‘ಸಿಡಿ' ಆಚರಣೆಗೆ ಕುಮ್ಮಕ್ಕು ಆರೋಪ: ಶಾಸಕ ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2020-01-29 18:01 GMT

ಬೆಂಗಳೂರು, ಜ. 29: ಹೊನ್ನಾಳಿ ತಾಲೂಕಿನ ಕೆಂಚಿಕೊಪ್ಪದಲ್ಲಿ ನಡೆದ ಸಿಡಿ ಉತ್ಸವದಲ್ಲಿ ದಲಿತ ಮಹಿಳೆಯರನ್ನು ಕಂಬಕ್ಕೆ ಕಟ್ಟಿ ನೇತುಹಾಕಿ ತೂಗಿಸುವ ಅಮಾನುಷ ಆಚರಣೆಗೆ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಅವರ ಕುಮ್ಮಕ್ಕು ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಆಗ್ರಹಿಸಿದೆ.

ಶಾಸಕ ರೇಣುಕಾಚಾರ್ಯ ಸಿಡಿ ಆಚರಣೆಗೆ ತಾವೇ ಚಾಲನೆ ಕೊಟ್ಟದ್ದಲ್ಲದೆ, ಈ ಅಮಾನವೀಯ, ಅಪಾಯಕಾರಿ ಅಚರಣೆಯನ್ನು ಸಮರ್ಥಿಸಿದ್ದಾರೆ. ಸಿಡಿ ಆಚರಣೆ ಒಂದು ಮೌಢ್ಯ ಮಾತ್ರವಲ್ಲ, ಅದು ಅಪಾಯಕಾರಿ. ಅದು ದಲಿತ ಮಹಿಳೆಯರನ್ನು ಅಪಮಾನಿಸುವ ಮತ್ತು ಅವರನ್ನು ಅಪಾಯಕ್ಕೆ ನೂಕುವ ಒಂದು ಅನಿಷ್ಟ ಪದ್ಧತಿ. ಇತ್ತೀಚೆಗೆ ತಾನೆ ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರಕಾರವು ಅಪಾಯಕಾರಿ, ಅಮಾನವೀಯ ಮೌಢ್ಯಗಳ ಆಚರಣೆಯನ್ನು ನಿಷೇಧಿಸುವ ಕಾಯ್ದೆ ರೂಪಿಸಿ, ಅದನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಈ ಕಾಯ್ದೆ ಪ್ರಕಾರ ಸಿಡಿ ಆಚರಣೆಯು ನಿಷೇಧಿಸಲ್ಪಟ್ಟಿದೆ. ಅದೊಂದು ಶಿಕ್ಷಾರ್ಹ ಅಪರಾಧ. ಸಿಡಿ ಆಚರಣೆಗೆ ಕುಮ್ಮಕ್ಕು ಕೊಡುವುದು ಅಪರಾಧ ಎಂದು ತಿಳಿಸಲಾಗಿದೆ. ಮೌಢ್ಯ ವಿರೋಧಿ ಕಾಯ್ದೆ ದೇಶದ ಪ್ರಜೆಗಳೆಲ್ಲರಿಗೂ ಅನ್ವಯವಾಗುತ್ತದೆ. ತಮ್ಮದೆ ಸರಕಾರ ರೂಪಿಸಿರುವ ಕಾನೂನನ್ನು ಸಮರ್ಪಕವಾಗಿ ಜಾರಿ ಮಾಡಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿರುತ್ತದೆ. ಹೀಗಾಗಿ ರೇಣುಕಾಚಾರ್ಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News