2025ರ ವೇಳೆಗೆ ಹಿಂದೂರಾಷ್ಟ್ರ ಮಾಡಲು ಆರೆಸ್ಸೆಸ್ ಷಡ್ಯಂತ್ರ: ಸೀತಾರಾಮ್ ಯೆಚೂರಿ

Update: 2020-01-22 16:59 GMT

ಕಲಬುರಗಿ, ಜ.22: ಆರೆಸ್ಸೆಸ್, ಬಿಜೆಪಿ ಒಕ್ಕೂಟವು ಭಾರತವನ್ನು ಬ್ರಾಹ್ಮಣಶಾಹಿ ಹಿಂದೂರಾಷ್ಟ್ರ ಮಾಡಲು ಸಂಚು ರೂಪಿಸಿದ್ದು, ಅದರ ಭಾಗವಾಗಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಜಾರಿ ಮಾಡುತ್ತಿವೆ ಎಂದು ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2025ಕ್ಕೆ ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್ ಸ್ಥಾಪನೆಯಾಗಿ 100 ವರ್ಷ ಆಗಲಿದೆ. ಆ ಹೊತ್ತಿಗೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲೆಂದೇ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿಗೊಳಿಸಲಾಗುತ್ತಿದೆ. ಇದರ ವಿರುದ್ಧ ಮನೆ, ಮನೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಕೇಂದ್ರ ಸರಕಾರದ ಪ್ರಕಾರ ದೇಶದ ಜಿಡಿಪಿ 4.8 ಇದೆ. ಆದರೆ, ಅಂತರ್‌ರಾಷ್ಟ್ರಿಯ ಸಂಸ್ಥೆಗಳ ಪ್ರಕಾರ ಭಾರತದ ಆರ್ಥಿಕ ವ್ಯವಸ್ಥೆ ಕುಸಿದಿದ್ದು, ಜಿಡಿಪಿ ಶೇ2.8 ಇದೆ. ಆಟೊಮೊಬೈಲ್ ಮತ್ತು ಜವಳಿ ಉದ್ಯಮದಲ್ಲಿ 30 ಲಕ್ಷ ಉದ್ಯೋಗಗಳು ಕಡಿತಗೊಂಡಿವೆ ಎಂದು ಅವರು ದೂರಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದಲ್ಲಿ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಶ್ರೀಮಂತರು ಬಂಡವಾಳಶಾಹಿಗಳಾಗಿ ಪರಿವರ್ತನೆಯಾಗುತ್ತಿದ್ದಾರೆ. ಮಧ್ಯಮ ವರ್ಗದ ಸಮುದಾಯ ಬಡವರಾಗುವ ಹಂತಕ್ಕೆ ಬಂದಿದ್ದಾರೆ. ಇದು ಹೀಗೆ ಮುಂದುವರೆದರೆ ಕೆಲವು ಬಂಡವಾಳಶಾಹಿಗಳನ್ನು ಹೊರತುಪಡಿಸಿ ಇಡೀ ಭಾರತ ನಿರ್ಗತಿಕವಾಗಲಿದೆ ಎಂದು ಅವರು ಹೇಳಿದರು.

ದೇಶದ ಗೃಹಸಚಿವ ಅಮಿತ್ ಶಾ ಬ್ರಿಟಿಷರ ಹಾಗೆ ಆಡಳಿತ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಎ ವಾಪಸ ತೆಗೆದುಕೊಳ್ಳುವುದಿಲ್ಲವೆಂದು ಹೇಳುತ್ತಾರೆ. ಬ್ರಿಟಿಷರು ಇದೇ ತರಹ ಮಾತಾಡುತ್ತಿದ್ದರು. ಜನಪ್ರತಿನಿಧಿಗಳು ಜನರ ಸೇವಕರಾಗಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ ಆಡಳಿತವು ಜನರಿಗೆ ಕಂಟಕ ಪ್ರಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಶ್ಮೀರವನ್ನು ನಾಶಮಾಡಲಾಗಿದೆ: ಕೇಂದ್ರ ಸರಕಾರ ಇಡೀ ಕಾಶ್ಮೀರ ಜನತೆಯನ್ನು ಗೃಹ ಬಂಧನದಲ್ಲಿಟ್ಟು, ಸಂಪೂರ್ಣ ನಾಶ ಮಾಡಲಾಗಿದೆ. ಅವರ ಪರವಾಗಿ ಪ್ರಶ್ನೆ ಮಾಡುವವರನ್ನು ಬಂಧಿಸಲಾಗುತ್ತಿದೆ. ಇಡೀ ಭಾರತದ ಪರಿಸ್ಥಿತಿ ಇಸ್ರೇಲ್, ಪ್ಯಾಲಿಸ್ತೇನ್ ರೀತಿ ಆಗಿದೆ. ಇದರ ವಿರುದ್ಧ ಜನತೆಗೆ ಮನವರಿಕೆ ಮಾಡಿಕೊಡುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವೆಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸಿಪಿಎಂನ ಮಾರುತಿ ಮಾನ್ಪಡೆ, ಗಂಗಮ್ಮಾ ಬಿರಾದಾರ, ಅಶೋಕ ಪಾಟೀಲ್ ಮತ್ತಿತರರಿದ್ದರು.

ಜ.23ರಿಂದ ಅಸಹಕಾರ ಚಳವಳಿ
ಎನ್‌ಆರ್‌ಸಿ, ಎನ್‌ಪಿಆರ್ ಕುರಿತು ಅಧಿಕಾರಿಗಳು ಮನೆ ಮನೆಗೆ ಬಂದು ಏನೇ ಕೇಳಿದರೂ ಉತ್ತರ ಕೊಡಬೇಡಿ. ಇದನ್ನು ಹೇಳುವ ಸಲುವಾಗಿ ಕೇಂದ್ರ ಸರಕಾರದ ವಿರುದ್ಧ ಜ.23ರಿಂದ ನೇತಾಜಿ ಸುಭಾಷ್ ಚಂದ್ರಬೋಸರ ಜನ್ಮದಿನದ ಅಂಗವಾಗಿ ಅಸಹಕಾರ ಚಳವಳಿ ಹಮ್ಮಿಕೊಳ್ಳಲಾಗಿದೆ. ಜ.26ನೇ ದಿವಸವನ್ನು ಸಂವಿಧಾನದ ಶಪಥ ದಿನವನ್ನಾಗಿ ಆಚರಿಸಲಾಗುವುದು. ಹಾಗೂ ಜ.30ರಂದು ಗಾಂಧೀಜಿ ಕೊಂದವರ ವಿರುದ್ದ ದೇಶಾದ್ಯಂತ ಪ್ರತಿಭಟನೆ ಮಾಡಲಾಗುವುದು.
-ಸೀತಾರಾಮ್ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News