ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕೈ ಜೋಡಿಸಲು ಕಲಬುರಗಿ ಜಿಲ್ಲಾಧಿಕಾರಿ ಮನವಿ
ಕಲಬುರಗಿ, ಫೆ.3: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರವರಿ 5 ರಿಂದ 7ರವರೆಗೆ ನಡೆಯಲಿರುವ 85ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಿಗರೆಲ್ಲರೂ ಬಿಚ್ಚು ಮನಸ್ಸಿನಿಂದ ಪಾಲ್ಗೊಂಡು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಶರತ್ ಬಿ. ಮನವಿ ಮಾಡಿದ್ದಾರೆ.
ನಗರದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಿದ್ಧಪಡಿಸಲಾಗಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ಬಳಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ನುಡಿ ಹಬ್ಬದ ಆಚರಣೆ ನಮ್ಮ ಹಬ್ಬವೆಂಬ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು, ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಎಲ್ಲರಿಗೂ ಆಮಂತ್ರಣ ನೀಡಲಾಗಿದೆ. ಇದರಲ್ಲಿ ಯಾರಿಗೂ ನಿರ್ಲಕ್ಷ ಮಾಡಿಲ್ಲ. ಬಿಚ್ಚು ಮನಸ್ಸಿನಿಂದ ಸರ್ವರೂ ನುಡಿ ಜಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಕೋರಿದರು.
ನಗರದಲ್ಲಿರುವ ಅಂಗಡಿ ಮುಂಗಟ್ಟುಗಳ ಮಾಲಕರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳ ಮುಂದೆ ತಳಿರು ತೋರಣ ಕಟ್ಟಿ, ರಂಗೋಲಿ ಹಾಕಿ ಅಲಂಕಾರ ಮಾಡಬೇಕು. ಜಿಲ್ಲೆಯಲ್ಲಿ ಹಬ್ಬದ ಕಳೆ ತರಬೇಕು. ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಒಟ್ಟು 16 ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯ ಎಲ್ಲ ಸದಸ್ಯರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಮುಖ್ಯ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳಿಗೆ ಯಾವುದೇ ಸಮಸ್ಯೆ ಬಾರದಂತೆ ಈಗಾಗಲೇ ಎಚ್ಚರ ವಹಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿರುವವರೆಗೆ ವಸತಿ ಹಾಗೂ ಸಾರಿಗೆಯ ವ್ಯವಸ್ಥೆಯನ್ನು ಅಚ್ಟುಕಟ್ಟಾಗಿ ರೂಪಿಸಲಾಗಿದೆ ಎಂದು ಶರತ್ ತಿಳಿಸಿದರು.
ಅತಿಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಗರದಲ್ಲಿ 60 ಹೊಟೇಲ್ಗಳು, 17 ಶಾಲೆಗಳು, 10 ಕಲ್ಯಾಣ ಮಂಟಪಗಳು, 12 ವಸತಿ ನಿಲಯಗಳು, 9 ಅತಿಥಿ ಗೃಹಗಳು, 5 ಸರಕಾರಿ ವಸತಿ ಗೃಹಗಳನ್ನು ಬಳಸಿಕೊಳ್ಳಲಾಗಿದೆ. ಅವರೆಲ್ಲರಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆಗಳಲ್ಲಿ ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತಿದಿನ ಒಬ್ಬರನ್ನು ಪ್ರದರ್ಶನದ ಅತ್ಯುತ್ತಮ ವ್ಯಕ್ತಿ ಎಂದು ಸಮಿತಿಯಿಂದ ಘೋಷಿಸಲಾಗುವುದು ಎಂದು ಶರತ್ ಹೇಳಿದರು. ಆಹಾರ ಸಮಿತಿಯಿಂದ 150 ಕೌಂಟರ್ಗಳನ್ನು ತೆರೆದಿದ್ದು, ನೋಂದಾಯಿಸಿ ಕೊಂಡವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಮಾಧ್ಯಮದವರಿಗೆ ಕಂಪ್ಯೂಟರ್, ವೈಫೈ, ಊಟದ ವ್ಯವಸ್ಥೆ, ಮಾಧ್ಯಮ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ನಗರದಲ್ಲಿರುವ ಕಂಪೌಂಡ್ ಹಾಗೂ ಗೋಡೆಗಳನ್ನು ಸಿಂಗಾರಗೊಳಿಸಿ ಪೇಂಟಿಂಗ್ ಮತ್ತು ಚಿತ್ರಕಲೆಗಳ ಮೂಲಕ ಸಾರ್ವಜನಿಕರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತಿದೆ. ಸಾರ್ವಜನಿಕರು ಈ ಗೋಡೆಗಳ ಮೇಲೆ ಪೋಸ್ಟರ್, ಬ್ಯಾನರ್ ಸೇರಿದಂತೆ ಮತ್ತಿತರ ವಸ್ತುಗಳನ್ನು ಅಂಟಿಸಿ ವಿರೂಪಗೊಳಿಸದಂತೆ ಹಾಗೂ ಅವುಗಳನ್ನು ಸ್ವಚ್ಛವಾಗಿ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ನಗರ ಪೊಲೀಸ್ ಆಯುಕ್ತ ಡಾ. ಎಂ.ಎನ್.ನಾಗರಾಜ್ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಿರ್ವಹಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ರೂಪಿಸಲಾಗಿದೆ. ಅದಕ್ಕಾಗಿ 4000 ಪೊಲೀಸರು, 3+1 ಪೊಲೀಸ್ ವರಿಷ್ಠಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಅಲ್ಲದೆ, 15 ಎಸಿಪಿ, 25 ಸರ್ಕಲ್ ಇನ್ಸ್ಪೆಕ್ಟರ್, 200 ಸಬ್ಇನ್ಸ್ಪೆಕ್ಟರ್, 10 ಕೆಎಸ್ಆರ್ಪಿ ತುಕಡಿ, 500 ಹೋಂ ಗಾರ್ಡ್, 700 ಟ್ರಾಫಿಕ್ ಪೊಲೀಸ್ ಹಾಗೂ 500 ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಎಲ್ಲ ಸ್ಥಳಗಳಲ್ಲಿ ಸಿ.ಸಿ. ಟಿ.ವಿ. ಅಳವಡಿಸಲಾಗಿದೆ ಎಂದು ನಾಗರಾಜ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ, ಭೂ ದಾಖಲೆಗಳ ಉಪನಿರ್ದೇಶಕ ಶಂಕರ್ ಖಾದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.