'ಮಾನಸಿಕ ಅಸ್ವಸ್ಥ' ಘೋಷಣೆ ಹಿಂದೆ ಪೂರ್ವಯೋಜಿತ ತಂತ್ರ: ಎಸ್‍ಡಿಪಿಐ ಮುಖಂಡ ಅಬ್ದುಲ್ ಮಜೀದ್

Update: 2020-01-24 17:16 GMT

ಮೈಸೂರು,ಜ.24: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಆರೋಪಿ ಆದಿತ್ಯರಾವ್ ಎಂಬಾತನ ಬಗ್ಗೆ ಕರ್ನಾಟಕ ರಾಜ್ಯ ಗೃಹ ಸಚಿವರು ಹಠಾತ್ತನೇ ಆತ ಮಾನಸಿಕ ಅಸ್ವಸ್ಥನೆಂದು ಘೋಷಿಸುವ ಹಿಂದೆ ಪೂರ್ವಯೋಜಿತ ತಂತ್ರಗಳು ಅಡಗಿವೆ. ಹಾಗಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಬ್ ಪ್ರಕರಣ ಸುದ್ದಿಯಾದ ತಕ್ಷಣ ಟಿವಿ ಮಾಧ್ಯಮಗಳು 'ಮುಸ್ಲಿಮ್ ಉಗ್ರ, ಇಸ್ಲಾಂ ಉಗ್ರ' ಇತ್ಯಾದಿ ಹಾಗೂ ಮಂದಿರಗಳಿಗೂ ಬಾಂಬ್ ಇಟ್ಟು ಸ್ಫೋಟಿಸುವ ಸಂಚು ಹಾಗೂ ಜಾಲ ಕಾರ್ಯವೆಸಗುತ್ತಿದೆ' ಎಂಬಿತ್ಯಾದಿ ವದಂತಿಗಳನ್ನು ಪ್ರಸಾರ ಮಾಡಿವೆ. ಕೆಲವು ಪತ್ರಿಕೆಗಳು ಸಹ ಇಂತಹ ಆಕ್ಷೇಪಕಾರೀ ಹಾಗೂ ಕೋಮುದ್ವೇಷ ಪ್ರಚೋದನೆಯ ವಿಷಯಗಳನ್ನು ಪ್ರಸಾರ ಮಾಡಿವೆ. ಇದು ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಎಂದು ಹೇಳಿದರು.

ಬಾಂಬ್ ಆರೋಪಿ ಆದಿತ್ಯರಾವ್ ಎಂದು ತಿಳಿದಾಕ್ಷಣ ಟಿವಿ ವಾಹಿನಿಗಳು, ಪತ್ರಿಕೆಗಳು ರಾಗ ಬದಲಿಸಿದ್ದು ಅದು ಪಟಾಕಿಯೆಂದೂ, ಆತನು ಮಾನಸಿಕ ಅಸ್ವಸ್ಥನೆಂದೂ ವರ್ಣಿಸಿವೆ. ಆದಿತ್ಯರಾವ್‍ನಿಗಾಗಿ ಉಡುಪಿ, ಮಂಗಳೂರು, ಮಣಿಪಾಲ ಮುಂತಾದೆಡೆಗಳಲ್ಲಿ ಜಾಲಾಡಿದ ಪೊಲೀಸರಿಗೆ ಆತನನ್ನು ಪತ್ತೆ ಮಾಡಲು ಸಾಧ್ಯವಾಗದಿರುವುದು ಹಾಗೂ ಆದಿತ್ಯ ರಾವ್ ರಾತ್ರಿ ಪ್ರಯಾಣಿಸಿ ಬೆಂಗಳೂರು ತೆರಳಿ ಪೊಲೀಸರ ಮುಂದೆ ಶರಣಾಗಿರುವುದು ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡವಿರುವುದು ವ್ಯಕ್ತವಾಗುತ್ತಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸುವ ಕೃತ್ಯದ ಹಿಂದೆ ಯಾವ ಭಯೋತ್ಪಾದಕ ಶಕ್ತಿಗಳು ಇವೆ ಹಾಗೂ ಇದರ ಸೂತ್ರಧಾರರು ಯಾರು ಮತ್ತು ಕೆಲವು ಮಾಧ್ಯಮಗಳ ಭಯೋತ್ಪಾದನಾ ಮನೋಭಾವವನ್ನು ಕಠಿಣ ತನಿಖೆಗೊಳಪಡಿಸಬೇಕು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೇಜವಾಬ್ದಾರಿಯುತ ಹೇಳಿಕೆಯನ್ನು ನೀಡಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗೃಹ ಸಚಿವ ಸ್ಥಾನಕ್ಕೆ ಅನರ್ಹರಾಗಿದ್ದು ಕೂಡಲೇ ರಾಜೀನಾಮೆ ನೀಡಬೇಕೆಂದು ಅಬ್ದುಲ್ ಮಜೀದ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ಜಿಲ್ಲಾ ಮುಖಂಡರಾದ ಮನ್ಸೂರ್ ಮತ್ತು ಝಕಾ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News