ಮಾನಸಿಕ ಸ್ಥಿಮಿತ ಕಳೆದುಕೊಂಡ ಹೆಗಡೆಯನ್ನು ಬಿಜೆಪಿಯವರು ನಿಮ್ಹಾನ್ಸ್ ಗೆ ಸೇರಿಸಲಿ: ವಿ.ಎಸ್.ಉಗ್ರಪ್ಪ

Update: 2020-02-01 16:57 GMT

ಬೆಂಗಳೂರು, ಫೆ.1: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬ್ರಿಟಿಷರು ಹೇಳಿದಂತಹ ರೀತಿಯಲ್ಲಿ ಹೋರಾಟ ಮಾಡಿದರು. ಅವರು ಸ್ವಾತಂತ್ರ ಹೋರಾಟಗಾರರಲ್ಲ ಎನ್ನುವ ಮೂಲಕ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಉದ್ಧಟತನ ಹಾಗೂ ಮತಿಗೆಟ್ಟ ಹೇಳಿಕೆಯನ್ನು ನೀಡಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಕಿಡಿಗಾರಿದ್ದಾರೆ.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನವನ್ನು ಕಿತ್ತು ಹಾಕಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಈ ಹಿಂದೆ ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದ ಅನಂತಕುಮಾರ್ ಹೆಗಡೆ, ಈಗ ಗಾಂಧೀಜಿ ಬಗ್ಗೆ ತಲೆಹರಟೆಯ ಮಾತುಗಳನ್ನು ಆಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಂತ ಕುಮಾರ್ ಹೆಗಡೆ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು. ಬಿಜೆಪಿ ನಾಯಕರಿಗೆ ಅವರ ಬಗ್ಗೆ ಕಾಳಜಿಯಿದ್ದರೆ ಈ ಕೂಡಲೇ ಅವರನ್ನು ನಿಮ್ಹಾನ್ಸ್ ಅಥವಾ ಬೇರೆ ಎಲ್ಲಾದರೂ ಚಿಕಿತ್ಸೆ ಕೊಡಿಸಲಿ. ಅಲ್ಲದೇ, ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆ ಬಗ್ಗೆ ತನ್ನ ನಿಲುವು ಏನು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದರು.

ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸರಕಾರ ಜೀವಂತವಾಗಿದ್ದರೆ ದೇಶದ್ರೋಹಿ, ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿರುವ ಅನಂತಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿ, ಜೈಲಿಗಟ್ಟಬೇಕಿತ್ತು ಎಂದು ಉಗ್ರಪ್ಪ ಹೇಳಿದರು.

ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸತ್ಯಾಗ್ರಹ ಹಾಗೂ ಅಹಿಂಸಾ ವಾದದಿಂದಾಗಿ, ಇಡೀ ವಿಶ್ವದಲ್ಲಿ ನಮ್ಮ ದೇಶಕ್ಕೆ ಅತ್ಯಂತ ಗೌರವಯುತವಾದ ಸ್ಥಾನವಿದೆ. ಅನಂತಕುಮಾರ್ ಹೆಗಡೆ ಗಾಂಧೀಜಿಯನ್ನು ಅವಮಾನಿಸುವ ಮೂಲಕ ಇಡೀ ದೇಶದ ಗೌರವವನ್ನು ಗೌಣ ಮಾಡುವ ಕೆಲಸ ಮಾಡಿದ್ದಾರೆ ಎಂದು ಅವರು ದೂರಿದರು.

ಸ್ವಾತಂತ್ರ ಹೋರಾಟದಲ್ಲಿ ಆರೆಸೆಸ್ಸ್‌ನವರು ಗಾಂಧೀಜಿಯ ವಿರುದ್ಧವಾಗಿದ್ದರು. ಆದುದರಿಂದ, ಇವತ್ತು ಅದೇ ಧಾಟಿಯಲ್ಲಿ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಬಿಜೆಪಿಯವರೇ ನಿಜವಾದ ದೇಶ್ರೋಹಿಗಳು, ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿಗಳು. ಜನತೆ ಇದನ್ನೆಲ್ಲ ಗಮನಿಸುತ್ತಿದ್ದು, ಅವರಿಗೆ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಉಗ್ರಪ್ಪ ಹೇಳಿದರು.

ಕಾಂಗ್ರೆಸ್ ಪಕ್ಷ ಗಾಂಧೀಜಿಯ ತತ್ವದ ಮೇಲೆ ನಂಬಿಕೆ ಇಟ್ಟಿದ್ದರೆ, ಬಿಜೆಪಿ ಗೋಡ್ಸೆಯ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಸಿಎಎ ವಿರುದ್ಧ ಮಾತನಾಡುವವರಿಗೆ ನಾಯಿಗೆ ಬಡಿದಂತೆ ಬಡಿಯುತ್ತೇವೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಹೇಳುತ್ತಾರೆ. ಪ್ರಧಾನಿ, ಉತ್ತರಪ್ರದೇಶದ ಉಪಮುಖ್ಯಮಂತ್ರಿ ಅಥವಾ ಸಿಎಎ ವಿರುದ್ಧ ಮಾತನಾಡಿದರೆ ಗುಂಡು ಹೊಡೆಯುತ್ತೇವೆ ಎಂದು ಉತ್ತರ ಪ್ರದೇಶದ ಸಚಿವರು ಹೇಳಿಕೆ ಕೊಡುತ್ತಾರೆ ಎಂದು ಅವರು ಕಿಡಿಗಾರಿದರು.

ಕೇಂದ್ರ ಸರಕಾರದ ಹಣಕಾಸು ರಾಜ್ಯ ಸಚಿವ, ನಮ್ಮ ರಾಜ್ಯದ ಸಚಿವರಾದ ಆರ್.ಅಶೋಕ್, ಸಿ.ಟಿ.ರವಿ ಸಿಎಎ ವಿರುದ್ಧ ಮಾತನಾಡುವವರಿಗೆ ಗುಂಡು ಹೊಡೆಯಬೇಕು ಎನ್ನುತ್ತಾರೆ. ಶಾಸಕ ಸೋಮಶೇಖರ ರೆಡ್ಡಿ, ಬೆಂಗಳೂರು ದಕ್ಷಿಣ ಸಂಸದ ಇದೇ ಧಾಟಿಯಲ್ಲಿ ಮಾತನಾಡುತ್ತಾರೆ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಿರಾಶಾದಾಯಕ ಬಜೆಟ್: ದೇಶದ ಆರ್ಥಿಕ ಪರಿಸ್ಥಿತಿ ಅತ್ಯಂತ ಡೋಲಾಯಮಾನವಾಗಿದೆ. ಜಿಡಿಪಿ ಶೇ.3.5ಕ್ಕೆ ಕುಸಿದಿದೆ. ಹಸಿವಿನಿಂದ ನರಳುತ್ತಿರುವ ರಾಷ್ಟ್ರಗಳ ಪೈಕಿ ಭಾರತ 103ನೆ ಸ್ಥಾನದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿರುವ ರಾಷ್ಟ್ರಗಳಲ್ಲಿ 51ನೇ ಸ್ಥಾನಕ್ಕೆ ಜಿಗಿದಿರುವುದು ಜಾಗತಿಕ ಸಮೀಕ್ಷೆಯಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಐದು ವರ್ಷಗಳಲ್ಲಿ ಶೇ.71ರಷ್ಟು ಸಾಲದ ಪ್ರಮಾಣ ಹೆಚ್ಚಾಗಿದೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಆದರೆ, ಈಗಿರುವ ಉದ್ಯೋಗಗಳೇ ಉಳಿಯುತ್ತಿಲ್ಲ. ಈಗಾಗಲೇ ಸುಮಾರು ಒಂದು ಕೋಟಿ ಉದ್ಯೋಗ ನಷ್ಟವಾಗಿದೆ. ದೇಶವನ್ನು ಕತ್ತಲಲ್ಲಿ ಇಡುವ ದುರುದ್ದೇಶದ ಪ್ರಯತ್ನವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಹೇಳಿದರು.

ಬಜೆಟ್‌ನಲ್ಲಿ ವೆಚ್ಚ 30.42 ಲಕ್ಷ ಕೋಟಿ ರೂ.(30 ಲಕ್ಷ 42 ಸಾವಿರದ 230 ಕೋಟಿ ರೂ.)ಎಂದು ಹೇಳಿದ್ದಾರೆ. ಆರು ಲಕ್ಷ ಕೋಟಿ ರೂ.ಆದಾಯದ ಕೊರತೆಯಿದೆ. 91 ಲಕ್ಷ ಕೋಟಿ ರೂ.ಸಾಲವಿದೆ. ಇದನ್ನು ಹೇಗೆ ತೀರಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News