ಕೋಮುವಾದಿಗಳು ದೇಶವನ್ನು ಮಹಾ ಭಾರತವನ್ನಾಗಿಸಲು ಹೊರಟಿದ್ದಾರೆ: ಸಾಹಿತಿ ರಂಜಾನ್ ದರ್ಗಾ

Update: 2020-01-25 17:24 GMT

ಮೈಸೂರು,ಜ.25: ಇಂದು ಕೋಮುವಾದಿಗಳು ಹಾಗೂ ಉಗ್ರಗಾಮಿಗಳು ದೇಶವನ್ನು ಮಹಾ ಭಾರತವನ್ನಾಗಿಸಲು ಹೊರಟಿದ್ದಾರೆ ಎಂದು ಸಾಹಿತಿ ರಂಜಾನ್ ದರ್ಗಾ ಆತಂಕ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ '70 ವರ್ಷಗಳ ಗಣರಾಜ್ಯ ನಡಿಗೆಯಲ್ಲಿ ಅಂಬೇಡ್ಕರ್ ಚಿಂತನೆಗಳ ಒಳಗೊಳ್ಳುವಿಕೆ' ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಬಸವಣ್ಣ ಕರ್ನಾಟಕದ ಬುದ್ಧನಾಗಿದ್ದು, ಇಡೀ ಬಸವ ತತ್ವ ಬೌದ್ಧ ಧರ್ಮದ ಸಾರದಲ್ಲಿ ಅಡಗಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಭಾರತ ಭಾರತವಾಗಿಯೇ ಉಳಿಯಬೇಕು. ಒಂದು ವೇಳೆ ಮಹಾಭಾರತವಾದರೆ ದೇಶದಲ್ಲಿ ಉಗ್ರಗಾಮಿಗಳು ಹೆಚ್ಚಾಗುತ್ತಾರೆ. ಈ ದೇಶ ಹಿಂದೂಗಳದ್ದೂ ಅಲ್ಲ. ಮುಸ್ಲಿಮರದ್ದೂ ಅಲ್ಲ. ಬದಲಿಗೆ ಯುವಕರ ದೇಶ ಎಂದು ಅಭಿಪ್ರಾಯಪಟ್ಟರು.

ಭಾರತದ ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಒಳಗೊಳ್ಳುವಿಕೆ ಇದೆ. ವೈದಿಕ ಮತ್ತು ಅವೈದಿಕ ಮಧ್ಯದ ನಡೆದ ತೀವ್ರವಾದ ಸಂಘರ್ಷದಿಂದ ನಮ್ಮ ಸಂವಿಧಾನ ರಚನೆಯಾಗಿದೆ. ಮಹಾಭಾರತದಲ್ಲಿಯೇ ಕೌರವರು ಮತ್ತು ಪಾಂಡವರು ನಡುವೆ ಯುದ್ಧದ ಸಂದರ್ಭದಲ್ಲಿ ಚಾರ್ವಾಕರು ಎರಡು ಬಣಕ್ಕೂ ಯುದ್ಧ ಮಾಡುವುದು ಬೇಡ ಅಮಾಯಕರು ತೊಂದರೆ ಅನುಭವಿಸುತ್ತಾರೆ ಎಂದು ಹೇಳುತ್ತಾರೆ. ಆದರೆ ಅವರಿಬ್ಬರು ಚಾರ್ವಾಕರನ್ನೆ ಹತ್ಯೆ ಮಾಡಿದರು ಎಂದರು.

ದೇಶದಲ್ಲಿ ಬೌದ್ಧ ಹಾಗೂ ವಚನ ಸಾಹಿತ್ಯಗಳು ವೈದಿಕ ಸಾಹಿತ್ಯದ ಹಂಗಿಲ್ಲದ ಸಾಹಿತ್ಯಗಳಾಗಿವೆ. ತಳ ಸಮುದಾಯದಿಂದ ಬಂದ ಬಾಬಾ ಸಾಹೇಬ್ ಅಂಬೇಡ್ಕರ್ ಅಂತಹ ವ್ಯಕ್ತಿ ರಚಿಸಿರುವ ಸಂವಿಧಾನ ಇಡೀ ವಿಶ್ವದಲ್ಲೇ ಏಕೈಕ ಸಂವಿಧಾನ, ಸಂವಿಧಾನದ ರಚನೆಗಾಗಿ ದಿನಾ 18 ಗಂಟೆಗಳನ್ನು ಮೀಸಲಿಟ್ಟು ತಮ್ಮ ಆರೋಗ್ಯದ ಬಗ್ಗೆ ಚಿಂತಿಸದೆ ದೇಶದ ಬಡವರು ಮಹಿಳೆಯರು ಹಾಗೂ ಕಾರ್ಮಿಕರ ಪರವಾಗಿ ಹೋರಾಡಿದರು. ತಮ್ಮ ಜೀವನದಲ್ಲಿ ಜನಪರ ವಿಚಾರಗಳಲ್ಲಿ ಯಾರೊಂದಿಗೂ ರಾಜಿಯನ್ನೆ ಮಾಡಿಕೊಳ್ಳದ ರಾಷ್ಟ್ರ ನಾಯಕರಾಗಿದ್ದರು ಎಂದು ಹೇಳಿದರು.

ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಎಂ.ಮಾದಯ್ಯ ಮಾತಾನಾಡಿ, ಅಂಬೇಡ್ಕರ್ ಸಾಮಾಜಿಕ, ಆರ್ಥಿಕ ನ್ಯಾಯಗಳ ಪರ ಹೋರಾಟ ನಡೆಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಇರುವವರೆಗೂ ಅವರು ಜೀವಂತವಾಗಿರುತ್ತಾರೆ. ಅವರ ವಿವೇಚನೆಯಿಂದ ಭಾರತದಲ್ಲಿ ಹಣಕಾಸು ಆಯೋಗ 1951 ರಲ್ಲಿ ಅಸ್ತಿತ್ವಕ್ಕೆ ಬಂತು. ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳನ್ನು ನಡೆಸಿದ್ದರು. ಆರ್ಥಿಕ ಅಸಮಾನೆ ಹೋಗಲಾಡಿಸಲು ಬಡವರಿಗೆ ಕಡಿಮೆ ಟ್ಯಾಕ್ಸ್ ಹಾಕುವಂತೆ ಧ್ವನಿ ಎತ್ತಿದ್ದರು. ಅವರ ವಿಚಾರಗಳು ಮತ್ತು ಚಿಂತನೆಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಿದೆ. ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ದೊರೆಯಿತು. ಅದಕ್ಕೆ ಬೇಸರ ಪಡಬಾರದು ಅವರಿಗೆ ಬಿ.ಆರ್ ಎನ್ನುವುದರಲ್ಲೇ ಭಾರತ ರತ್ನ ಹುಟ್ಟಿನಿಂದೆ ಬಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜಿ.ಸೋಮಶೇಖರ್, ಸಂಯೋಜಕ ಡಾ.ಎಸ್. ನರೇಂದ್ರ ಕುಮಾರ್ ಹಾಗೂ ಸಂದರ್ಶಕ ಪ್ರಾಧ್ಯಾಪಕ ದೇವನೂರು ಬಸವರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News