ಲಾರಿ - ಕಾರು ಮುಖಾಮುಖಿ ಢಿಕ್ಕಿ: ದಂಪತಿ ಸ್ಥಳದಲ್ಲೇ ಮೃತ್ಯು

Update: 2020-01-27 15:08 GMT

ಕಾರವಾರ: ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಗಂಭೀರ ಗಾಯಗಳಾದ ಘಟನೆ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ. 

ಮೂಲತಃ ಕುಮಟಾದ, ಪ್ರಸ್ತುತ ಗೋವಾದಲ್ಲಿ ನೆಲೆಸಿರುವ ವಿಷ್ಣು ನಾಯ್ಕ (45) ವಿದ್ಯಾ ನಾಯ್ಕ (40) ಮೃತ ದಂಪತಿ. ಸ್ವಾನಿ ನಾಯ್ಕ (9), ವೈಷ್ಣವಿ ನಾಯ್ಕ (16) ಗಂಭೀರ ಗಾಯಗೊಂಡ ಬಾಲಕಿಯರು. ರಾಷ್ಟ್ರೀಯ ಹೆದ್ದಾರಿ ಮೂಲಕ ಕುಮಟಾದಿಂದ ಕಾರವಾರ ಮಾರ್ಗದತ್ತ ಸಾಗುತ್ತಿದ್ದ ಆಲ್ಟೋ ಕಾರು ಹಾಗೂ ಅಂಕೋಲಾ ಕಡೆಗೆ ಸಾಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. 

ಅಪಘಾತದಲ್ಲಿ ದಂಪತಿಗಳು ಸ್ಥಳದಲ್ಲೇ ಮೃತಪಟ್ಟಿದ್ದು ಕಾರಿನ ಹಿಂಭಾಗದಲ್ಲಿ ಕುಳಿತ ಬಾಲಕಿ ಸ್ವಾನಿ ಬಲಗೈ ತುಂಡಾಗಿದೆ. ವೈಷ್ಣವಿ ಕಾಲು ಹಾಗೂ ಮುಖಕ್ಕೆ ಗಂಬೀರ ಗಾಯಗಳಾಗಿದೆ. ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ಗಾಯಗೊಂಡ ಇಬ್ಬರು ಬಾಲಕಿಯರನ್ನು ತಕ್ಷಣ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹೆದ್ದಾರಿಯಲ್ಲಿ ಅಪಘಾತ ಸಂಬಂಧಿಸಿರುವುದರಿಂದ ಹೆದ್ದಾರಿಯಲ್ಲಿ ಸ್ವಲ್ಪ ಸಮಯ ಸಂಚಾರ ಅಸ್ಥವ್ಯಸ್ತವಾಗಿದೆ. ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News