ಯುಕೆಪಿ ಯೋಜನೆಗೆ 20 ಸಾವಿರ ಕೋಟಿ ಮೀಸಲಿಡಲು ಮುಖ್ಯಮಂತ್ರಿಗೆ ಮನವಿ: ಗೋವಿಂದ ಕಾರಜೋಳ

Update: 2020-01-29 17:51 GMT

ಬೆಂಗಳೂರು. ಜ.29: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಅನುಷ್ಠಾನಕ್ಕಾಗಿ 2020-21ನೆ ಆಯವ್ಯದಲ್ಲಿ ಪ್ರತ್ಯೇಕವಾಗಿ 20 ಸಾವಿರ ಕೋಟಿ ರೂ. ಅನುದಾನವನ್ನು ಆದ್ಯತೆ ಮೇರೆಗೆ ಮೀಸಲಿಡುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಆಯವ್ಯಯ ಪೂರ್ವ ಸಭಾ ಸಭೆಯಲ್ಲಿ ಮನವಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಬಾಗಲಕೋಟೆ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ಅನ್ನು ಅನುಷ್ಠಾನಗೊಳಿಸಲು ಮುಂಬರುವ ಆಯವ್ಯಯದಲ್ಲಿ ಪ್ರತ್ಯೇಕ ಅನುದಾನವನ್ನು ಮೀಸಲಿಟ್ಟರೆ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗುತ್ತದೆ. ಹಂಚಿಕೆಯಾದ ನೀರಿನ ಪ್ರಮಾಣ 130 ಟಿಎಂಸಿ ನೀರನ್ನು ಬಳಸಲು ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆಗಾಗಿ ಎಫ್‌ಆರ್‌ಎಲ್ 519.60 ಮೀ. ನಿಂದ ಎಫ್ ಆರ್ ಎಲ್ 524.256 ಮೀ. ಎತ್ತರಿಸಿದಾಗ 9 ಯೋಜನೆಗಳ ಅಡಿಯಲ್ಲಿ 7 ಜಿಲ್ಲೆಗಳನ್ನು ಒಳಪಟ್ಟು 5.30 ಲಕ್ಷ ಹೆಕ್ಟರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದು ಹೇಳಿದರು.

ಪರಿಷ್ಕೃತ ಯೋಜನಾ ವರದಿಯಂತೆ 51,148 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ, ಬಿಟಿಡಿಎಗೆ 30,143 ಕೋಟಿ ರೂ. ಸೇರ್ಪಡೆಗೊಂಡಿದೆ. ಮುಳುಗಡೆಯಾಗಲಿರುವ 20 ಗ್ರಾಮಗಳು ಹಾಗು ಬಾಗಲಕೋಟೆ ಪಟ್ಟಣದ 10 ವಾರ್ಡ್‌ಗಳನ್ನು ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಬೇಕಿದೆ. ಕಾಲುವೆಗಳ ನಿರ್ಮಾಣ, ಪುನರ್ವಸತಿ ಹಾಗೂ ಮುಳುಗಡೆಯಾಗಲಿರುವ ಜಮೀನು ಸೇರಿ ಒಟ್ಟು 1,33,867 ಜಮೀನು ಅವಶ್ಯಕತೆಯಿದೆ ಎಂದರು.

ಯೋಜನೆಯನ್ನು ಕಾಲುಮಿಯೊಳಗೆ ಪೂರ್ಣಗೊಳಿಸಲು 100 ಅಧಿಕಾರಿ/ ಸಿಬ್ಬಂದಿ ವರ್ಗದವರು ಅವಶ್ಯಕತೆ ಇದೆ. ಈಗಿರುವ ಅಧಿಕಾರಿಗಳ ಜೊತೆಗೆ ಹೆಚ್ಚುವರಿಯಾಗಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಹಾಗೂ ಪುನರ್ವಸತಿ ಅಧಿಕಾರಿಗಳನ್ನು ನಿಯೋಜಿಸಬೇಕಿದೆ. ಭೂ ಪರಿಹಾರ ಕೋರಿ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತುರ್ತು ವಿಲೇವಾರಿಗಾಗಿ ಲೋಕ ಅದಾಲತ್‌ನಲ್ಲಿ ವಿಲೇವಾರಿ ಮಾಡುವಂತೆ ಕ್ರಮಕೈಗೊಳ್ಳಬೇಕಿದೆ. ಯೋಜನೆಯ ಅನುಷ್ಠಾನ ಈಗಾಗಲೇ ವಿಳಂಭವಾಗಿದ್ದು, ಇದೇ ರೀತಿ ಮುಂದುವರೆದರೆ ಇನ್ನೂ ಹೆಚ್ಚು ಆರ್ಥಿಕ ಹೊರೆಯಾಗಲಿದೆ. ಯೋಜನೆಯನ್ನು ಕಾಲುಮಿಯೊಳಗೆ ಅನುಷ್ಠಾನಗೊಳಿಸಲು ಹಾಗೂ ಆರ್ಥಿಕ ಹೊರೆಯನ್ನು ಇದನ್ನು ತಪ್ಪಿಸಲು ಸೂಕ್ತ ಅನುದಾನ ಹಾಗೂ ಅಧಿಕಾರಿ ವರ್ಗದವರನ್ನು ಆದ್ಯತೆಯ ಮೇರೆಗೆ ನಿಯೋಜಿಸಬೇಕೆಂದು ಮನವಿ ಮಾಡಲಾಗುವುದು ಎಂದರು. ಸಭೆಯಲ್ಲಿ ಶಾಸಕರು, ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News