ್ಲಾ ಕಾರಣ ಸದ್ಯ ಮಂಗಳೂರು ಪ್ರಕರಣದಲ್ಲಿ ಬಂಧಿತನಾಗಿರುವ ಆದಿತ್ಯ ರಾವ್' ಎಂದು ಹೆಸರು ಹೇಳಲು ಇಚ್ಛಿಸದ ರೈಲ್ವೆ ಅಧಿಕಾರಿಯೊಬ್ಬರು ಹಳೇ ಘಟನೆಯನ್ನು ಮೆಲುಕು ಹಾಕಿದ್ದಾರೆ.

2018ರ ಆಗಸ್ಟ್ 28ರಂದು ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತನೊಬ್ಬ ಕರೆ ಮಾಡಿದ್ದ. ತಕ್ಷಣ ಭದ್ರತಾ ಸಿಬ್ಬಂದಿ, ಎರಡೂ ನಿಲ್ದಾಣಗಳಲ್ಲಿ ಶೋಧ ನಡೆಸಿದ್ದರು.

ನಿಲ್ದಾಣದಿಂದ ಬೆಳಗ್ಗೆ ದೆಹಲಿಯತ್ತ ಹೊರಡಲಿರುವ ವಿಮಾನದಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ನಿಲ್ದಾಣದ ಮಾಹಿತಿ ಕೇಂದ್ರಕ್ಕೆ ಕರೆ ಮಾಡಿ ಹೇಳಿದ್ದ. ಬಳಿಕ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನ ದಳಗಳೊಂದಿಗೆ ವಿಮಾನ ಹಾಗೂ ನಿಲ್ದಾಣದಲ್ಲಿ ಬಾಂಬ್‌ಗಾಗಿ ಶೋಧ ನಡೆಸಿ ನಂತರ, ಇದೊಂದು ಹುಸಿ ಕರೆ ಎಂದು ಘೋಷಿಸಿದ್ದರು.

ಇನ್ನು ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಧ್ಯಾಹ್ನ 1 ಗಂಟೆಗೆ ಕರೆ ಮಾಡಿದ್ದ ಅಪರಿಚಿತ, ನಿಲ್ದಾಣದ ಪಾರ್ಸಲ್ ಕೊಠಡಿ ಬಳಿ ಬಾಂಬ್ ಇಟ್ಟಿದ್ದೇನೆ. ಕೆಲವೇ ಗಂಟೆಗಳಲ್ಲಿ ಸ್ಫೋಟಗೊಳ್ಳಲಿದೆ ಎಂದು ಬೆದರಿಸಿದ್ದ. ನಂತರ ಪೊಲೀಸರು, ರೈಲ್ವೆ ಸುರಕ್ಷತಾ ಪಡೆಯ (ಆರ್‌ಪಿಎಫ್) ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದೊಂದಿಗೆ ನಿಲ್ದಾಣದಲ್ಲಿ ಶೋಧ ನಡೆಸಿದರು. ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ಬಳಿಕವೇ ಇದೊಂದು ಹುಸಿ ಕರೆ ಎಂಬುದು ಪೊಲೀಸರಿಗೆ ಗೊತ್ತಾಗಿತ್ತು.

48 ಗಂಟೆಯಲ್ಲಿ ಸಿಕ್ಕಿದ್ದ: ಹುಸಿ ಬಾಂಬ್ ಕರೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕೆಐಎಎಲ್ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡವು ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ 2018ನೇ ಸಾಲಿನ ಆ.30ರಂದು ಆರೋಪಿ ಆದಿತ್ಯರಾವ್ ಅನ್ನು 48 ಗಂಟೆಯೊಳಗೆ ಇಲ್ಲಿನ ಬೈಯಪ್ಪನಹಳ್ಳಿಯಲ್ಲಿ ಬಂಧಿಸಿದ್ದರು.

ಹತ್ತಾರು ಕೆಲಸ, ಜೊತೆಗೆ ಕಳ್ಳತನ ?!

ಬಿಇ ಹಾಗೂ ಎಂಬಿಎ ವ್ಯಾಸಂಗ ಮಾಡಿರುವ ಆದಿತ್ಯ, 2007ರಲ್ಲಿ ಬೆಂಗಳೂರಿಗೆ ಬಂದು ಎಂ.ಜಿ ರಸ್ತೆಯ ಐಸಿಐಸಿಐ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ. ಅಲ್ಲಿ ಒಂದು ವರ್ಷ ದುಡಿದ ಆತನಿಗೆ, ಎಚ್‌ಎಸ್‌ಬಿಸಿ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಹುದ್ದೆ ಲಭಿಸಿತು. ಬಳಿಕ ಕೈತುಂಬ ಸಂಬಳ ಸಿಗುತ್ತಿದ್ದ ಬ್ಯಾಂಕ್ ಕೆಲಸ ತೊರೆದು, ಮೂಡಬಿದರೆಯ ಆಳ್ವಾಸ್ ಕಾಲೇಜಿಗೆ ಸೆಕ್ಯುರಿಟಿ ಗಾರ್ಡ್ ಆಗಿ ಹೋದ. 2013ರಲ್ಲಿ ಪುತ್ತಿಗೆ ಮಠಕ್ಕೆ ತೆರಳಿ ಕೆಲ ಕಾಲ ಅಡುಗೆ ಸಹಾಯಕನಾಗಿಯೂ ಕೆಲಸ ಮಾಡಿದ. ಹೀಗೆ, ಒಂದು ಕಡೆ ನೆಲೆಯೂರದ ಆದಿತ್ಯ, 2017ರಲ್ಲಿ ಪುನಃ ನಗರಕ್ಕೆ ಬಂದು ಜಯನಗರದ ಆದಿತ್ಯ ಬಿರ್ಲಾ ಜೀವ ವಿಮಾ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ. ಉದ್ಯೋಗಿಯೊಬ್ಬರ ಲ್ಯಾಪ್‌ಟಾಪ್ ಕಳವು ಮಾಡಿಕೊಂಡು ಅಲ್ಲಿಂದಲೂ ಪರಾರಿಯಾದ ಆರೋಪ ಹಿನ್ನೆಲೆ ಆದಿತ್ಯನ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆಶ್ರಯ ಕೇಳಿಕೊಂಡು ಸದ್ದುಗುಂಟೆಪಾಳ್ಯದ ಸ್ನೇಹಿತನ ಮನೆಗೆ ಹೋದ ಆತ, ಅಲ್ಲಿಂದಲೂ ಲ್ಯಾಪ್‌ಟಾಪ್ ಸಮೇತ ಪರಾರಿಯಾಗಿದ್ದ ಎಂದು ಹೇಳಲಾಗುತ್ತಿದೆ.

ಬಾಯಿ ತುಂಬಾ ಬಾಂಬ್ ಬೆದರಿಕೆ ?

* 2018ನೇ ಆ.28ರಂದು ಕೆಐಎಎಲ್‌ಗೆ ಮೊದಲ ಕರೆ ಮಾಡಿದ ಆದಿತ್ಯರಾವ್, ನಿಲ್ದಾಣದ ಪಾರ್ಕಿಂಗ್ ಅಥವಾ ಲಾಬಿ ಪ್ರದೇಶದಲ್ಲಿ ಬಾಂಬ್ ಇದೆ. ಅದು 11 ಗಂಟೆಗೆ ಸ್ಫೋಟವಾಗುತ್ತದೆ ಎಂದಿದ್ದ. ಆ ಕರೆಯನ್ನು ಗಂಭೀರವಾಗಿ ಪರಿಗಣಿಸಿ, ಬಾಂಬ್ ನಿಷ್ಕ್ರಿಯ ದಳದ ಮೂಲಕ ತಪಾಸಣೆ ಮಾಡಿಸಲಾಗಿತ್ತು.

* 2018ನೇ ಆಗಸ್ಟ್ ನಲ್ಲಿ ಏರ್ ಏಷ್ಯಾ ಕೌಂಟರ್‌ಗೆ ಇನ್ನೊಂದು ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ, ಕೊಚ್ಚಿಗೆ ತೆರಳುವ ವಿಮಾನದಲ್ಲಿ ಬಾಂಬ್ ಇದೆ ಎಂದಿದ್ದ. ಡ್ಯೂಟಿ ಮ್ಯಾನೇಜರ್‌ಗೆ ಕರೆ ಮಾಡಿ, ಮುಂಬೈ, ಕೊಯಮತ್ತೂರು ಹಾಗೂ ಹೊಸದಿಲ್ಲಿಗೆ ತೆರಳಲಿರುವ ವಿಮಾನಗಳಲ್ಲಿ ಸ್ಫೋಟ ಸಂಭವಿಸಲಿದೆ ಎಂದು ಹೇಳಿದ್ದ. ಇದರಿಂದಾಗಿ ಕೆಐಎಎಲ್‌ನಲ್ಲಿ ಅಂದು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

* ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಲಗೇಜ್ ಕೊಠಡಿಯಲ್ಲಿ ತನ್ನ ಲಗೇಜ್‌ಗೆ ಹಣ ಕೇಳಿದರೆಂದು ಆದಿತ್ಯ ರೈಲು ನಿಲ್ದಾಣದ ಅಧಿಕಾರಿಗಳಿಗೂ ಬಾಂಬ್ ಭಯ ಹುಟ್ಟಿಸಿದ್ದ.

* ಆ.28ರಂದು ಈಗ ನಿಲ್ದಾಣದಲ್ಲಿರುವ ರೈಲುಗಳ ಪೈಕಿ ಒಂದರಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿ ಹೇಳಿದ್ದ. ಇದರಿಂದ ನಿಲ್ದಾಣದ ಸಿಬ್ಬಂದಿ ತಕ್ಷಣ ಎಲ್ಲ ಪ್ರಯಾಣಿಕರನ್ನೂ ಹೊರಗೆ ಕಳುಹಿಸಿ ತಪಾಸಣೆ ಮಾಡಿಸಿದ್ದರು.

ಮಿಮಿಕ್ರಿ ಮಾತುಗಾರ!

ಪ್ರತಿ ಬಾರಿ ಹುಸಿ ಬಾಂಬ್ ಕರೆ ಮಾಡುವಾಗ ಆರೋಪಿ ಆದಿತ್ಯರಾವ್, ಯುವತಿಯರಂತೆ ಮಾತನಾಡುತ್ತಿದ್ದ. ಕೆಲ ಬಾರಿ, ಮಕ್ಕಳಂತೆಯೂ ಮಾತನಾಡಿ, ಅನುಮಾನ ಆಗದಂತೆ ಎಚ್ಚರಿಕೆ ವಹಿಸುತ್ತಿದ್ದ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News